
ಮಾದಕವಸ್ತು ಮತ್ತು ಅಮಲು ಪದಾರ್ಥ ನಿಯಂತ್ರಣ ಕಾಯಿದೆಯಡಿ ಬಂಧಿತನಾಗಿದ್ದ ಮಾದಕ ವ್ಯಸನಿ ಯುವಕನೊಬ್ಬನ ವಿದ್ಯಾಭ್ಯಾಸಕ್ಕಾಗಿ ಕೇರಳ ಹೈಕೋರ್ಟ್ ನೆರವು ನೀಡಿದೆ.
ಬೇರೆ ಪ್ರಕರಣವೊಂದರಲ್ಲಿ ದಾವೆ ಹೂಡಿದ್ದವರಿಗೆ ವಿಧಿಸಲಾಗಿದ್ದ ದಂಡದಿಂದ ₹91,000 ಮೊತ್ತವನ್ನು ಆತನ ಕಾಲೇಜು ಶುಲ್ಕವಾಗಿ ನ್ಯಾಯಮೂರ್ತಿಗಳಾದ ಎ ಮುಹಮ್ಮದ್ ಮುಸ್ತಾಕ್ ಮತ್ತು ಹರಿಶಂಕರ್ ವಿ ಮೆನನ್ ಅವರ ವಿಭಾಗೀಯ ಪೀಠ ಸಂಗ್ರಹಿಸಿತು.
ಮಾದಕ ವ್ಯಸನಿಗಳ ಪುನರ್ವಸತಿಗೆ ಒತ್ತು ನೀಡಿದ ಅದು ಅಂತಹವರಿಗೆ ಶಿಕ್ಷೆ ವಿಧಿಸುವ ಬದಲು ಅವರನ್ನು ಸಮಾಜಕ್ಕೆ ಮರುಸೇರ್ಪಡೆ ಮಾಡುವತ್ತ ಗಮನಹರಿಸಬೇಕು ಎಂದಿತು. ವ್ಯವಸ್ಥೆ ತಮ್ಮೊಂದಿಗೆ ಇದೆ ಎಂದು ಮಾದಕ ವಸ್ತುವ್ಯಸನಿಗಳು ಭಾವಿಸುವಂತಾಗಲಿ ಎಂದು ಅದು ಆಶಿಸಿತು.
ಮಾದಕ ವಸ್ತುಗಳ ಪ್ರಭಾವದಲ್ಲಿದ್ದಾಗ ವ್ಯಕ್ತಿಯೊಬ್ಬ ತನ್ನ ತಾಯಿಯ ಮೇಲೆ ಅತ್ಯಾಚಾರ ಎಸಗಿದ ಮತ್ತೊಂದು ಪ್ರಕರಣವನ್ನು ಉಲ್ಲೇಖಿಸಿದ ನ್ಯಾಯಾಲಯ ಅಂತಹ ಸಂದರ್ಭಗಳಲ್ಲಿಯೂ ಸುಧಾರಣೆಯತ್ತ ಗಮನ ಹರಿಸಬೇಕು ಹಾಗೆ ಮಾಡುವುದು ಹೊಸದಾದ ಮಾದರಿಯಾಗುವಂತಹ ವಿಧಾನ ಎಂದು ಪ್ರತಿಪಾದಿಸಿತು.
ಮಾದಕವ್ಯಸನಿಯ ತಂದೆ ಪ್ರಸ್ತುತ ಅರ್ಜಿ ಸಲ್ಲಿಸಿದ್ದರು. ತಮ್ಮ ಮಗ ಮಾಕವಸ್ತು ವ್ಯಸನದಿಂದಾಗಿ ಗಂಭೀರ ಮಾನಸಿಕ ಸಮಸ್ಯೆಗೆ ತುತ್ತಾಗಿದ್ದ. ಚಿಕಿತ್ಸೆ ನೀಡುತ್ತಿದ್ದ ವೇಳೆ ಆತನನ್ನು ಎನ್ಡಿಪಿಎಸ್ ಕಾಯಿದೆಯಡಿ ಬಂದಿಸಲಾಗಿತ್ತು. ಆ ವೇಳೆ ಔಷಧ ಸೇವಿಸಲು ನಿರಾಕರಿಸಿದ್ದ ಆತ ಜಾಮೀನು ದೊರೆತ ನಂತರವೂ ಅದನ್ನು ಮುಂದುವರೆಸಲಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದರು.
ವಿಚಾರಣೆ ವೇಳೆ ಆತನಿಗೆ ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ನಲ್ಲಿ (ಐಟಿಐ) ಅಧ್ಯಯನ ಮಾಡಲು ಆಸಕ್ತಿ ಇರುವುದು ನ್ಯಾಯಾಲಯಕ್ಕೆ ತಿಳಿದುಬಂದಿತ್ತು. ಕೊಚ್ಚಿ ಬಳಿಯ ಅಳುವಾದಲ್ಲಿರುವ ಸಮಾಜ ಕಲ್ಯಾಣ ಸಂಸ್ಥೆಯೊಂದು ಯುವಕನಿಗೆ ಕಾಲೇಜು ಪ್ರವೇಶ ನೀಡಲು ಸಿದ್ಧವಿದೆ. ಆದರೆ ಕೋರ್ಸ್ಗೆ ಅರ್ಜಿ ಸಲ್ಲಿಸುವ ದಿನಾಂಕ ಕೊನೆಯಾಗಿದೆ ಎಂದು ಪ್ರಕರಣದ ಅಮಿಕಸ್ ಕ್ಯೂರಿ ವಿ ರಾಮಕುಮಾರ್ ನಂಬಿಯಾರ್ ತಿಳಿಸಿದರು. ಕಡೆಗೆ ಸ್ವಯಂ ಪ್ರೇರಿತವಾಗಿ ರಾಷ್ಟ್ರೀಯ ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಮಂಡಳಿ (ಎನ್ಸಿವಿಇಟಿ) ಹಾಗೂ ಕೇಂದ್ರ ಸರ್ಕಾರವನ್ನು ಪ್ರಕರಣದಲ್ಲಿ ಮಧ್ಯಪ್ರವೇಶಕಾರರನ್ನಾಗಿ ಮಾಡಿಕೊಂಡ ನ್ಯಾಯಾಲಯ ಕಾಲೇಜು ಪ್ರವೇಶಾತಿಗೆ ಇರುವ ಕೊನೆಯ ದಿನಾಂಕ ವಿಸ್ತರಿಸುವಂತೆ ತಿಳಿಸಿತು. ಸಂಬಂಧಿತ ಅಧಿಕಾರಿ ಆದೇಶ ಪಾಲಿಸಿದರು. ಕೆಲವೇ ದಿನಗಳಲ್ಲಿ ಯುವಕನಿಗೆ ಕಾಲೇಜು ಪ್ರವೇಶ ದೊರೆಯಿತು.
ಅರ್ಜಿದಾರರ ಪರ ವಕೀಲರಾದ ಜಾನ್ ಎಸ್ ರಾಲ್ಫ್ ಆರಂಭದಲ್ಲಿ ₹25,000 ಮುಂಗಡ ಶುಲ್ಕವನ್ನು ಪಾವತಿಸಿದ್ದರು. ಆದರೆ ಇನ್ನೊಂದು ಮೊತ್ತದಲ್ಲಿ ವಿಧಿಸಲಾದ ದಂಡದ ಮೊತ್ತದಿಂದ ₹91,000 ಪಡೆಯುವಂತೆ ಸೂಚಿಸಿತು. ಕೇರಳ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಹಣ ಬಿಡುಗಡೆ ಮಾಡುವಂತೆ ವಕೀಲರಿಗೆ ಅದನ್ನು ಮರುಪಾವತಿ ಮಾಡುವಂತೆ ನಿರ್ದೇಶಿಸಿತು. ಯುವಕನ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಲು ನ್ಯಾಯಾಲಯ ನಿರ್ಧರಿಸಿದ್ದು ಪ್ರತಿ ಎರಡು ತಿಂಗಳಿಗೊಮ್ಮೆ ಅವನೊಂದಿಗೆ ಸಂವಹನ ನಡೆಸುವಂತೆ ಅಮಿಕಸ್ ಕ್ಯೂರಿ ಅವರಿಗೆ ಸೂಚಿಸಿತು.