
ವೇಗದ ಬೆಳವಣಿಗೆ ಭಾರತವನ್ನು ವಿಶ್ವದ ಮಹತ್ವಾಕಾಂಕ್ಷಿ ರಾಷ್ಟ್ರಗಳಲ್ಲಿ ಒಂದನ್ನಾಗಿ ಮಾಡಿರಬಹುದಾದರೂ ಮಧ್ಯಸ್ಥಿಕೆ ಕ್ಷೇತ್ರದ ವಿಕಾಸದ ವಿಚಾರದಲ್ಲಿ ಅಂತಹ ಬೆಳವಣಿಗೆ ಕಂಡುಬಂದಿಲ್ಲ ಎಂದು ವೃತ್ತಿಯಿಂದ ನ್ಯಾಯವಾದಿಯೂ ಆದ ಉಪರಾಷ್ಟ್ರಪತಿ ಜಗದೀಪ್ ಧನಕರ್ ವಿಷಾದ ವ್ಯಕ್ತಪಡಿಸಿದರು.
ಭಾರತ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ನವದೆಹಲಿಯಲ್ಲಿ ಶನಿವಾರ ಆಯೋಜಿಸಿದ್ದ "ಅಂತರರಾಷ್ಟ್ರೀಯ ಮಧ್ಯಸ್ಥಿಕೆ: ಭಾರತೀಯ ದೃಷ್ಟಿಕೋನ" ಎಂಬ ವಿಷಯದ ಕುರಿತ ಸಮಾವೇಶದಲ್ಲಿ ಅವರು ಮಾತನಾಡಿದರು.
ಐಸಿಸಿ ಅಂತರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯದ ಸದಸ್ಯನಗಾಗಿ ತನಗಿರುವ ಅನುಭವದಿಂದ ಹೇಳುವುದಾದರೆ, ದುಬೈ ಮತ್ತು ಸಿಂಗಾಪುರದಂತಹ ದೇಶಗಳಿಗೆ ಹೋಲಿಸಿದರೆ ಭಾರತವು ಅಂತರರಾಷ್ಟ್ರೀಯ ಮಧ್ಯಸ್ಥಿಕೆ ರಂಗದಲ್ಲಿ ತನ್ನ ಛಾಪು ಮೂಡಿಸಿಲ್ಲ ಎಂದರು.
ಉಪರಾಷ್ಟ್ರಪತಿ ಅವರ ಭಾಷಣದ ಪ್ರಮುಖಾಂಶಗಳು
ವಿರೋಧಾಭಾಸದ ಭಯವಿಲ್ಲದೆ ಅಂತರರಾಷ್ಟ್ರೀಯ ವಾಣಿಜ್ಯ ಮಧ್ಯಸ್ಥಿಕೆ ಕ್ಷೇತ್ರದಲ್ಲಿ ಭಾರತ ಎಲ್ಲಿಯೂ ಇಲ್ಲ ಎಂದು ಹೇಳಬಲ್ಲೆ.
ಮಧ್ಯಸ್ಥಿಕೆ ಕ್ಷೇತ್ರದ ಮೇಲೆ ವಿಶ್ವಾಸ ಮೂಡುವಂತಾಗಲು ನ್ಯಾಯಾಂಗದಿಂದಲೇ ಉಂಟಾದಂತಹ ನಿಯಂತ್ರಣವೊಂದನ್ನು ತೊಡೆದುಹಾಕಬೇಕಿದೆ.
ನಿವೃತ್ತ ನ್ಯಾಯಾಧೀಶರು ಮಧ್ಯಸ್ಥಿಕೆ ಕ್ಷೇತ್ರಕ್ಕೆ ಒಂದು ಬಗೆಯ ಸಂಪತ್ತು ಎನಿಸಿದರೂ, ಇದಕ್ಕೆ ಪೂರಕವಾಗಿ ಕ್ಷೇತ್ರದಲ್ಲಿ ಪರಿಣತರಾದವರತ್ತ ಆಲೋಚಿಸಲು ಇದು ಸಕಾಲ.
ಭಾರತದ ವೇಗದ ಬೆಳವಣಿಗೆ ಅದನ್ನು ವಿಶ್ವದ ಮಹತ್ವಾಕಾಂಕ್ಷಿ ರಾಷ್ಟ್ರಗಳಲ್ಲಿ ಒಂದನ್ನಾಗಿ ಮಾಡಿದ್ದು ಇದೀಗ ಜಾಗತಿಕ ವ್ಯಾಜ್ಯ ಪರಿಹಾರ ಕೇಂದ್ರವಾಗಿ ಅದು ಹೊರಹೊಮ್ಮುವ ಸಮಯ ಬಂದಿದೆ.
ಭಾರತದಲ್ಲಿ ಮಧಸ್ಥಿಕೆ ಸ್ವತಂತ್ರ ಅಸ್ತಿತ್ವ ಕಂಡುಕೊಳ್ಳದೆ ಸಾಮಾನ್ಯ ಶ್ರೇಣೀಕೃತ ತೀರ್ಪು ಪ್ರಕ್ರಿಯೆಗೆ ಹೆಚ್ಚುವರಿ ಹೊರೆಯಾಗಿದೆಯಷ್ಟೇ.
ಮೇಲ್ಮನವಿಗಳನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ಗೆ ವಿವೇಚನಾಧಿಕಾರ ನೀಡುವ ಸಂವಿಧಾನದ 136ನೇ ವಿಧಿಯಿಂದ ಮಧ್ಯಸ್ಥಿಕೆ ಪ್ರಕ್ರಿಯೆಗೂ ತೊಂದರೆಯಾಗಬಹುದು.
ಕಾರ್ಯಕ್ರಮದಲ್ಲಿ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಮತ್ತು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಮಾತನಾಡಿದರು.