ಮುರುಘಾ ಮಠದ ಸಿಇಒ ಆಗಿದ್ದ ಉದ್ಯಮಿ ಭರತ್‌ ಕುಮಾರ್ ವಿರುದ್ಧ ನ್ಯಾಯಾಂಗ ನಿಂದನೆ ಕೈಬಿಟ್ಟ ಹೈಕೋರ್ಟ್‌

ತಮ್ಮ ವಕೀಲ ಆರ್ ಸುಬ್ರಹ್ಮಣ್ಯ ಅವರ ಮುಖಾಂತರ ಪೀಠಕ್ಕೆ ಬೇಷರತ್‌ ಕ್ಷಮೆ ಪತ್ರ ಸಲ್ಲಿಸಿದ ಭರತ್‌ ಕುಮಾರ್‌. ಇದನ್ನು ದಾಖಲಿಸಿಕೊಂಡ ಪೀಠವು ವಿಚಾರಣೆ ಕೈಬಿಟ್ಟಿರುವುದಾಗಿ ಆದೇಶಿಸಿತು.
Karnataka High Court
Karnataka High Court

ಚಿತ್ರದುರ್ಗ ಮುರುಘಾ ಮಠದ, ಎಸ್‌ಜೆಎಂ ವಿದ್ಯಾಪೀಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರೂ ಆಗಿದ್ದ ಉದ್ಯಮಿ ಎಂ ಭರತ್‌ ಕುಮಾರ್ ವಿರುದ್ಧದ ಕ್ರಿಮಿನಲ್ ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಸೋಮವಾರ ಕೈಬಿಟ್ಟಿದೆ.

ಚಿತ್ರದುರ್ಗ ಜಿಲ್ಲಾ ನ್ಯಾಯಾಧೀಶರ ವರ್ಗಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದ ಭರತ್‌ ಕುಮಾರ್ ವಿರುದ್ಧ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಸ್ವಯಂ ಪ್ರೇರಿತ ಕ್ರಿಮಿನಲ್ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಭರತ್‌ ಕುಮಾರ್ ಅವರಿಗೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ ಸಮನ್ಸ್‌ ಜಾರಿಗೊಳಿಸಿತ್ತು.

ಸೋಮವಾರ ಖುದ್ದು ನ್ಯಾಯಾಲಯಕ್ಕೆ ಹಾಜರಾಗಿದ್ದ ಭರತ್‌ ಕುಮಾರ್, ತಮ್ಮ ವಕೀಲ ಆರ್ ಸುಬ್ರಹ್ಮಣ್ಯ ಅವರ ಮುಖಾಂತರ ಪೀಠಕ್ಕೆ ಬೇಷರತ್‌ ಕ್ಷಮೆ ಪತ್ರ ಸಲ್ಲಿಸಿದರು. ಇದನ್ನು ದಾಖಲಿಸಿಕೊಂಡ ಪೀಠವು ವಿಚಾರಣೆ ಕೈಬಿಟ್ಟಿರುವುದಾಗಿ ಆದೇಶಿಸಿತು.

ನಿಂದನೆ ಏನು?: ಪೋಕ್ಸೊ ವಿವಿಧ ಸೆಕ್ಷನ್‌ಗಳ ಆರೋಪದಡಿ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರು ಜೈಲು ಸೇರಿದ ನಂತರ ರಾಜ್ಯ ಸರ್ಕಾರ ನಿವೃತ್ತ ಐಎಎಸ್‌ ಅಧಿಕಾರಿ ಪಿ ಎಸ್ ವಸ್ತ್ರದ್‌ ಅವರನ್ನು 2022ರ ಡಿಸೆಂಬರ್ 13ರಂದು ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿತ್ತು. ಇದಕ್ಕೂ ಮುನ್ನ 2022ರ ಡಿಸೆಂಬರ್ 2ರಂದು ಎಸ್‌ಜೆಎಂ ವಿದ್ಯಾಪೀಠದ ಕಾರ್ಯ ನಿರ್ವಹಣಾಧಿಕಾರಿಯಾಗಿ ಎಂ ಭರತ್‌ ಕುಮಾರ್ ಅವರನ್ನು ಶರಣರು ನೇಮಕ ಮಾಡಿದ್ದರು.

ಸರ್ಕಾರದ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ ಮಠದ ತಾತ್ಕಾಲಿಕ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಮತ್ತು ಭಕ್ತರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ವಸ್ತ್ರದ್‌ ಅವರು ಆರು ತಿಂಗಳ ಅವಧಿ ನಂತರ ಹುದ್ದೆಯಿಂದ ತೆರವಾಗಿದ್ದರು. ಈ ಕುರಿತ ಮೇಲ್ಮನವಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠವು, ಮಠಕ್ಕೆ ತಾತ್ಕಾಲಿಕ ಆಡಳಿತಾಧಿಕಾರಿಯನ್ನಾಗಿ ಚಿತ್ರದುರ್ಗ ಜಿಲ್ಲಾ ಪ್ರಧಾನ ನ್ಯಾಯಾಧೀಶರನ್ನು ನೇಮಕ ಮಾಡಿ ಆದೇಶಿಸಿತ್ತು.

ಕಾನೂನು ಹೋರಾಟದ ಹಲವು ಬೆಳವಣಿಗೆಗಳ ಸಮಯದಲ್ಲೇ ಚಿತ್ರದುರ್ಗ ಜಿಲ್ಲಾ ಪ್ರಧಾನ ನ್ಯಾಯಾಧೀಶರಾಗಿದ್ದ ಬಿ.ಎಸ್‌.ರೇಖಾ ಅವರನ್ನು ವರ್ಗಾವಣೆ ಮಾಡಿ ಹೈಕೋರ್ಟ್‌ ಆದೇಶಿಸಿತ್ತು. ‘ಈ ವರ್ಗಾವಣೆಯನ್ನು ತಡೆಯಬೇಕು ಮತ್ತು ಮಠದ ಆಡಳಿತದ ಹಿತದೃಷ್ಟಿಯಿಂದ ಅವರನ್ನು ಇಲ್ಲಿಯೇ ಉಳಿಸಬೇಕು‘ ಎಂದು ಕೋರಿ ಎಂ ಭರತ್‌ ಕುಮಾರ್‌ 2023ರ ಡಿಸೆಂಬರ್ 15ರಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದರು.

ಹೈಕೋರ್ಟ್‌ ಇದನ್ನು ಗಂಭೀರವಾಗಿ ಪರಿಗಣಿಸಿತ್ತು. ‘ನ್ಯಾಯಾಧೀಶರ ವರ್ಗಾವಣೆ ಹೈಕೋರ್ಟ್ ಆಡಳಿತಕ್ಕೆ ಸಂಬಂಧಿಸಿದ್ದು, ಇಂತಹ ಸೂಕ್ಷ್ಮ ವಿಷಯದಲ್ಲಿ ಎಂ ಭರತ್‌ ಕುಮಾರ್ ಮೂಗು ತೂರಿಸಿದ್ದಾರೆ. ನ್ಯಾಯಾಂಗದ ಘನತೆಗೆ ಅಗೌರವ ಉಂಟು ಮಾಡಿದ್ದಾರೆ. ಸಂಸ್ಥೆಗೆ ಕೆಟ್ಟ ಹೆಸರು ತರಲು ಕಾರಣರಾಗಿದ್ದು ಗುರುತರ ನ್ಯಾಯಾಂಗ ನಿಂದನೆ ಎಸಗಿದ್ದಾರೆ. ಇದು ನ್ಯಾಯಾಂಗ ನಿಂದನೆ ಕಾಯಿದೆ ಸೆಕ್ಷನ್‌ 2ರ ಅನುಸಾರ ಕ್ರಿಮಿನಲ್ ಅಪರಾಧ ಎಂದು ಆರೋಪಿಸಿ ರಿಜಿಸ್ಟ್ರಾರ್ ಜನರಲ್ 2024ರ ಜನವರಿ 3ರಂದು ದೂರು ದಾಖಲಿಸಿದ್ದರು. ಇದರ ಆಧಾರದಲ್ಲಿ ಅವರಿಗೆ ಸಮನ್ಸ್‌ ಜಾರಿಗೊಳಿಸಲಾಗಿತ್ತು.

Related Stories

No stories found.
Kannada Bar & Bench
kannada.barandbench.com