HD Kumaraswamy Karnataka HC
HD Kumaraswamy Karnataka HC

ಎಚ್‌ಡಿಕೆ ವಿರುದ್ಧದ ಹಗರಣ: ಕಬಳಿಸಲಾದ ಭೂಮಿ 14 ಎಕರೆಯೋ, 71 ಎಕರೆಯೋ ಎಂದು ಪರಿಶೀಲಿಸಲು ಕಾಲಾವಕಾಶ ನೀಡಿದ ಹೈಕೋರ್ಟ್

ಲೋಕಾಯುಕ್ತ ಆದೇಶವು 14 ಎಕರೆಗೆ ಸಂಬಂಧಿಸಿದ್ದೋ ಅಥವಾ 71 ಎಕರೆಗೆ ಸಂಬಂಧಿಸಿದ್ದೋ ಎಂಬುದನ್ನು ಪರಿಶೀಲಿಸಲು ಸರ್ಕಾರ ಕಾಲಾವಕಾಶ ಕೋರಿದೆ. ಹೀಗಾಗಿ, ಅರ್ಜಿಯ ವಿಚಾರಣೆಯನ್ನು 2023ರ ಮೇ 23ಕ್ಕೆ ಮುಂದೂಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ ಮದ್ದೂರು ಶಾಸಕ ಡಿ ಸಿ ತಮ್ಮಣ್ಣ ಮತ್ತಿತರರು ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಅತಿಕ್ರಮಿಸಿದ್ದಾರೆ ಎನ್ನಲಾದ ಭೂಮಿಯು ಲೋಕಾಯುಕ್ತರು ಅನುಮೋದಿಸಿರುವ ವರದಿಯ ಪ್ರಕಾರ 14 ಎಕರೆಯೋ ಅಥವಾ 71 ಎಕರೆಯೋ ಎಂದು ಪರಿಶೀಲಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಕಾಲಾವಕಾಶ ನೀಡಿದೆ.

ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತರು ಆದೇಶ ಮಾಡಿರುವುದನ್ನು ಜಾರಿ ಮಾಡುವಂತೆ ಹೈಕೋರ್ಟ್‌ ಆದೇಶಿಸಿತ್ತು. ಇದನ್ನು ಜಾರಿ ಮಾಡಲು ವಿಫಲವಾಗಿರುವ ರಾಜ್ಯ ಸರ್ಕಾರದ ನಡೆ ಪ್ರಶ್ನಿಸಿ ಎಸ್‌ ಆರ್‌ ಹಿರೇಮಠ ನೇತೃತ್ವದ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ವೆಂಕಟೇಶ್‌ ನಾಯಕ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಸರ್ಕಾರದ ವಕೀಲ ಕಿರಣ್‌ ಕುಮಾರ್‌ ಅವರು 2014ರ ಆಗಸ್ಟ್‌ 4ರ ವರದಿಯನ್ನು ಲೋಕಾಯುಕ್ತರು 2014ರ ಆಗಸ್ಟ್‌ 5ರಂದು ಒಪ್ಪಿದ್ದು, ಲೋಕಾಯುಕ್ತ ಆದೇಶವು 14 ಎಕರೆಗೆ ಸಂಬಂಧಿಸಿದ್ದೋ ಅಥವಾ 71 ಎಕರೆಗೆ ಸಂಬಂಧಿಸಿದ್ದೋ ಎಂಬುದನ್ನು ಪರಿಶೀಲಿಸಲು ಕಾಲಾವಕಾಶ ಕೋರಿದ್ದಾರೆ. ಹೀಗಾಗಿ, ಅರ್ಜಿಯ ವಿಚಾರಣೆಯನ್ನು 2023ರ ಮೇ 23ಕ್ಕೆ ಮುಂದೂಡಲಾಗಿದೆ ಎಂದು ಪೀಠವು ಆದೇಶದಲ್ಲಿ ಹೇಳಿದೆ.

"2023ರ ಮಾರ್ಚ್‌ 16ರ ಆದೇಶದ ಹಿನ್ನೆಲೆಯಲ್ಲಿ ಸರ್ಕಾರದ ವಕೀಲರು ಕಂದಾಯ ಇಲಾಖೆಯ ಕಾರ್ಯದರ್ಶಿ ಎನ್‌ ಜಯರಾಂ ಅವರು ಅಫಿಡವಿಟ್‌ ಅನ್ನು ಸಲ್ಲಿಸಿದ್ದಾರೆ. ಇದರಲ್ಲಿ 2004ರ ಆಗಸ್ಟ್‌ 4ರ ತೆರವು ಆದೇಶದ ಪ್ರಕಾರ ಸರ್ವೆ ನಂ. 8, 9, 10, 16/1, 16/8, 16/24 ಮತ್ತು 79ರಲ್ಲಿನ 14 ಎಕರೆ 4 ಗುಂಟೆ ವಶಕ್ಕೆ ಪಡೆಯಲಾಗಿದೆ. ಸ್ವತಂತ್ರವಾಗಿ ಮಹಜರ್‌ ನಡೆಸಿ, ಇಡೀ ಪ್ರದೇಶಕ್ಕೆ ಫೆನ್ಸ್‌ ಹಾಕಲು ಆದೇಶ ಮಾಡಲಾಗಿದೆ. ಮುಂದುವರಿದು, ಸಂಬಂಧಿತರಿಗೆ ತೆರವು ನೋಟಿಸ್‌ ನೀಡಲಾಗಿದೆ. ಇದಕ್ಕೆ ಮೂವರು ಪ್ರತಿಕ್ರಿಯಿಸಿದ್ದು, ತಾವು ಸರ್ಕಾರದ ಭೂಮಿಯನ್ನು ಒತ್ತುವರಿ ಮಾಡಿಲ್ಲ ಎಂದು ತಿಳಿಸಿದ್ದಾರೆ" ಎಂದು ಆದೇಶದಲ್ಲಿ ಹೇಳಲಾಗಿದೆ.

ಮುಂದುವರಿದು, "ಸಂಬಂಧಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೇಲೆ ಉಲ್ಲೇಖಿಸಿದ ಸರ್ವೆ ನಂಬರ್‌ಗಳಲ್ಲಿನ ಭೂಮಿಯನ್ನು ವಶಕ್ಕೆ ಪಡೆದಿದ್ದು, ಆನಂತರ ಮಹಜರ್‌ ನಡೆಸಿದ್ದಾರೆ. ಆಕ್ಷೇಪಾರ್ಹ ಭೂಮಿಯು ಖಾಲಿ ಬಿದ್ದಿದ್ದು, ಯಾವುದೇ ಚಟುವಟಿಕೆ ನಡೆಸಲಾಗಿಲ್ಲ. ಈ ಸಂದರ್ಭದಲ್ಲಿ ನಡೆಸಲಾದ ಮಹಜರ್‌, ಸ್ಕೆಚ್‌ ಪ್ರತಿಗಳ ಚಿತ್ರಗಳನ್ನು ಲಗತ್ತಿಸಲಾಗಿದೆ” ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.

Also Read
[ಎಚ್‌ಡಿಕೆ ವಿರುದ್ಧದ ಭೂಕಬಳಿಕೆ ಪ್ರಕರಣ] 19 ವರ್ಷವಾದರೂ ಭೂಮಿ ರಕ್ಷಣೆಗೆ ಕ್ರಮಕೈಗೊಂಡಿಲ್ಲ: ಹೈಕೋರ್ಟ್‌ ಅಸಮಾಧಾನ

"ಇದಕ್ಕೆ ಅರ್ಜಿದಾರರ ಪರ ವಕೀಲ ಎಸ್‌ ಬಸವರಾಜ ಅವರು 2014ರ ಆಗಸ್ಟ್‌ 4ರ ಲೋಕಾಯುಕ್ತ ವರದಿಯ ಪ್ರಕಾರ ಒತ್ತುವರಿಯಾಗಿರುವ ಭೂಮಿ 71 ಎಕರೆಯೇ ವಿನಾ 14 ಎಕರೆ 4 ಗುಂಟೆಯಲ್ಲ. ಹೀಗಾಗಿ, ಪ್ರತಿವಾದಿಗಳು ಸಲ್ಲಿಸಿರುವ ಅನುಪಾಲನಾ ವರದಿಯನ್ನು ತಿರಸ್ಕರಿಸಬೇಕು ಎಂದು ಸಂವಿಧಾನದ 217ನೇ ವಿಧಿ ಜೊತೆಗೆ ನ್ಯಾಯಾಂಗ ನಿಂದನೆ ಕಾಯಿದೆ ಸೆಕ್ಷನ್‌ 12ರ ಅಡಿ ಅರ್ಜಿ ಸಲ್ಲಿಸಿದ್ದಾರೆ. ಲೋಕಾಯುಕ್ತರು 2014ರ ಆಗಸ್ಟ್‌ 5ರಂದು ಅನುಮೋದಿಸಿರುವ ವರದಿ ಮತ್ತು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅವರು 2014ರ ಆಗಸ್ಟ್‌ 4ರ ಆದೇಶವನ್ನು ಪಾಲನೆ ಮಾಡಲಾಗುವುದು. ಸದ್ಯ ಭೂಮಿಯನ್ನು ವಶಕ್ಕೆ ಪಡೆದಿಲ್ಲ ಎಂದು ತಿಳಿಸಿರುವುದಾಗಿ ಹೈಕೋರ್ಟ್‌ನ ವಿಭಾಗೀಯ ಪೀಠವು 2020ರ ಜನವರಿ 14ರ ಆದೇಶದಲ್ಲಿ ದಾಖಲಿಸಿದೆ ಎಂದು ಪೀಠಕ್ಕೆ ವಿವರಿಸಿದ್ದಾರೆ" ಎಂದೂ ದಾಖಲಿಸಲಾಗಿದೆ.

ಈ ಸಂದರ್ಭದಲ್ಲಿ ಸರ್ಕಾರದ ವಕೀಲರು ಲೋಕಾಯುಕ್ತ ವರದಿಯ ಪ್ರಕಾರ ಒತ್ತುವರಿಯಾಗಿರುವ ಭೂಮಿಯು 14 ಎಕರೆಯೋ ಅಥವಾ 71 ಎಕರೆಯೋ ಎಂದು ಪರಿಶೀಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು. ನ್ಯಾಯಾಲಯವು ಇದಕ್ಕೆ ಸಹಮತ ವ್ಯಕ್ತಪಡಿಸಿ, ವಿಚಾರಣೆ ಮುಂದೂಡಿದೆ.

Related Stories

No stories found.
Kannada Bar & Bench
kannada.barandbench.com