ಮುಖ್ಯ ಕಾರ್ಯದರ್ಶಿ ಅವಹೇಳನ: ಬಿಜೆಪಿ ಪರಿಷತ್‌ ಸದಸ್ಯ ರವಿಕುಮಾರ್‌ ವಿರುದ್ದದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

“ಕಣ್ಣು ಮಿಟುಕಿಸಿದರೂ ಅದು ಅಪರಾಧವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಂತ್ರಸ್ತೆಯೇ ನ್ಯಾಯಾಲಯದ ಮುಂದೆ ಬರಬೇಕಿಲ್ಲ. ತನಿಖೆ ನಡೆಸಿ, ಆರೋಪ ಪಟ್ಟಿ ಸಲ್ಲಿಸಲು ಅನುಮತಿಸಬೇಕು” ಎಂಬ ಸರ್ಕಾರದ ವಾದವನ್ನು ಒಪ್ಪದ ಪೀಠ.
ಮುಖ್ಯ ಕಾರ್ಯದರ್ಶಿ ಅವಹೇಳನ: ಬಿಜೆಪಿ ಪರಿಷತ್‌ ಸದಸ್ಯ ರವಿಕುಮಾರ್‌ ವಿರುದ್ದದ ಪ್ರಕರಣಕ್ಕೆ ಹೈಕೋರ್ಟ್‌ ತಡೆ
Published on

“ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ರಾತ್ರಿ ಸರ್ಕಾರಕ್ಕೆ, ಹಗಲಿನ ವೇಳೆ ಸಿ ಎಂಗೆ ಕೆಲಸ ಮಾಡುತ್ತಾರೆ” ಎಂಬ ಆಕ್ಷೇಪಾರ್ಹವಾದ ಹೇಳಿಕೆ ನೀಡಿದ ಆರೋಪ ಮೇಲೆ ವಿಧಾನ ಪರಿಷತ್‌ ಮುಖ್ಯ ಸಚೇತಕ ಹಾಗೂ ಬಿಜೆಪಿ ಮುಖಂಡ ಎನ್‌ ರವಿಕುಮಾರ್‌ ವಿರುದ್ಧ ವಿಧಾನ ಸೌಧ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ತಡೆ ನೀಡಿದೆ.

ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತೆ ನಾಗರತ್ನ ಅವರು ನೀಡಿದ ದೂರಿನ ಅನ್ವಯ ವಿಧಾನಸೌಧ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ವಜಾ ಕೋರಿ ಬಿಜೆಪಿ ವಿಧಾನ ಪರಿಷತ್‌ ಸದಸ್ಯ ರವಿಕುಮಾರ್‌ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠ ನಡೆಸಿತು.

Justice S R Krishna Kumar
Justice S R Krishna Kumar

ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ಪೀಠವು ಎಫ್‌ಐಆರ್‌ ಮತ್ತು ಆನಂತರದ ಪ್ರಕ್ರಿಯೆಗೆ ತಡೆ ನೀಡಲಾಗಿದೆ. ಪ್ರತ್ಯೇಕವಾಗಿ ತಡೆ ನೀಡಿರುವುದಕ್ಕೆ ಕಾರಣಗಳನ್ನು ನೀಡಲಾಗುವುದು ಎಂದು ಆದೇಶಿಸಿ, ವಿಚಾರಣೆ ಮುಂದೂಡಿತು.

ಇದಕ್ಕೂ ಮುನ್ನ, ರವಿಕುಮಾರ್‌ ಪರ ಹಿರಿಯ ವಕೀಲ ಎಂ ಅರುಣ್‌ ಶ್ಯಾಮ್‌ ಅವರು “ರವಿಕುಮಾರ್‌ ವಿರುದ್ಧ ರಾಜಕೀಯ ಪ್ರೇರಿತವಾಗಿ ಪ್ರಕರಣ ದಾಖಲಿಸಲಾಗಿದೆ. ರಾಜಕೀಯ ಹೋರಾಟವನ್ನು ವಿಧಾನ ಪರಿಷತ್‌ ಅಥವಾ ಜನರ ಮುಂದೆ ನಡೆಸಬೇಕು. ಮುಖ್ಯ ಕಾರ್ಯದರ್ಶಿ ಶಾಲಿನಿ ವಿರುದ್ಧ ಅಂತ ಹೇಳಿಕೆಯನ್ನು ಅವರು ನೀಡಿಲ್ಲ. ತಮ್ಮ ಹೇಳಿಕೆಗೆ ಅವರು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. ದೂರುದಾರೆಯು ಮೂರು ದಿನ ವಿಳಂಬವಾಗಿ ಪ್ರಕರಣ ದಾಖಲಿಸಿದ್ದು, ಆಕೆ ಸಂತ್ರಸ್ತೆಯಲ್ಲ. ರಾಜಕೀಯ ಪಕ್ಷ ನೀಡಿದ್ದ ದೂರನ್ನು ಪೊಲೀಸರು ಪರಿಗಣಿಸಿಲ್ಲ. ಹೀಗಾಗಿ, ಪ್ರಕರಣಕ್ಕೆ ತಡೆ ನೀಡಬೇಕು” ಎಂದು ಕೋರಿದರು.

ಇದಕ್ಕೆ ಆಕ್ಷೇಪಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎ ಬೆಳ್ಳಿಯಪ್ಪ ಅವರು “ಬಿಎನ್‌ಎಸ್‌ ಸೆಕ್ಷನ್‌ 79 ಪದ, ಸಂಜ್ಞೇ ಅಥವಾ ಮಹಿಳೆಯ ಘನತೆಗೆ ಚ್ಯುತಿ ಉಂಟು ಮಾಡುವುದಕ್ಕೆ ಅನ್ವಯಿಸುವುದಾಗಿದೆ. ಕಣ್ಣು ಮಿಟುಕಿಸಿದರೂ ಅದು ಅಪರಾಧವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮಹಿಳೆಯೊಬ್ಬರು ನ್ಯಾಯಾಲಯದ ಮುಂದೆ ಬಂದಿರುವುದರಿಂದ ತನಿಖೆಗೆ ಅನುಮತಿಸಬೇಕು. ಸಂತ್ರಸ್ತೆಯೇ ನ್ಯಾಯಾಲಯದ ಮುಂದೆ ಬರಬೇಕಿಲ್ಲ. ಹೀಗಾಗಿ, ತನಿಖೆ ನಡೆಸಿ, ಆರೋಪ ಪಟ್ಟಿ ಸಲ್ಲಿಸಲು ಅನುಮತಿಸಬೇಕು” ಎಂದು ಮನವಿ ಮಾಡಿದರು.

ಜುಲೈ 4ರಂದು ನ್ಯಾಯಾಲಯವು ರವಿಕುಮಾರ್‌ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು. ಆದರೆ, ರವಿಕುಮಾರ್‌ ತನಿಖೆಗೆ ಸಹಕರಿಸಬೇಕು ಎಂದು ಆದೇಶಿಸಿತ್ತು.

Also Read
ಮುಖ್ಯ ಕಾರ್ಯದರ್ಶಿ ಅವಹೇಳನ ಪ್ರಕರಣ: ರವಿಕುಮಾರ್‌ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಹೈಕೋರ್ಟ್‌ ನಿರ್ದೇಶನ

ಪ್ರಕರಣದ ಹಿನ್ನೆಲೆ: ಬಿಜೆಪಿಯಿಂದ ಜುಲೈ 1ರಂದು ವಿಧಾನ ಸೌಧ ಆವರಣದ ಮಹಾತ್ಮ ಗಾಂಧಿ ಪ್ರತಿಮೆಯ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ರವಿಕುಮಾರ್ ಅವರು ಶಾಲಿನಿ ರಜನೀಶ್‌ ಕುರಿತು ಅಸಂಸದೀಯ ಪದ ಬಳಸಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತೆ ನಾಗರತ್ನ ಅವರು ನೀಡಿದ ದೂರಿನ ಮೇರೆಗೆ ರವಿಕುಮಾರ್‌ ವಿರುದ್ಧ ವಿಧಾನ ಸೌಧ ಠಾಣೆಯಲ್ಲಿ ಬಿಎನ್‌ಎಸ್‌ ಸೆಕ್ಷನ್‌ಗಳಾದ 351 (3), 75 (3) ಮತ್ತು 79 ಅಡಿ ಪ್ರಕರಣ ದಾಖಲಾಗಿದೆ. 

Kannada Bar & Bench
kannada.barandbench.com