ದಿನೇಶ್‌ ಪತ್ನಿ ಮುಸ್ಲಿಂ ಆದ ಮಾತ್ರಕ್ಕೆ ಅವರ ಮನೆಯನ್ನು ಅರ್ಧ ಪಾಕಿಸ್ತಾನ ಎನ್ನಬಹುದೇ? ಯತ್ನಾಳ್‌ಗೆ ಹೈಕೋರ್ಟ್‌ ತರಾಟೆ

"ನಿರ್ದಿಷ್ಟ ಸಮುದಾಯವನ್ನು ನೀವು ಹಾಗೆ ವ್ಯಾಖ್ಯಾನಿಸಲಾಗದು. ಆ ಸಮುದಾಯ ಈ ದೇಶದಲ್ಲಿದೆ. ಪ್ರತಿ ಬಾರಿಯೂ ಪ್ರತಿ ಪ್ರಕರಣದಲ್ಲೂ ನಾನು ಹೇಳುತ್ತಿದ್ದೇನೆ. ಕೆಸರು ಎರಚುವುದು ನಿಲ್ಲಬೇಕು. ಇದರಿಂದ ಏನು ಸಿಗುತ್ತದೆ?” ಎಂದ ನ್ಯಾಯಾಲಯ.
Tabassum Rao & Karnataka HC
Tabassum Rao & Karnataka HC
Published on

“ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಮನೇಲಿ ಅರ್ಧ ಪಾಕಿಸ್ತಾನವಿದೆ” ಎಂಬ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ದ ಗುರುವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್‌, “ನಿರ್ದಿಷ್ಟ ಸಮುದಾಯವನ್ನು ನೀವು ಹಾಗೆ ವ್ಯಾಖ್ಯಾನಿಸಲಾಗದು” ಎಂದು ಮೌಖಿಕವಾಗಿ ಕಿಡಿಕಾರಿದೆ.

ಗಾಂಧಿನಗರ ಕಾಂಗ್ರೆಸ್‌ ಶಾಸಕ ದಿನೇಶ್‌ ಗುಂಡೂರಾವ್‌ ಪತ್ನಿ ತಬಸ್ಸುಮ್‌ ರಾವ್‌ ಅವರು ಹೂಡಿರುವ ಮಾನಹಾನಿ ಪ್ರಕರಣ ರದ್ದುಪಡಿಸುವಂತೆ ಕೋರಿ ಬಸನಗೌಡ ಪಾಟೀಲ್‌ ಯತ್ನಾಳ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ವಿಚಾರಣೆ ಆರಂಭವಾಗಿಗುತ್ತಿದ್ದಂತೆ ಪೀಠವು “ನಿಮಗೆ (ಯತ್ನಾಳ್) ಇದು ಏಕೆ ಬೇಕು? ಇದೆಲ್ಲವನ್ನು ನೀವೇಕೆ ಮಾತನಾಡಬೇಕು? ಯಾವ ಪ್ರತಿಕ್ರಿಯೆ? ಅರ್ಧ ಪಾಕಿಸ್ತಾನ ಎಂದರೆ ಏನರ್ಥ? ಇದೆಲ್ಲವನ್ನೂ ನೀವೇಕೆ ಹೇಳಿದ್ದೀರಿ? ನಿರ್ದಿಷ್ಟ ಸಮುದಾಯವನ್ನು ನೀವು ಹಾಗೆ ವ್ಯಾಖ್ಯಾನಿಸಲಾಗದು. ಆ ಸಮುದಾಯ ಈ ದೇಶದಲ್ಲಿದೆ. ಪ್ರತಿ ಬಾರಿಯೂ ಪ್ರತಿ ಪ್ರಕರಣದಲ್ಲೂ ನಾನು ಹೇಳುತ್ತಿದ್ದೇನೆ. ಕೆಸರು ಎರಚುವುದು ನಿಲ್ಲಬೇಕು. ಇದರಿಂದ ಏನು ಸಿಗುತ್ತದೆ?” ಎಂದು ತರಾಟೆಗೆ ತೆಗೆದುಕೊಂಡಿತು.

“ಯಾರದೋ ಪತ್ನಿ ಮುಸ್ಲಿಮ್‌ ಎಂದ ಮಾತ್ರಕ್ಕೆ ಅರ್ಧ ಪಾಕಿಸ್ತಾನ ಎನ್ನಬಹುದೇ? ಏನದು? ಇದು ಮಾತನಾಡುವ ರೀತಿಯಲ್ಲ. ಇದು ಸರಿಯಲ್ಲ. ನೀವು ವೈಯಕ್ತಿಕ ಹೇಳಿಕೆ ಏಕೆ ನೀಡುತ್ತೀರಿ? ನಾನು ಇದಕ್ಕೆ ತಡೆ ನೀಡುವುದಿಲ್ಲ. ನೀವು ಎಲ್ಲರನ್ನೂ ಹಾಗೆ ವ್ಯಾಖ್ಯಾನಿಸುವುದು ಸರಿಯಲ್ಲ. ಸ್ವಲ್ಪ ತಡೆ ಹಿಡಿದು ಮಾತನಾಡಿ ಅಂಥ ಹೇಳಿದ್ದೇವೆ. ನಾವು ಇಲ್ಲಿ ಸಲಹೆ ನೀಡಲು ಕುಳಿತಿಲ್ಲ” ಎಂದಿತು.

ಇದಕ್ಕೆ ತಬಸ್ಸುಮ್‌ ರಾವ್‌ ಪ್ರತಿನಿಧಿಸಿದ್ದ ವಕೀಲರಾದ ಎಸ್‌ ಎ ಅಹ್ಮದ್‌ ಮತ್ತು ಸೂರ್ಯ ಮುಕುಂದರಾಜ್‌ ಅವರು “ಅರ್ಜಿದಾರರು ರಾಜಕೀಯದಲ್ಲಿಲ್ಲ. ಆದರೂ ಈ ರೀತಿಯ ಹೇಳಿಕೆ ನೀಡಲಾಗಿದೆ” ಎಂದರು.

ಯತ್ನಾಳ್‌ ಪ್ರತಿನಿಧಿಸಿದ್ದ ವಕೀಲ ವೆಂಕಟೇಶ್‌ ದಳವಾಯಿ ಅವರು “ದಿನೇಶ್‌ ಹೇಳಿಕೆಗೆ ಪ್ರತಿಯಾಗಿ ಹೇಳಿಕೆ ನೀಡಲಾಗಿದೆಯಷ್ಟೆ. ಮಾರನೆಯ ದಿನ ಸ್ಪಷ್ಟನೆಯನ್ನೂ ನೀಡಲಾಗಿದೆ. ಉದ್ದೇಶ ಪೂರ್ವಕವಾಗಿ ಆ ಹೇಳಿಕೆ ನೀಡಿಲ್ಲ. ನಾಳೆಗೆ ವಿಚಾರಣಾಧೀನ ನ್ಯಾಯಾಲಯದ ಮುಂದೆ ಹಾಜರಾಗಬೇಕಿದೆ. ಅದಕ್ಕೆ ತಡೆ ನೀಡಬೇಕು” ಎಂದು ಕೋರಿದರು.

Also Read
ಸಚಿವ ದಿನೇಶ್‌ ಕುರಿತು ಅರ್ಧ ಪಾಕಿಸ್ತಾನ ಹೇಳಿಕೆ: ಯತ್ನಾಳ್‌ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ನ್ಯಾಯಾಲಯದ ಆದೇಶ

ಇದಕ್ಕೆ ಪೀಠವು ತಡೆ ನೀಡುವುದಿಲ್ಲ. ಬಿಎನ್‌ಎಸ್‌ಎಸ್‌ ಸೆಕ್ಷನ್‌ 200ರ ಅಡಿ ಸಂಜ್ಞೇ ಪರಿಗಣಿಸುವುದಕ್ಕೂ ಮುನ್ನ ಆರೋಪಿಯ ವಾದವನ್ನು ಆಲಿಸಬೇಕು. ಇಲ್ಲಿ ಪ್ರಕ್ರಿಯೆ ಲೋಪ ಕಾಣುತ್ತಿದೆ. ಹಾಗಾಗಿ, ಸೆಪ್ಟೆಂಬರ್‌ 23ರಂದು ಹೊಸದಾಗಿ ನಿಯಮದ ಪ್ರಕಾರ ಸಂಜ್ಞೇ ಪರಿಗಣಿಸಲು ಅಧೀನ ನ್ಯಾಯಾಲಯಕ್ಕೆ ಪ್ರಕರಣವನ್ನು ಮರಳಿಸಲಾಗುವುದು ಎಂದು, ವಿಚಾರಣೆ ಮುಂದೂಡಿತು. ವಕೀಲ ಎಸ್‌ ಎ ಅಹ್ಮದ್‌ ಅವರಿಗೆ ಆಕ್ಷೇಪಣೆ ಸಲ್ಲಿಸಲು ಇದೇ ವೇಳೆ ನ್ಯಾಯಾಲಯ ಸೂಚಿಸಿತು.

ಪ್ರಕರಣದ ಹಿನ್ನೆಲೆ: “ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಮನೇಲಿ ಅರ್ಧ ಪಾಕಿಸ್ತಾನವಿದೆ. ದೇಶವಿರೋಧಿ ಹೇಳಿಕೆ ನೀಡುವುದು ಚಟವಾಗಿದೆ” ಎಂದು ಆರೋಪಿಸಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಆದೇಶಿಸಿತ್ತು.

“ನನ್ನನ್ನು ದೇಶವಿರೋಧಿ ಎಂದು ಹೇಳಿರುವ ಯತ್ನಾಳ್‌ ಅವರ ಹೇಳಿಕೆಯಿಂದ ನನಗೆ ನೋವಾಗಿದೆ” ಎಂದು ಆರೋಪಿಸಿ ತಬಸ್ಸುಮ್‌ ಅವರು, ಯತ್ನಾಳ್‌ ವಿರುದ್ಧ ಐಪಿಸಿ ಸೆಕ್ಷನ್‌ 499 ಮತ್ತು 500ರ ಅಡಿಯಲ್ಲಿ 2024ರ ಏಪ್ರಿಲ್‌ 15ರಂದು ಖಾಸಗಿ ದೂರು ದಾಖಲಿಸಿದ್ದರು. ಈ ದೂರನ್ನು ಪರಿಗಣಿಸಿರುವ ನ್ಯಾಯಾಲಯವು ಆರೋಪಿ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲು ಪೊಲೀಸರಿಗೆ ನಿರ್ದೇಶಿಸಿದೆ. ಇದನ್ನು ರದ್ದುಪಡಿಸುವಂತೆ ಯತ್ನಾಳ್‌ ಕೋರಿದ್ದಾರೆ. 

Kannada Bar & Bench
kannada.barandbench.com