ರೈತ ವಿರೋಧಿ ಟ್ವೀಟ್: ಕಂಗನಾ ವಿರುದ್ಧ ಎಫ್‌ಐಆರ್‌ ದಾಖಲು ಕೋರಿಕೆ, ತೀರ್ಪು ಕಾಯ್ದಿರಿಸಿದ ತುಮಕೂರು ನ್ಯಾಯಾಲಯ

ತುಮಕೂರಿನ ಜೆಎಂಎಫ್‌ ನ್ಯಾಯಾಲಯದಲ್ಲಿ ಸೆಪ್ಟೆಂಬರ್ 21ರಂದು ರಮೇಶ್ ನಾಯ್ಕ್ ಅವರು ದಾವೆ ಹೂಡಿದ್ದರು. ಅಕ್ಟೋಬರ್ 9ರಂದು ನ್ಯಾಯಾಲಯವು ತೀರ್ಪು ಪ್ರಕಟಿಸಲಿದೆ.
Kangana Ranaut
Kangana Ranaut

ಕೇಂದ್ರ ಸರ್ಕಾರದ ಕೃಷಿ ಕಾಯಿದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಟ್ವೀಟ್ ಮೂಲಕ ಟೀಕಿಸಿದ್ದ ಬಾಲಿವುಡ್ ನ ವಿವಾದಾತ್ಮಕ ನಟಿ ಕಂಗಾನ ರನೌತ್ ವಿರುದ್ಧ ಪ್ರಥಮ ತನಿಖಾ ವರದಿ (ಎಫ್‌ಐಆರ್‌) ದಾಖಲಿಸಲು ಪೊಲೀಸರಿಗೆ ನಿರ್ದೇಶಿಸುವಂತೆ ತುಮಕೂರಿನ ಪ್ರಥಮ ದರ್ಜೆ ನ್ಯಾಯಿಕ ನ್ಯಾಯಾಲಯದಲ್ಲಿ (ಜೆಎಂಎಫ್‌ಸಿ) ವಕೀಲ ರಮೇಶ್ ನಾಯ್ಕ್ ದಾಖಲಿಸಿರುವ ಖಾಸಗಿ ದೂರಿಗೆ ಸಂಬಂಧಿಸಿದ ತೀರ್ಪನ್ನು ಸೋಮವಾರ ನ್ಯಾಯಾಲಯ ಕಾಯ್ದಿರಿಸಿದೆ (ರಮೇಶ್ ನಾಯ್ಕ್‌ ವರ್ಸಸ್ ರಾಜ್ಯ ಸರ್ಕಾರ). ಅಕ್ಟೋಬರ್ 9ರಂದು ತೀರ್ಪು ಪ್ರಕಟಿಸುವುದಾಗಿ ನ್ಯಾಯಾಲಯ ಹೇಳಿದೆ.

ಜೆಎಂಎಫ್‌ ನ್ಯಾಯಾಲಯದ ನ್ಯಾಯಾಧೀಶ ವಿನೋದ್ ಬಲನಾಯಕ್ ಅವರ ನ್ಯಾಯಪೀಠದ ಮುಂದೆ ಸೆಪ್ಟೆಂಬರ್ 21ರಂದು ರಮೇಶ್ ನಾಯ್ಕ್ ದಾವೆ ಹೂಡಿದ್ದು, ಹೀಗೆ ಹೇಳಿದ್ದರು.

“... ಆರೋಪಿಯ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿರುವ ಟ್ವೀಟ್ ನಿಂದಾಗಿ ವಿಭಿನ್ನ ಸೈದ್ಧಾಂತಿಕ ನಿಲುವು ಹೊಂದಿರುವ ಭಿನ್ನ ಗುಂಪುಗಳ ನಡುವೆ ಗಲಭೆ ಸಂಭವಿಸುವ ಸಾಧ್ಯತೆ ಇರುತ್ತದೆ. ಇದರ ಬಗ್ಗೆ ಸರ್ಕಾರಿ ವ್ಯವಸ್ಥೆಯು ಕುರುಡುಗಣ್ಣಾಗಿದೆ. ಇದನ್ನು ನಿಯಂತ್ರಿಸಲು ಯಾವುದೇ ಮಾರ್ಗಸೂಚಿಗಳಿಲ್ಲ. ಇದರಿಂದ ಖಾತರಿಯಾಗುವುದೇನೆಂದರೆ ಸರ್ಕಾರವು ಕ್ರಮಕೈಗೊಳ್ಳುವುದಕ್ಕೂ ಮುನ್ನ ಒಂದಷ್ಟು ಕೆಡುಕಾಗುವುದುನ್ನು ಅದು ಬಯಸುತ್ತಿರುವಂತಿದೆ” ಎಂದು ಅವರು ಅರ್ಜಿಯಲ್ಲಿ ವಿವರಿಸಿದ್ದರು.

Also Read
ಬಾಲಿವುಡ್ ನಟಿ ಕಂಗನಾ ವಿರುದ್ಧ ತುಮಕೂರಿನಲ್ಲಿ ದಾಖಲಿಸಿರುವ ದಾವೆಯಲ್ಲಿ ಯಾವ ಅಂಶಗಳಿವೆ?

“ಸಾಮಾಜಿಕ ಜಾಲತಾಣದಲ್ಲಿ ಕೀಳು ಅಭಿರುಚಿ ಒಳಗೊಂಡ ಮಾಹಿತಿ ಹಂಚಿಕೊಳ್ಳಲು ಕಾರಣರಾದವರು ಮತ್ತು ಇಂಥ ವಿಚಾರಗಳಿಗೆ ಪ್ರಚಾರ ನೀಡುವ ಮೂಲಕ ದೇಶದ ಬೆನ್ನೆಲುಬಾದ ರೈತ ಸಮುದಾಯವನ್ನು ಕೆಟ್ಟದಾಗಿ ಬಿಂಬಿಸುವುದರೊಂದಿಗೆ ಗಲಭೆ ವ್ಯಾಪಿಸಲು ಹಾಗೂ ದೇಶವನ್ನು ಶಿಥಿಲಗೊಳಿಸಲು ಕಾರಣವಾಗುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು” ಎಂದು ವಕೀಲ ರಮೇಶ್ ನಾಯಕ್ ಅವರು ದಾವೆಯಲ್ಲಿ ವಿವರಿಸಿದ್ದರು.

ಕಂಗನಾ ಅವರ ಅಪರಾಧಗಳ ಬಗ್ಗೆ ಗಂಭೀರವಾದ ನಿಲುವು ತಳೆಯುವ ಮೂಲಕ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೂಕ್ತ ಸೆಕ್ಷನ್‌ಗಳ ಅಡಿ ಎಫ್‌ ಐಆರ್ ದಾಖಲಿಸಲು ಸೂಚಿಸುವಂತೆ ಅರ್ಜಿದಾರರು ಮನವಿ ಮಾಡಿದ್ದರು.

Related Stories

No stories found.
Kannada Bar & Bench
kannada.barandbench.com