[ಸಹಕಾರ ಕಾಯಿದೆ] ಐದು ಸಾಮಾನ್ಯ ಸಭೆ ಪೈಕಿ ಮೂರರಲ್ಲಿ ಸದಸ್ಯರು ಭಾಗಿಯಾಗದಿದ್ದರೆ ಮತದಾನದ ಹಕ್ಕು ರದ್ದು: ಹೈಕೋರ್ಟ್‌

ಆಗಸ್ಟ್‌ 4ರಿಂದ ಈ ಮನವಿಯ ವಿಲೇವಾರಿಯಾದ ಬಳಿಕ ತಿದ್ದುಪಡಿ ಮಾಡಲಾದ ನಿಬಂಧನೆಗಳು ಚುನಾವಣೆಗಳಿಗೆ ಅನ್ವಯವಾಗಲಿವೆ ಎಂದು ನ್ಯಾ. ಪಿ ಎಸ್‌ ದಿನೇಶ್‌ ಕುಮಾರ್‌ ನೇತೃತ್ವದ ಏಕಸದಸ್ಯ ಪೀಠವು ಹೇಳಿದೆ.
[ಸಹಕಾರ ಕಾಯಿದೆ] ಐದು ಸಾಮಾನ್ಯ ಸಭೆ ಪೈಕಿ ಮೂರರಲ್ಲಿ ಸದಸ್ಯರು ಭಾಗಿಯಾಗದಿದ್ದರೆ ಮತದಾನದ ಹಕ್ಕು ರದ್ದು: ಹೈಕೋರ್ಟ್‌

ಹಲವು ಸೇವೆಗಳ ಬಳಕೆಗೆ ಸಂಬಂಧಿಸಿದ ಕರ್ನಾಟಕ ಸಹಕಾರ ಸೊಸೈಟಿಗಳ ಕಾಯಿದೆ 1959ರ ಸೆಕ್ಷನ್‌ 20 (2) (a-v) ಯ ಸಾಂವಿಧಾನಿಕ ಸಿಂಧುತ್ವವನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ಎತ್ತಿ ಹಿಡಿದಿದೆ. ಈ ನಿಬಂಧನೆಯ ಪ್ರಕಾರ ಸದಸ್ಯರು ಐದು ಸಾಮಾನ್ಯ ಸಭೆಗಳ ಪೈಕಿ ಮೂರು ಸಭೆಗಳಲ್ಲಿ ಭಾಗವಹಿಸದಿದ್ದರೆ, ಸತತ ಮೂರು ಸಹಕಾರಿ ವರ್ಷಗಳವರೆಗೆ ಇಂತಹ ಕನಿಷ್ಠ ಸೇವೆಗಳನ್ನು ಬಳಸಿಕೊಳ್ಳುವಲ್ಲಿ ವಿಫಲವಾದರೆ, ಬೈಲಾದಲ್ಲಿ ಉಲ್ಲೇಖಿಸಿರುವಂತೆ ಸದಸ್ಯರು ಸಾಮಾನ್ಯ ಸಭೆ ಮತ್ತು ಸದಸ್ಯರ ಆಯ್ಕೆಯ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕು ಕಳೆದುಕೊಳ್ಳಲಿದ್ದಾರೆ.

ತಿದ್ದುಪಡಿ ಕಾಯಿದೆಯನ್ನು ಪ್ರಶ್ನಿಸಿ ಹಲವು ಸಹಕಾರ ಸೊಸೈಟಿಗಳ ಸದಸ್ಯರು ಸಲ್ಲಿಸಿದ್ದ ಮನವಿಗಳನ್ನು ನ್ಯಾಯಮೂರ್ತಿ ಪಿ ಎಸ್‌ ದಿನೇಶ್‌ ಕುಮಾರ್‌ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ. ಆಗಸ್ಟ್‌ 4ರಿಂದ ಈ ಮನವಿಯ ವಿಲೇವಾರಿಯಾದ ಬಳಿಕ ತಿದ್ದುಪಡಿ ಮಾಡಲಾದ ನಿಬಂಧನೆಗಳು ಚುನಾವಣೆಗಳಿಗೆ ಅನ್ವಯವಾಗಲಿವೆ ಎಂದು ಪೀಠ ಹೇಳಿದೆ.

“2013ರ ಜನವರಿ 10ರಂದು ತಿದ್ದುಪಡಿ ಮಾಡಲಾದ ಕಾಯಿದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಕಾಯಿದೆ 2013ರಿಂದ ಅಸ್ತಿತ್ವದಲ್ಲಿದ್ದರೂ 2018ರ ವರೆಗೆ ಅದನ್ನು ಜಾರಿಗೊಳಿಸಲಾಗಿಲ್ಲ ಎಂದು ಅರ್ಜಿದಾರರ ವಕೀಲರು ಹೇಳಿದ್ದಾರೆ. ಆ ಬಳಿಕ, ನ್ಯಾಯಾಲಯದಲ್ಲಿ ಹಲವು ರಿಟ್‌ ಮನವಿಗಳನ್ನು ಸಲ್ಲಿಸಲಾಗಿದೆ. ಈ ಮಧ್ಯೆ, ನ್ಯಾಯಾಲಯವು ಮಧ್ಯಂತರ ಆದೇಶದ ಮೂಲಕ ಸದಸ್ಯರಿಗೆ ಮತದಾನ ಮಾಡಲು ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಐದು ವರ್ಷಗಳ ಕಾಲ ತಿದ್ದುಪಡಿ ಮಾಡಲಾದ ಕಾಯಿದೆಯನ್ನು ಜಾರಿಗೊಳಿಸಲಾಗಿಲ್ಲ ಹಾಗೂ ಈ ನ್ಯಾಯಾಲಯ ಮಧ್ಯಂತರ ರಕ್ಷಣೆ ನೀಡಿದ್ದು, ಅರ್ಜಿದಾರರ ವಕೀಲರ ಕೋರಿಕೆಯ ಅರ್ಹತೆಯನ್ನು ಪರಿಗಣಿಸಲಾಗಿದೆ. ಏಕೆಂದರೆ, ಮಧ್ಯಂತರ ಆದೇಶದ ಅನ್ವಯ ಸೊಸೈಟಿಯ ಸದಸ್ಯರು ಚುನಾವಣೆಗಳಲ್ಲಿ ಭಾಗವಹಿಸಿದ್ದು, ಹಲವರು ಜಯಶಾಲಿಯಾಗಿದ್ದಾರೆ. ಸಂಬಂಧಿತ ಸೊಸೈಟಿಗಳ ಸದಸ್ಯರ ಕ್ರಮವನ್ನು ಕಾಪಾಡದಿದ್ದರೆ ಇದು ಗೊಂದಲದ ಪರಿಸ್ಥಿತಿಗೆ ನಾಂದಿ ಹಾಡಲಿದೆ” ಎಂದು ಪೀಠ ಹೇಳಿದೆ.

Also Read
ಹೆದ್ದಾರಿಯಲ್ಲಿ ದೀಪಗಳ ಅಳವಡಿಕೆ: ವಕೀಲ ರಮೇಶ್‌ ನಾಯಕ್‌ಗೆ ವಿಧಿಸಿದ್ದ ರೂ ₹50 ಸಾವಿರ ದಂಡದ ಆದೇಶ ಹಿಂಪಡೆದ ಹೈಕೋರ್ಟ್‌

ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ಆಕ್ಷೇಪಣೆಗಳಲ್ಲಿ ಎಲ್ಲಿಯೂ ಶಾಸನಾತ್ಮಕ ಸಾಮರ್ಥ್ಯಕ್ಕೆ ಯಾವುದೇ ಸವಾಲು ಒಡ್ಡಲಾಗಿಲ್ಲ ಎಂಬುದನ್ನು ನ್ಯಾಯಾಲಯವು ಗಮನಿಸಿತು. 97ನೇ ತಿದ್ದುಪಡಿ ಆಧರಿಸಿ ಆಕ್ಷೇಪಣೆ ಸಲ್ಲಿಸಲಾಗಿದೆ ಎಂಬುದನ್ನು ಹೊರತುಪಡಿಸಿ ತಿದ್ದುಪಡಿ ಕಾಯಿದೆಯ ಸೆಕ್ಷನ್‌ 20 (a-iv) ಮತ್ತು (a-v) ಸ್ವಾಗತಾರ್ಹ ಎಂದು ಅರ್ಜಿದಾರರ ವಕೀಲರು ಹೇಳಿರುವುದನ್ನೂ ನ್ಯಾಯಾಲಯವು ತನ್ನ ಆದೇಶದಲ್ಲಿ ದಾಖಲಿಸಿತು.

ತಡಕಲ್‌ ಮಹಿಳಾ ಹಾಲು ಉತ್ಪಾದಕರ ಸಹಕಾರ ಸೊಸೈಟಿ ಲಿಮಿಟೆಡ್‌ ವರ್ಸಸ್‌ ಕರ್ನಾಟಕ ರಾಜ್ಯ ಪ್ರಕರಣದಲ್ಲಿ ಈಗಾಗಲೇ ನ್ಯಾಯಾಲಯವು ತಿದ್ದುಪಡಿ ಕಾಯಿದೆಯ ಸೆಕ್ಷನ್‌ 20 (2) (a-iv) ಎತ್ತಿ ಹಿಡಿದಿದೆ. ಇದರಲ್ಲಿ ಸದಸ್ಯ ಅಥವಾ ಪ್ರತಿನಿಧಿ ಕನಿಷ್ಠ ಮೂರು ಸಭೆಗಳಲ್ಲಿ ಭಾಗವಹಿಸಿದ್ದರೆ ಮತದಾನದ ಹಕ್ಕು ಉಳಿಯಲಿದೆ ಎಂದು ಹೇಳಲಾಗಿದೆ.

Related Stories

No stories found.
Kannada Bar & Bench
kannada.barandbench.com