ಐಪಿಎಸ್‌ ಅಧಿಕಾರಿ ಚಂದ್ರಶೇಖರ್‌ಗೆ ಎಚ್‌ಡಿಕೆ ಬೆದರಿಕೆ ಪ್ರಕರಣ: ಎಸ್‌ಐಟಿ ಮನವಿಯಂತೆ ಆದೇಶದಲ್ಲಿ ಹೈಕೋರ್ಟ್‌ ಮಾರ್ಪಾಡು

ಲೋಕಾಯುಕ್ತ ಎಸ್‌ಐಟಿಯ ಸಾಯಿ ವೆಂಕಟೇಶ್ವರ ಅಕ್ರಮ ಗಣಿಗಾರಿಕೆ ಪ್ರಕರಣದ ಬಗ್ಗೆ ಮಾತನಾಡುವುದಿಲ್ಲ. ಲೋಕಾಯುಕ್ತ ದಾಖಲಿಸಿರುವ ಪ್ರಕರಣದ ಸಂಬಂಧ ಮಾಡಲಾಗಿರುವ ನಿರ್ಬಂಧ ಆದೇಶವು ಇಂದಿನಿಂದ ಚಾಲ್ತಿಯಲ್ಲಿರುವುದಿಲ್ಲ ಎಂದು ಸ್ಪಷ್ಟಪಡಿಸಿದ ಹೈಕೋರ್ಟ್‌.
IPS officer M Chandrashekar , H D Kumaraswamy & Karnataka HC
IPS officer M Chandrashekar , H D Kumaraswamy & Karnataka HC
Published on

ಕರ್ನಾಟಕ ಲೋಕಾಯುಕ್ತ ವಿಶೇಷ ಪೊಲೀಸ್‌ ತನಿಖಾ ದಳದ (ಎಸ್‌ಐಟಿ) ಮುಖ್ಯಸ್ಥ ಎಂ ಚಂದ್ರಶೇಖರ್‌ ಅವರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಲೋಕಾಯುಕ್ತ ಎಸ್‌ಐಟಿ ಮನವಿಯಂತೆ ಮಧ್ಯಂತರ ಆದೇಶದಲ್ಲಿ ಶುಕ್ರವಾರ ಮಾರ್ಪಾಡು ಮಾಡಿರುವ ಕರ್ನಾಟಕ ಹೈಕೋರ್ಟ್‌, ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಮತ್ತಿರರ ವಿರುದ್ಧದ ತಡೆಯಾಜ್ಞೆ ವಿಸ್ತರಿಸಿ ಆದೇಶಿಸಿದೆ.

ಈ ಹಿನ್ನೆಲೆಯಲ್ಲಿ ಸಾಯಿ ವೆಂಕಟಕೇಶ್ವರ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಕುಮಾರಸ್ವಾಮಿ ವಿರುದ್ಧ ಮುಂದುವರಿಯಲು ಲೋಕಾಯುಕ್ತ ಎಸ್‌ಐಟಿಗೆ ಇದ್ದ ಅಡ್ಡಿ ನಿವಾರಣೆಯಾಗಿದ್ದು, ಜೆಡಿಎಸ್‌ ನಾಯಕನಿಗೆ ಮುಂದಿನ ದಿನಗಳಲ್ಲಿ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಸಂಜಯನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಆಧರಿಸಿ ದಶಕದ ಹಿಂದೆ ಕುಮಾರಸ್ವಾಮಿ ಅವರಿಗೆ ಮಂಜೂರು ಮಾಡಿರುವ (ಸಾಯಿ ವೆಂಕಟೇಶ್ವರ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ) ನಿರೀಕ್ಷಣಾ ಜಾಮೀನು ರದ್ದತಿ ಕೋರಬಾರದು. ಒಂದೊಮ್ಮೆ ಈಗಾಗಲೇ ನಿರೀಕ್ಷಣಾ ಜಾಮೀನು ರದ್ದತಿ ಕೋರಿದ್ದರೆ ಅದರಲ್ಲಿ ಮುಂದುವರಿಯದಂತೆ ಪ್ರಾಸಿಕ್ಯೂಷನ್‌ಗೆ ನಿರ್ಬಂಧಿಸಲಾಗಿದೆ ಎಂದು ಮಾಡಿರುವ ಮಧ್ಯಂತರ ಆದೇಶದಲ್ಲಿ ಮಾರ್ಪಾಡು ಮಾಡುವಂತೆ ಕೋರಿ ಲೋಕಾಯುಕ್ತ ಎಸ್‌ಐಟಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯೆರೂರ್‌ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

“ಲೋಕಾಯುಕ್ತ ದಾಖಲಿಸಿರುವ ಪ್ರಕರಣದ ಸಂಬಂಧ ಮಾಡಲಾಗಿರುವ ನಿರ್ಬಂಧ ಆದೇಶವು ಇಂದಿನಿಂದ ಚಾಲ್ತಿಯಲ್ಲಿರುವುದಿಲ್ಲ. ಇನ್ನು ಮುಂದೆ ಲೋಕಾಯುಕ್ತ ಎಸ್‌ಐಟಿಯು 2014ರಲ್ಲಿ ದಾಖಲಿಸಿರುವ ಜಂತಕಲ್‌ ಗಣಿಗಾರಿಕೆ ಪ್ರಕರಣದ ಭಾಗವಾದ ಸಾಯಿ ವೆಂಕಟೇಶ್ವರ ಅಕ್ರಮ ಗಣಿಗಾರಿಕೆ ಪ್ರಕರಣದ ಬಗ್ಗೆ ನ್ಯಾಯಾಲಯವು ಮಾತನಾಡುವುದಿಲ್ಲ. ಸಂಜಯನಗರ ಠಾಣೆಯಲ್ಲಿ ದಾಖಲಾಗಿರುವ ಬೆದರಿಕೆ ಪ್ರಕರಣಕ್ಕೆ ಮಾತ್ರ ಸೀಮಿತವಾಗಿ ಮಾತನಾಡಲಾಗುವುದು” ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಕುಮಾರಸ್ವಾಮಿ ಪರ ಹಿರಿಯ ವಕೀಲ ಹಷ್ಮತ್‌ ಪಾಷಾ ಅವರು “ಹಾಲಿ ಪ್ರಕರಣದಲ್ಲಿ ಅವರು ಪಕ್ಷಕಾರರಲ್ಲ. ಹೀಗಾಗಿ, ಲೋಕಾಯುಕ್ತ ಎಸ್‌ಐಟಿ ಸಲ್ಲಿಸಿರುವ ಅರ್ಜಿಗಳನ್ನು ವಜಾ ಮಾಡಲಾಗಿದೆ” ಎಂದು ಆದೇಶದಲ್ಲಿ ದಾಖಲಿಸಬೇಕು ಎಂದರು.

“ಇದಕ್ಕೆ ಪೀಠವು ಮೆರಿಟ್‌ ಮೇಲೆ ಮಧ್ಯಂತರ ಅರ್ಜಿಗಳನ್ನು ನಿರ್ಧರಿಸಲಾಗಿಲ್ಲ. ಮೆರಿಟ್‌ ಮೇಲೆ ನಿರ್ಧರಿಸಿದರೆ ಫೈಂಡಿಂಗ್ಸ್‌ ನೀಡಬೇಕಾಗುತ್ತದೆ. ಲೋಕಾಯುಕ್ತ ಎಸ್‌ಐಟಿಯನ್ನು ಪಕ್ಷಕಾರರನ್ನಾಗಿ ಮಾಡದೇ ಅವರ ವಿರುದ್ಧ ಮಧ್ಯಂತರ ಆದೇಶ ಮಾಡಲಾಗಿದೆ. ಈಗ ಅರ್ಜಿ ಇತ್ಯರ್ಥವಾಗಿರುವುದರಿಂದ ಅವರನ್ನು ಪಕ್ಷಕಾರರನ್ನಾಗಿ ಮಾಡುವ ಅಗತ್ಯವಿಲ್ಲ” ಎಂದು ಸ್ಪಷ್ಟಪಡಿಸಿತು.

ಇದಕ್ಕೂ ಮುನ್ನ, ಲೋಕಾಯುಕ್ತ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ವೆಂಕಟೇಶ್‌ ಅರಬಟ್ಟಿ ಅವರು “ಸಂಜಯನಗರದಲ್ಲಿ ದಾಖಲಾಗಿರುವ ಬೆದರಿಕೆ ಪ್ರಕರಣಕ್ಕೂ ಸಾಯಿ ವೆಂಕಟೇಶ್ವರ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. 6.11.2024 ರಂದು ಮಾಡಿರುವ ಆದೇಶ ಲೋಕಾಯುಕ್ತವು ನಿರೀಕ್ಷಣಾ ಜಾಮೀನು ರದ್ದತಿ ಕೋರಿರುವುದಕ್ಕೆ ಅಡ್ಡಿಯಾಗಿದೆ. ವಿಶೇಷ ನ್ಯಾಯಾಲಯದ ಮುಂದೆ ನಿರೀಕ್ಷಣಾ ಜಾಮೀನು ರದ್ದತಿ ಕೋರಿರುವ ಅರ್ಜಿಯಲ್ಲಿ ಆಧಾರಗಳನ್ನು ಉಲ್ಲೇಖಿಸಲಾಗಿದೆ. ನಿರೀಕ್ಷಣಾ ಜಾಮೀನು ರದ್ದತಿಗೆ ಆರು ಬೇರೆ ಆಧಾರಗಳಿವೆ. ಇದರಿಂದ ಲೋಕಾಯುಕ್ತದ ಪ್ರಕ್ರಿಯೆಗೆ ನೇರವಾಗಿ ಅಡ್ಡಿಯಾಗಿದ್ದು, ಮುಂದಿನ ಪ್ರಕ್ರಿಯೆ ನಡೆಸಲಾಗುತ್ತಿಲ್ಲ. ಹಾಗಾಗಿ ಮಧ್ಯಂತರ ಆದೇಶದಲ್ಲಿ 'ಪ್ರಾಸಿಕ್ಯೂಷನ್‌ʼ ಪದವನ್ನು ಸರಿಯಾದ ರೀತಿಯಲ್ಲಿ ವ್ಯಾಖ್ಯಾನಿಸಿ, ಆದೇಶ ಮಾರ್ಪಾಡಿಸಬೇಕು” ಎಂದು ಕೋರಿದರು.

ಕುಮಾರಸ್ವಾಮಿ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಹಷ್ಮತ್‌ ಪಾಷಾ ಅವರು “ಈ ಪ್ರಕ್ರಿಯೆಗೆ ಲೋಕಾಯುಕ್ತ ಎಸ್‌ಐಟಿ ಅಗತ್ಯ ಪಕ್ಷಕಾರರಲ್ಲ ಮತ್ತು ಅವರು ಆದೇಶದಲ್ಲಿ ಮಾರ್ಪಾಡು ಕೋರಲು ಸೂಕ್ತವಾದವರಲ್ಲ. ಈ ಕಾರಣಕ್ಕಾಗಿ ಎರಡೂ ಅರ್ಜಿಗಳನ್ನು ವಜಾ ಮಾಡಬೇಕು” ಎಂದು ಕೋರಿದರು.

Also Read
ಐಪಿಎಸ್‌ ಅಧಿಕಾರಿ ಚಂದ್ರಶೇಖರ್‌ಗೆ ಎಚ್‌ಡಿಕೆ ಬೆದರಿಕೆ: ಆದೇಶದಲ್ಲಿ ಮಾರ್ಪಾಡು ಕೋರಿ ಹೈಕೋರ್ಟ್‌ ಎಡತಾಕಿದ ಲೋಕಾಯುಕ್ತ

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಕುಮಾರಸ್ವಾಮಿ ಅವರ ವಿರುದ್ಧ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಅಂದು ನ್ಯಾಯಾಲಯಕ್ಕೆ ಭರವಸೆ ನೀಡಲಾಗಿತ್ತು. ಆದರೆ, ಅಂದು ಲೋಕಾಯುಕ್ತ ಎಸ್‌ಐಟಿ ನ್ಯಾಯಾಲಯದ ಮುಂದೆ ಇರಲಿಲ್ಲ. ಲೋಕಾಯುಕ್ತದ ವಿಚಾರದಲ್ಲಿ ನಾವು ಮುಚ್ಚಳಿಕೆ ನೀಡಲಾಗದು. ಅದಾಗ್ಯೂ, ಬೆದರಿಕೆ ಪ್ರಕರಣ ರದ್ದತಿ ಕೋರಿರುವ ಸಂಬಂಧ ಈಗಲೇ ವಾದ ಮಂಡಿಸಲು ಸಿದ್ಧವಾಗಿದ್ದೇನೆ” ಎಂದರು.

ವಾದ-ಪ್ರತಿವಾದ ಆಲಿಸಿದ ಪೀಠವು ಮಧ್ಯಂತರ ಆದೇಶದಲ್ಲಿ ಮಾರ್ಪಾಡು, ಲೋಕಾಯುಕ್ತ ಮಧ್ಯಂತರ ಅರ್ಜಿಗಳನ್ನು ಇತ್ಯರ್ಥಪಡಿಸಿತು.

Kannada Bar & Bench
kannada.barandbench.com