ಸ್ಥಳೀಯ ಸಂಸ್ಥೆ ಚುನಾವಣೆ ಮುಗಿಯುವವರೆಗೆ ಎಸ್ಐಆರ್ ಪ್ರಕ್ರಿಯೆ ಮುಂದೂಡಲು ಕೋರಿ ಸುಪ್ರೀಂ ಮೆಟ್ಟಿಲೇರಿದ ಕೇರಳ ಸರ್ಕಾರ

ಕೇರಳದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುವಾಗಲೇ ಎಸ್ಐಆರ್ ನಡೆಸಿದರೆ ಆಡಳಿತಾತ್ಮಕ ಬಿಕ್ಕಟ್ಟು ಉಂಟಾಗುತ್ತದೆ ಎಂದು ರಾಜ್ಯ ಸರ್ಕಾರ ವಾದಿಸಿದೆ.
Supreme court, kerala
Supreme court, kerala
Published on

ಕೇರಳದಲ್ಲಿ ಭಾರತೀಯ ಚುನಾವಣಾ ಆಯೋಗ ಕೈಗೊಳ್ಳಲು ಹೊರಟಿರುವ ಮತದಾರರ ಪಟ್ಟಿಯ ವಿಶೇಷ ಆಮೂಲಾಗ್ರ ಪರಿಷ್ಕರಣೆಯನ್ನು (ಎಸ್‌ಐಆರ್‌) ಮುಂದೂಡಬೇಕೆಂದು ಕೋರಿ ರಾಜ್ಯ ಸರ್ಕಾರ  ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಸ್ಥಳೀಯ ಸಂಸ್ಥೆ ಚುನಾವಣೆ ಮುಗಿಯವವರಗೆ ಎಸ್‌ಐಆರ್‌ ಪ್ರಕ್ರಿಯೆ ಮುಂದೂಡಬೇಕೆಂದು ಕೇರಳ ಸರ್ಕಾರ ಕೋರಿದೆ. ರಾಜ್ಯದಲ್ಲಿ ಡಿಸೆಂಬರ್‌ನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯಲಿದ್ದು ಅದೇ ಹೊತ್ತಿಗೆ ಎಸ್‌ಐಆರ್‌ ಪ್ರಕ್ರಿಯೆ ಆರಂಭಿಸಿದರೆ ಭದ್ರತಾ ವ್ಯವಸ್ಥೆ ಮೇಲೆ ಒತ್ತಡ ಉಂಟಾಗುತ್ತದೆ ಎಂದು ಅದು ಹೇಳಿದೆ.

Also Read
ಎಸ್‌ಐಆರ್‌ ಜಗತ್ತಿನ ಇತಿಹಾಸದಲ್ಲಿಯೇ ಅತಿ ದೊಡ್ಡ ಮತದಾನದ ನಿರಾಕರಣೆ: ಸುಪ್ರೀಂನಲ್ಲಿ ಯೋಗೇಂದ್ರ ಯಾದವ್‌ ವಿಶ್ಲೇಷಣೆ

ರಾಜ್ಯ ವಿಧಾನಸಭೆ ಚುನಾವಣೆ ನಡೆಯುವುದು 2026ರ ಮೇ ತಿಂಗಳಿನಲ್ಲಾದ್ದರಿಂದ ಎಸ್‌ಐಆರ್‌ ತುರ್ತಾಗಿ ನಡೆಸುವ ಅಗತ್ಯವಿಲ್ಲ. ತಾನು ಇಡೀ ಎಸ್‌ಐಆರ್‌ ಪ್ರಕ್ರಿಯೆಯನ್ನು ಪ್ರತ್ಯೇಕವಾಗಿ  ಪ್ರಶ್ನಿಸಬಹುದಾದರೂ ಈ ಅರ್ಜಿ ಎಸ್‌ಐಆರ್‌ ಪ್ರಕ್ರಿಯೆಯನ್ನು ಮುಂದೂಡುವಂತೆ ಮಾತ್ರ ಕೇಳುತ್ತಿದೆ ಎಂದು ಕೇರಳ ಸರ್ಕಾರ ತಿಳಿಸಿದೆ.  

ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ 68,000 ಪೊಲೀಸ್ ಮತ್ತಿತರ ಭದ್ರತಾ ಸಿಬ್ಬಂದಿ ಜೊತೆಗೆ, ಸರ್ಕಾರಿ ಮತ್ತು ಅರೆ ಸರ್ಕಾರಿ ವಲಯದಿಂದ  1.76 ಲಕ್ಷ ಸಿಬ್ಬಂದಿ ಅಗತ್ಯವಿದೆ. ಎಸ್‌ಐಆರ್‌ ನಡೆಸಲು ಸುಮಾರು 25,668 ಹೆಚ್ಚುವರಿ ಸಿಬ್ಬಂದಿ ಅಗತ್ಯವಿದೆ. ಇದು ಆಡಳಿತ ವ್ಯವಸ್ಥೆ ಮೇಲೆ ಇಡಿಯಾಗಿ ಒತ್ತಡ ಉಂಟು ಮಾಡಿ ದಿನನಿತ್ಯದ ಆಡಳಿತ ಕಾರ್ಯಗಳು ಸ್ಥಗಿತಗೊಳ್ಳುತ್ತವೆ. ಒಂದೇ ತರಬೇತಿ ಪಡೆದ ಸಿಬ್ಬಂದಿಯನ್ನು ಎರಡೂ ಕಾರ್ಯಗಳಿಗೆ ನಿಯೋಜಿಸಲಾಗದು ಎಂದು ಅರ್ಜಿ ದೂರಿದೆ.

ಎರಡೂ ಕಾರ್ಯಗಳಿಗೆ ಭಾರೀ ಸಂಖ್ಯೆಯಲ್ಲಿ ನಾಗರಿಕ ಮತ್ತು ಭದ್ರತಾ ಸಿಬ್ಬಂದಿ ಸೇವೆ ಅಗತ್ಯವಾಗಿರುತ್ತದೆ. ಸಂವಿಧಾನಬದ್ಧವಾಗಿ ನಡೆಯಬೇಕಾದ ಚುನಾವಣೆ ಕಾರ್ಯಗಳ ನಡುವೆ ಎಸ್‌ಐಆರ್‌ ಪ್ರಕ್ರಿಯೆಯನ್ನು ತರಾತುರಿಯಲ್ಲಿ ಮತ್ತು ಅಜಾಗರೂಕತೆಯಿಂದ ಪೂರ್ಣಗೊಳಿಸುವುದು ಮತದಾರರ ಪಟ್ಟಿ ಪರಿಷ್ಕರಣೆಯ ಗುಣಮಟ್ಟಕ್ಕೆ ಧಕ್ಕೆ ತರುತ್ತದೆ. ಅಲ್ಲದೆ ಪ್ರಜಾಪ್ರಭುತ್ವದ ಆಧಾರ ಸ್ತಂಭವಾದ ಮತದಾರರು ತಮ್ಮ ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕಾದ ಮತದಾನದ ಹಕ್ಕನ್ನು ಸದುಪಯೋಗಪಡಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ ಎಂದು ಅರ್ಜಿ ವಿವರಿಸಿದೆ.

Also Read
ಎಸ್ಐಆರ್ ಮುಂದೂಡಿಕೆ ಕೋರಿದ್ದ ಕೇರಳ ಸರ್ಕಾರದ ಮನವಿ ತಿರಸ್ಕರಿಸಿದ ಹೈಕೋರ್ಟ್: ಸುಪ್ರೀಂಗೆ ಅರ್ಜಿ ಸಲ್ಲಿಸಲು ಸಲಹೆ

ಎಸ್‌ಐಆರ್‌ ಪೂರ್ಣಗೊಳಿಸಲು ಈಗ ಯಾವುದೇ ತುರ್ತು ಇಲ್ಲ. ಅಲ್ಲದೆ ರಾಜ್ಯದಲ್ಲಿ ಆಮೂಲಾಗ್ರ ಪರಿಷ್ಕರಣೆಗೆ ಇಸಿಐ ವಿಶೇಷ ಕಾರಣಗಳನ್ನೂ ನೀಡಿಲ್ಲ ಎಂದು ಕೇರಳ ವಾದಿಸಿದೆ. 

“ರಾಜ್ಯದಲ್ಲಿ 2025ರ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಡಿಸೆಂಬರ್ 21, 2025ರೊಳಗೆ ಪೂರ್ಣಗೊಳಿಸಲು ಸಂವಿಧಾನ ಹಾಗೂ ಕಾನೂನುಬದ್ಧ ಆದೇಶವಿದ್ದರೂ, ಚುನಾವಣೆಯ ಜೊತೆಯಲ್ಲೇ ಎಸ್‌ಐಆರ್‌ ನಡೆಸಬೇಕು ಎನ್ನುವುದಕ್ಕೆ ಯಾವುದೇ ಕಾನೂನುಬದ್ಧ ಒತ್ತಾಯ ಇಲ್ಲ ಅಥವಾ ತುರ್ತು ಅಗತ್ಯವೂ ಇಲ್ಲ. ರಾಜ್ಯದಲ್ಲಿ ಎಸ್‌ಐಆರ್‌ ನಡೆಸಲು ಇರುವ ವಿಶೇಷ ಅಗತ್ಯತೆಗಳನ್ನು ಚುನಾವಣಾ ಆಯೋಗ ವಿವರಿಸಿಲ್ಲ. ಹೀಗಾಗಿ ಚುನಾವಣೆ ಮುಗಿಯುವವರೆಗೆ ಎಸ್‌ಐಆರ್‌ ಮುಂದೂಡಿದರೆ ಯಾವುದೇ ಪಕ್ಷಕಾರರಿಗೆ ಹಾನಿಯಾಗುವುದಿಲ್ಲ ಎಂದು ವಕೀಲ ಸಿ ಕೆ ಶಶಿ ಅವರ ಮೂಲಕ ಸಲ್ಲಿಸಿರುವ ಅರ್ಜಿ ತಿಳಿಸಿದೆ.

Kannada Bar & Bench
kannada.barandbench.com