
ಪ್ರವಾಸಿಗರು ಭೇಟಿ ನೀಡುವ ಕೇರಳದ ಗುಡ್ಡಗಾಡು ಪ್ರದೇಶಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ಗೆ ನಿಷೇಧ ವಿಧಿಸಿರುವ ಹೈಕೋರ್ಟ್, ಮದುವೆ, ಅಧಿಕೃತ ಸರ್ಕಾರಿ ಕಾರ್ಯಕ್ರಮಗಳು ಹಾಗೂ ಬೃಹತ್ ಸಭೆಗಳಲ್ಲಿ ಪ್ಲಾಸ್ಟಿಕ್ ಬಾಟಲಿ ಬಳಕೆಗೂ ಕಡಿವಾಣ ಹಾಕಿದೆ [ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಪ್ರಕರಣ ಮತ್ತು ಕೇರಳ ಸರ್ಕಾರ ನಡುವಣ ದಾವೆ].
ನಿಷೇಧ ಬರುವ ಅಕ್ಟೋಬರ್ 2, 2025 ರಿಂದ (ಗಾಂಧಿ ಜಯಂತಿ) ಜಾರಿಗೆ ಬರಲಿದ್ದು, ರಾಜ್ಯ ಸರ್ಕಾರಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸಮಯಾವಕಾಶ ಇದೆ ಎಂದು ನ್ಯಾಯಮೂರ್ತಿಗಳಾದ ಬೆಚು ಕುರಿಯನ್ ಥಾಮಸ್ ಮತ್ತು ಪಿ ಗೋಪಿನಾಥ್ ಅವರಿದ್ದ ಪೀಠ ತಿಳಿಸಿತು.
ಕ್ರಮವಾಗಿ 5 ಲೀಟರ್ ಮತ್ತು 2 ಲೀಟರ್ಗಿಂತಲೂ ಕಡಿಮೆ ಧಾರಣೆ ಇರುವ ಪ್ಲಾಸ್ಟಿಕ್ ನೀರಿನ ಬಾಟಲಿಗಳು ಮತ್ತು ಸೋಡಾ ಬಾಟಲಿಗಳನ್ನು ನಿಷೇಧಿಸಲಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
"ರಾಜ್ಯದ ಗಿರಿಧಾಮಗಳಲ್ಲಿ, ಅಂದರೆ ಹೆಚ್ಚಿನ ಜನಸಂದಣಿ ಇರುವ ಗುಡ್ಡಗಾಡು ತಾಣಗಳಲ್ಲಿ, ಆಹಾರ ಪಾತ್ರೆಗಳು, ತಟ್ಟೆ, ಲೋಟ, ಸ್ಟ್ರಾ, ಸ್ಯಾಶೆ, ಬೇಕರಿ ಬಾಕ್ಸ್ ಸೇರಿದಂತೆ ಏಕ-ಬಳಕೆಯ ಪ್ಲಾಸ್ಟಿಕ್ಗಳ ಬಳಕೆ ಮತ್ತು ಮಾರಾಟವನ್ನು ಈ ಮೂಲಕ ನಿಷೇಧಿಸಲಾಗಿದೆ. ನಿಷೇಧ ಕ್ರಮವಾಗಿ 5 ಲೀಟರ್ ಮತ್ತು 2 ಲೀಟರ್ ಇರುವ ಪ್ಲಾಸ್ಟಿಕ್ ನೀರಿನ ಬಾಟಲಿಗಳು ಮತ್ತು ಸೋಡಾ ಬಾಟಲಿಗಳಿಗೆ ಅನ್ವಯಿಸುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಕೇರಳದಲ್ಲಿ ಹೆಚ್ಚುತ್ತಿರುವ ತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿ ಸಮಸ್ಯೆ ನಿಭಾಯಿಸಲು ಹೈಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು.
ಪ್ರತಿಯೊಬ್ಬ ವ್ಯಕ್ತಿಗೂ ಶುದ್ಧ ಪರಿಸರದಲ್ಲಿ ಜೀವಿಸುವ ಮೂಲಭೂತ ಹಕ್ಕು ಇದ್ದು ಪರಿಸರವನ್ನು ರಕ್ಷಿಸುವ ಮತ್ತು ವೃದ್ಧಿಸುವ ಕರ್ತವ್ಯ ಪ್ರತಿಯೊಬ್ಬ ನಾಗರಿಕನಿಗೂ ಇದೆ ಎಂದು ನ್ಯಾಯಾಲಯ ಒತ್ತಿ ಹೇಳಿದೆ.
ಪ್ರವಾಸಿಗರು ಭೇಟಿ ನೀಡುವ ಕೇರಳದ ಗುಡ್ಡಗಾಡು ಪ್ರದೇಶಗಳು ಪ್ಲಾಸ್ಟಿಕ್ ಕಸದ ತೊಟ್ಟಿಗಳಾಗಿ ಬದಲಾಗುವುದನ್ನು ತಡೆಯಲು ಏಕ ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧೀಸಬೇಕಿದೆ ಎಂದು ಈ ಹಿಂದೆ ಪೀಠ ಅಭಿಪ್ರಾಯಪಟ್ಟಿತ್ತು.