ಸಂತ್ರಸ್ತೆ ಅಪಹರಣ ಪ್ರಕರಣ: ಭವಾನಿ ನಿರೀಕ್ಷಣಾ ಜಾಮೀನು ಅರ್ಜಿಯ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಎಲ್ಲರೂ ಭವಾನಿಗೆ ಒಂದಲ್ಲಾ ಒಂದು ರೀತಿಯಲ್ಲಿ ಸಂಬಂಧಿಗಳಾಗಿದ್ದು, ಎಲ್ಲರೂ ಇಡೀ ಪ್ರಕರಣದ ಪಿತೂರಿದಾರೆ ಭವಾನಿ ಎಂದು ಹೇಳಿಕೆ ನೀಡಿದ್ದಾರೆ ಎಂದು ವಾದಿಸಿದ ಪ್ರಾಸಿಕ್ಯೂಷನ್.
Bhavani Revanna and Karnataka HC
Bhavani Revanna and Karnataka HC
Published on

ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಪ್ರಮುಖ ಆರೋಪಿ ಎನ್ನಲಾದ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿಯ ಆದೇಶವನ್ನು ಕಾಯ್ದಿರಿಸಿರುವ ಕರ್ನಾಟಕ ಹೈಕೋರ್ಟ್‌, ಈಗ ಮಂಜೂರು ಮಾಡಿರುವ ಮಧ್ಯಂತರ ಜಾಮೀನು ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಆದೇಶಿಸಿದೆ.

ಭವಾನಿ ರೇವಣ್ಣ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ಏಕಸದಸ್ಯ ಪೀಠ ನಡೆಸಿತು.

ರಾಜ್ಯ ಸರ್ಕಾರದ ಪರವಾಗಿ ಸುಮಾರು ಎರಡು ತಾಸು ವಾದಿಸಿದ ವಿಶೇಷ ಸರ್ಕಾರಿ ಅಭಿಯೋಜಕರಾದ ಪ್ರೊ. ರವಿವರ್ಮ ಕುಮಾರ್‌ ಅವರು “ಭವಾನಿ ತನಿಖೆಗೆ ಸಹಕರಿಸುತ್ತಿಲ್ಲ. ತನಿಖಾಧಿಕಾರಿಗಳು ಕೇಳುವ ಎಲ್ಲಾ ಪ್ರಶ್ನೆಗಳಿಗೂ ಹಾರಿಕೆ ಉತ್ತರ ನೀಡಿದ್ದಾರೆ. ಇಡೀ ಪ್ರಕರಣದ ಮಾಸ್ಟರ್‌ ಮೈಂಡ್‌ ಭವಾನಿಯಾಗಿದ್ದು, ಅಪಹರಣ ಪ್ರಕರಣದ ಎಲ್ಲಾ ಆರೋಪಿಗಳ ಜೊತೆಯೂ ಆಕೆ ಸಂಪರ್ಕದಲ್ಲಿದ್ದರು ಎಂಬುದನ್ನು ಆಕೆಯ ಕರೆ ದಾಖಲೆ ದೃಢಪಡಿಸಿದೆ” ಎಂದರು.

“ಸಂತ್ರಸ್ತೆಯನ್ನು ಅಪಹರಿಸಿದ ಬೆನ್ನಿಗೇ ತನ್ನ ಮೊಬೈಲ್‌ನಿಂದ ಕರೆ ಮಾಡುವುದನ್ನು ನಿಲ್ಲಿಸಿರುವ ಭವಾನಿ ಅವರು ಬೇರೆ ಫೋನ್‌ ಬಳಕೆ ಮಾಡಲಾರಂಭಿಸಿದ್ದಾರೆ. ಇದಲ್ಲದೇ, ಏಳು ಮಂದಿ ಸಂತ್ರಸ್ತೆ ಮಹಿಳೆಯರು ಆಕೆಯ ಜಾಲದಲ್ಲಿದ್ದಾರೆ. ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಎಲ್ಲರೂ ಭವಾನಿಗೆ ಒಂದಲ್ಲಾ ಒಂದು ರೀತಿಯಲ್ಲಿ ಸಂಬಂಧಿಗಳಾಗಿದ್ದು, ಎಲ್ಲರೂ ಇಡೀ ಪ್ರಕರಣದ ಪಿತೂರಿದಾರೆ ಭವಾನಿ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ, ಆಕೆಯನ್ನು ಬಂಧಿಸಿ ವಿಚಾರಣೆ ಒಳಪಡಿಸುವ ಅಗತ್ಯವಿದೆ” ಎಂದರು.

“ಸರಣಿ ಅತ್ಯಾಚಾರಿಯಾದ ಆಕೆಯ ಪುತ್ರ ಇಂಥ ದುಷ್ಕೃತ್ಯ ನಡೆಸಿದ್ದಾನೆ ಎಂಬುದನ್ನು ತಿಳಿದುಕೊಳ್ಳುವುದು ಆಕೆಯ ಕರ್ತವ್ಯವಲ್ಲವೇ? ಅವರದ್ದೇ ಮನೆಯಲ್ಲಿ ಇಂಥ ಕೃತ್ಯ ನಡೆದಿದ್ದರೆ ಸುಮ್ಮನಿರುತ್ತಿದ್ದರೇ? ಅಮಾಯಕ ಹೆಣ್ಣು ಮಕ್ಕಳು ಸಂಕಷ್ಟದಲ್ಲಿದ್ದಾರೆ. ಪುತ್ರ ಪ್ರಜ್ವಲ್‌ನನ್ನು ರಕ್ಷಿಸಲು ಸಂತ್ರಸ್ತೆಯನ್ನು ಅಪಹರಿಸುವ ಸಂಚನ್ನು ಭವಾನಿ ರೂಪಿಸಿದ್ದಾರೆ. ಹೈಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡುವವರೆಗೂ ಆಕೆ ಎಸ್‌ಐಟಿ ಅಧಿಕಾರಿಗಳಿಂದ ತಲೆಮರೆಸಿಕೊಂಡಿದ್ದರು. ಈಗ ಮೊಬೈಲ್‌ ಫೋನ್‌ ಅನ್ನು ತನಿಖಾಧಿಕಾರಿಗಳಿಗೆ ನೀಡುತ್ತಿಲ್ಲ. ಒಟ್ಟಾರೆ ಇಡೀ ತನಿಖಾ ಪ್ರಕ್ರಿಯೆಯನ್ನು ದಾರಿತಪ್ಪಿಸುವ ಯತ್ನ ಮಾಡುವ ಮೂಲಕ ಕಾನೂನು ಪ್ರಕ್ರಿಯೆಗೆ ಅಡ್ಡಿಪಡಿಸುತ್ತಿದ್ದಾರೆ. ಹೀಗಾಗಿ, ಆಕೆಯ ಬಂಧನ ಮಾಡಿ, ತನಿಖೆ ನಡೆಸುವುದು ತೀರ ಅಗತ್ಯ” ಎಂದು ಪ್ರತಿಪಾದಿಸಿದರು.

“ಭವಾನಿ ಸಾಮಾನ್ಯ ವ್ಯಕ್ತಿಯಲ್ಲ. ಮಾಜಿ ಪ್ರಧಾನಿಯ ಸೊಸೆ, ಮಾಜಿ ಸಚಿವ ಹಾಲಿ ಶಾಸಕ ರೇವಣ್ಣ ಅವರ ಪತ್ನಿ, ಪುತ್ರ ಸಂಸದರಾಗಿದ್ದವರು, ರಾಜಕೀಯವಾಗಿ ಬಲಾಢ್ಯ ಕುಟುಂಬದ ಹೆಣ್ಣು ಮಗಳು ಎಂಬುದನ್ನು ಮರೆಮಾಚಲಾಗದು. ಇಲ್ಲಿ ಸಂಕಷ್ಟದಲ್ಲಿರುವುದು ಸಾಮಾನ್ಯ ಹೆಣ್ಣು ಮಕ್ಕಳು ಎಂಬುದನ್ನು ನ್ಯಾಯಾಲಯ ಮನಗಾಣಬೇಕು” ಎಂದು ಒತ್ತಿ ಹೇಳಿದರು.

ಇದಕ್ಕೆ ಆಕ್ಷೇಪಿಸಿ ವಾದಿಸಿದ ಭವಾನಿ ಪರ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ಭವಾನಿ ಅವರನ್ನು ಕಸ್ಟಡಿಗೆ ಪಡೆದು ತನಿಖೆ ಏಕೆ ಮಾಡಬೇಕು ಎಂಬುದನ್ನು ಸರ್ಕಾರ ಹೇಳಬೇಕು? ಡಿಜಿಟಲ್‌ ದಾಖಲೆಯನ್ನು ತನಿಖಾಧಿಕಾರಿ ಸಂಗ್ರಹಿಸಿದ್ದಾರೆ. ತನಿಖಾಧಿಕಾರಿಯ ಮುಂದೆ ಹಾಜರಾದಾಗ ಆಕೆ ಬಳಸುತ್ತಿರುವ ಸಿಮ್‌ ಕಾರ್ಡ್‌ ಯಾರ ಹೆಸರಿನಲ್ಲಿ ಎಂದು ಹೇಳಿಲ್ಲ ಎಂದು ಎಸ್‌ಪಿಪಿ ಹೇಳಿದ್ದಾರೆ. ಮೂರು ದಿನ ಅವರು ತನಿಖಾಧಿಕಾರಿಯ ಮುಂದೆ ಹಾಜರಾಗಿದ್ದಾರೆ. ಎಸ್‌ಐಟಿ ಸಂಗ್ರಹಿಸಿರುವ ಡಿಜಿಟಲ್‌ ದಾಖಲೆಯನ್ನು ಪೊಲೀಸರು ಆಕೆಯ ಮುಂದೆ ಇಡಬಹುದಿತ್ತು. ಭವಾನಿ ಯಾವ ಸಿಮ್‌ ಬಳಸುತ್ತಿದ್ದಾರೆ ಎಂಬುದನ್ನು ಸೇವೆ ಕಲ್ಪಿಸುವ ಕಂಪೆನಿ ಕೇಳಿದರೆ ಹೇಳುತ್ತದೆ. ಅದರಲ್ಲೇನಿದೆ” ಎಂದರು.

“ಐದು ಲಕ್ಷ ಪೆನ್‌ಡ್ರೈವ್‌ಗಳನ್ನು ಹಾಸನದಲ್ಲಿ ಹಂಚಲಾಗಿದೆ ಎನ್ನಲಾಗಿದೆ. ಪೆನ್‌ಡ್ರೈವ್‌ ಹಂಚುವ ಮೂಲಕ ಅಮಾಯಕ ಹೆಣ್ಣು ಮಕ್ಕಳ ಮಾನ ಹರಾಜು ಹಾಕಿದವರನ್ನು ಬಿಟ್ಟು, ಭವಾನಿಯವರ ಹಿಂದೆ ಬೀಳಲಾಗಿದೆ. ಈ ಪ್ರಕರಣದಲ್ಲಿ ಐಪಿಸಿ ಸೆಕ್ಷನ್‌ 364(ಎ) ಅನ್ವಯಿಸುವ ಅಗತ್ಯವೇ ಇಲ್ಲ. ಅಂಥ ಯಾವುದೇ ಅಂಶಗಳು ದೂರಿನಲ್ಲಿ ಇಲ್ಲ. ಈ ದೇಶದಲ್ಲಿ ಆರೋಪಿಯನ್ನು ಬಂಧಿಸುವುದರೊಂದಿಗೆ ತನಿಖೆ ಆರಂಭವಾಗುತ್ತದೆ. ಆತನ ಬಿಡುಗಡೆಯೊಂದಿಗೆ ಪ್ರಕರಣ ಮುಕ್ತಾಯವಾಗುತ್ತದೆ” ಎಂದು ಮಾರ್ಮಿಕವಾಗಿ ನುಡಿದು, ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.

ಸರ್ಕಾರದಿಂದ ಇಷ್ಟು ಮುತುವರ್ಜಿ ಏಕೆ?

ಎಷ್ಟೋ ಪ್ರಕರಣಗಳು ನಡೆದಿದ್ದರೂ ಪ್ರಜ್ವಲ್‌ ಪ್ರಕರಣದಲ್ಲಿ ರಾಜ್ಯ ಸರ್ಕಾರ ಇಷ್ಟು ಮುತುವರ್ಜಿ ವಹಿಸುತ್ತಿರುವುದು ಏಕೆ ಎಂಬ ಭಾವನೆ ಇದೆ ಎಂದು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ ಹೇಳಿದರು.

ಆಗ ಪ್ರೊ. ರವಿವರ್ಮ ಕುಮಾರ್‌ ಅವರು “ಪ್ರಜ್ವಲ್‌ ರೇವಣ್ಣರದು ಎನ್ನಲಾದ ವಿಡಿಯೊಗಳು ವೈರಲ್‌ ಆದ ತಕ್ಷಣ ಏಪ್ರಿಲ್‌ 28ರಂದು ಸರ್ಕಾರ ಎಸ್‌ಐಟಿ ರಚಿಸಿದೆ. ಇದಾದ ಮಾರನೇಯ ದಿನ ದೂರು ನೀಡಿದ್ದ ಸಂತ್ರಸ್ತೆಯನ್ನು ಅಪಹರಿಸಲಾಗಿದೆ. ನೂರಾರು ಹೆಣ್ಣು ಮಕ್ಕಳ ಬದುಕು ಅಡಕತ್ತರಿಗೆ ಸಿಲುಕಿದೆ ಎಂದರು.

ಆಗ ನ್ಯಾ. ದೀಕ್ಷಿತ್‌ ಅವರು “ಸಂತ್ರಸ್ತರಿಗೆ ಸಂಬಂಧಿಸಿದ್ದು ಎನ್ನಲಾದ ವಿಡಿಯೊಗಳು ದೇಶಾದ್ಯಂತ ಓಡಾಡಿವೆ. ಅವರ ಗತಿ ಏನು? ಎಂದು ಬೇಸರ ವ್ಯಕ್ತಪಡಿಸಿದರು.

“ಈ ಪ್ರಕರಣ ಹೇಗೆ ತಾರ್ಕಿಕ ಅಂತ್ಯ ಕಾಣುತ್ತದೆ ಎಂಬುದನ್ನು ನೆನಪಿಸಿಕೊಂಡರೆ ನಿರಾಸೆಯಾಗುತ್ತದೆ. ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್‌ ಮಾಜಿ ಪ್ರಧಾನಿಯ ಮೊಮ್ಮಗ. ಆತನ ವಿರುದ್ಧ ಕಟಕಟೆಯಲ್ಲಿ ನಿಂತು ಸಾಕ್ಷಿಗಳು ಹೇಗೆ ನುಡಿಯುತ್ತಾರೆ? ಈಗ ಪ್ರಮುಖ ಆರೋಪಿಯ ಚಿಕ್ಕಪ್ಪ ಬೇರೆ ಕೇಂದ್ರ ಮಂತ್ರಿ (ಎಚ್‌ ಡಿ ಕುಮಾರಸ್ವಾಮಿ)” ಎಂದರು. ‌

ಪೊಲೀಸ್‌ ರಾಜ್‌ಗೆ ಅವಕಾಶವಿಲ್ಲ ಎಂದು ಗುಡುಗಿದ ಪೀಠ

ಒಂದು ಹಂತದಲ್ಲಿ “ಭವಾನಿ ಅವರನ್ನು ಕಸ್ಟಡಿಗೆ ಪಡೆಯುವ ವಿಚಾರದಲ್ಲಿ ನ್ಯಾಯಾಲಯ ವಿರೋಧಿಸಲಾಗದು. ಇದು ತನಿಖಾಧಿಕಾರಿಯ ಅಧಿಕಾರವಾಗಿರುತ್ತದೆ” ಎಂದು ಪ್ರೊ. ರವಿವರ್ಮ ಕುಮಾರ್‌ ಹೇಳಿದ್ದು ಪೀಠದ ಕೆಂಗಣ್ಣಿಗೆ ಗುರಿಯಾಗಿತು. ಇದಕ್ಕೆ ಆಕ್ಷೇಪಿಸಿದ ಪೀಠವು “ಹಾಗೆ ಮಾಡಿದರೆ ನಾಳೆ ಪೊಲೀಸರು ಯಾರನ್ನು ಬೇಕಾದರೂ ಬಂಧಿಸಬಹುದು. ಇದನ್ನು ಪೊಲೀಸ್‌ ರಾಜ್‌ ಮಾಡಲಾಗುತ್ತದೆಯೇ?” ಎಂದು ಪ್ರಶ್ನಿಸಿದರು. ಇದಕ್ಕೆ ಪೂರಕವಾಗಿ ಒಂದು ತೀರ್ಪಿನ ಐತಿಹ್ಯ ಒದಗಿಸುವಂತೆ ಪ್ರೊ. ರವಿವರ್ಮ ಕುಮಾರ್‌ಗೆ ಸೂಚಿಸಿದರು. “ವ್ಯಕ್ತಿ ಸ್ವಾತಂತ್ರ್ಯ ಹರಣವಾಗುತ್ತದೆ ಎಂದಾಗ ನ್ಯಾಯಾಲಯಕ್ಕೆ ಮಾಹಿತಿ ಪಡೆಯುವ ಅಧಿಕಾರವಿರುತ್ತದೆ” ಎಂದು ಸುಪ್ರೀಂ ಕೋರ್ಟ್‌ ತೀರ್ಪೊಂದನ್ನು ಉಲ್ಲೇಖಿಸಿ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು ನ್ಯಾಯಾಲಯದ ನೆರವಿಗೆ ಧಾವಿಸಿದರು.

Also Read
ಸಂತ್ರಸ್ತೆ ಅಪಹರಣ ಪ್ರಕರಣ: ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ ಕದತಟ್ಟಿದ ಭವಾನಿ ರೇವಣ್ಣ

ರೇವಣ್ಣ ಜಾಮೀನು ರದ್ದು ಅರ್ಜಿ ಮುಂದೂಡಿಕೆ

ಅಪಹರಣ ಪ್ರಕರಣದಲ್ಲಿ ವಿಚಾರಣಾಧೀನ ನ್ಯಾಯಾಲಯವು ಎಚ್‌ ಡಿ ರೇವಣ್ಣಗೆ ಮಂಜೂರು ಮಾಡಿರುವ ಜಾಮೀನು ರದ್ದುಪಡಿಸಬೇಕು ಎಂದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ ಮುಂದೂಡಿದೆ. ಪ್ರತಿವಾದಿ ರೇವಣ್ಣ ಪರ ಹಿರಿಯ ವಕೀಲ ಸಿ ವಿ ನಾಗೇಶ್‌ ಕೋರಿಕೆಯಂತೆ ಅರ್ಜಿ ವಿಚಾರಣೆ ಮುಂದೂಡಲಾಯಿತು. 

Kannada Bar & Bench
kannada.barandbench.com