

ದೆಹಲಿಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕುರಿತ ಜಾಗತಿಕ ಕಾರ್ಯಕ್ರಮವಾದ ಎಐ ಇಂಪ್ಯಾಕ್ಟ್ ಶೃಂಗಸಭೆ ವೇಳೆ ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದ ಭಾರತೀಯ ಯುವ ಕಾಂಗ್ರೆಸ್ನ (ಐವೈಸಿ) ನಾಲ್ವರು ಕಾರ್ಯಕರ್ತರ ಪೊಲೀಸ್ ಕಸ್ಟಡಿ ಅವಧಿಯನ್ನು ಇನ್ನೂ ನಾಲ್ಕು ದಿನಗಳ ಕಾಲ ವಿಸ್ತರಿಸಿ ದೆಹಲಿ ನ್ಯಾಯಾಲಯ ಬುಧವಾರ ಆದೇಶ ಹೊರಡಿಸಿದೆ.
ದೆಹಲಿ ಪೊಲೀಸ್ ಐದು ದಿನಗಳ ಹೆಚ್ಚುವರಿ ಕಸ್ಟಡಿ ಕೋರಿ ಸಲ್ಲಿಸಿದ ಮನವಿಯನ್ನು ಪರಿಗಣಿಸಿದ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ರವಿ ಅವರು ಈ ಆದೇಶ ನೀಡಿದರು.
ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.
ಐವರು ಆರೋಪಿಗಳನ್ನು ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್ ಹಾಗೂ ಭೂದೇವ್ ಶರ್ಮಾ ಅವರೊಂದಿಗೆ ಮುಖಾಮುಖಿ ವಿಚಾರಣೆ ನಡೆಸುವ ಅಗತ್ಯವಿದೆ. ಸಂಚಿನಲ್ಲಿ ಭಾಗವಹಿಸಿದವರ ಏಣಿಶ್ರೇಣಿ, ಪ್ರತ್ಯೇಕ ಆರೋಪಿಗಳ ಪಾತ್ರ, ಯೋಜನೆ, ಹಣಕಾಸು ವ್ಯವಸ್ಥೆ ಹಾಗೂ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಸಾಬೀತುಪಡಿಸಲು ಇದು ಅಗತ್ಯ. ಇನ್ನೂ ಕೆಲವು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ದೆಹಲಿ ಪೊಲೀಸರು ಹೇಳಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಯುವ ಕಾಂಗ್ರೆಸ್ ಪರ ವಕೀಲರು ಹೆಚ್ಚುವರಿಯಾಗಿ ಕಸ್ಟಡಿಗೆ ಪಡೆಯಲು ಸಕಾರಣ ಇಲ್ಲ ಎಂದರು.
ಫೆಬ್ರವರಿ 20ರಂದು ಭಾರತ ಮಂಡಪಂನಲ್ಲಿ ನಡೆದ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯ ವೇಳೆ ಐವೈಸಿ ಸದಸ್ಯರು ಪ್ರಧಾನಿ ರಾಜಿಯಾಗಿದ್ದಾರೆ ಎಂದು ಕೂಗುತ್ತಾ ಅಂಗಿ ಬಿಚ್ಚಿ ಪ್ರತಿಭಟಿಸಿದ್ದರು. ಭಾರತ ಅಮೆರಿಕ ವಾಣಿಜ್ಯ ಒಪ್ಪಂದವನ್ನು ಟೀಕಿಸಿದ್ದ ಬರಹಗಳನ್ನು ತಮ್ಮ ಟಿ ಶರ್ಟ್ಗಳ ಮೇಲೆ ಪ್ರದರ್ಶಿಸಿದ್ದರು. ನಂತರ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಸರ್ಕಾರದ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.