[ಕಾನೂನುಬಾಹಿರ ಸಭೆ] ಕೆಲವರ ಗುರುತು ಸಿಗದಿದ್ದರೂ ಐದಕ್ಕಿಂತ ಕಡಿಮೆ ಮಂದಿ ವಿರುದ್ಧವೂ ಪ್ರಕರಣ ದಾಖಲಿಸಬಹುದು: ಸುಪ್ರೀಂ

ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 149 ಅನ್ವಯಿಸಲು ಅನುಮತಿ ಇಲ್ಲ ಎಂದು ತಿಳಿಸಿದ ನ್ಯಾಯಾಲಯ ಮೇಲ್ಮನವಿಯನ್ನು ಒಪ್ಪಿ ಮಧ್ಯಪ್ರದೇಶ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿತು.
Justices Ajay Rastogi, Abhay S Oka and Supreme Court

Justices Ajay Rastogi, Abhay S Oka and Supreme Court

ಅಪರಾಧ ಎಸಗುವ ಉದ್ದೇಶದಿಂದ ಕಾನೂನುಬಾಹಿರ ಗುಂಪುಗೂಡುವಿಕೆ ವೇಳೆ ಐದಕ್ಕೂ ಹೆಚ್ಚು ಜನ ಭಾಗವಹಿಸಿದ್ದು ಅವರಲ್ಲಿ ಕೆಲವರನ್ನು ಗುರುತಿಸಲಾಗದೆ, ಹೆಸರಿಸದೇ ಇದ್ದರೂ ಐದಕ್ಕಿಂತ ಕಡಿಮೆ ಜನರ ವಿರುದ್ಧವೂ ಐಪಿಸಿಯ ಸೆಕ್ಷನ್ 149ರ ಅಡಿ ಪ್ರಕರಣ ದಾಖಲಿಸಬಹುದು ಎಂದ ಸುಪ್ರೀಂಕೋರ್ಟ್‌ ಹೇಳಿದೆ. [ಮಹೇಂದ್ರ ಮತ್ತು ಮಧ್ಯಪ್ರದೇಶ ಸರ್ಕಾರದ ನಡುವಣ ಪ್ರಕರಣ] .

ಐಪಿಸಿಯ ಸೆಕ್ಷನ್ 141ರ ಪ್ರಕಾರ ಗುಂಪಿನ ಸದಸ್ಯರು ಐದು ಅಥವಾ ಅದಕ್ಕಿಂತ ಹೆಚ್ಚು ಇರಬೇಕು ಎಂಬುದು ಅತ್ಯಗತ್ಯ ಷರತ್ತಾದರೂ, ಐದು ಅಥವಾ ಹೆಚ್ಚಿನ ವ್ಯಕ್ತಿಗಳನ್ನು ನ್ಯಾಯಾಲಯದ ಮುಂದೆ ಕಡ್ಡಾಯವಾಗಿ ಹಾಜರುಪಡಿಸುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಅಜಯ್ ರಾಸ್ತೋಗಿ ಮತ್ತು ಅಭಯ್ ಎಸ್ ಓಕಾ ಅವರಿದ್ದ ಪೀಠ ತಿಳಿಸಿದೆ.

Also Read
ನೌಕರರ ಕಾಯಮಾತಿ ಪ್ರಕರಣ: ಕರ್ನಾಟಕ ಸಿಎಸ್ ಮತ್ತಿತರರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಸುಪ್ರೀಂ ತಡೆ

ಪ್ರಾಸಿಕ್ಯೂಷನ್‌ ಪ್ರಕಾರ ನ್ಯಾಯಾಲಯದ ಮುಂದೆ ಹಾಜರಿರುವ ವ್ಯಕ್ತಿಗಳು ಮತ್ತು ಲೆಕ್ಕ ಹಾಕಲಾದ ಇತರರು ಸೇರಿ ಐದಕ್ಕಿಂತ ಹೆಚ್ಚು ಮಂದಿ ಕಾನೂನುಬಾಹಿರವಾಗಿ ಸಭೆ ಸೇರಿದ್ದು ಒಂದು ವೇಳೆ ಉಳಿದವರನ್ನು ಗುರುತಿಸದೆ ಮತ್ತು ಹೆಸರಿಸದೇ ಇದ್ದರೂ ಕೂಡ ಸೆಕ್ಷನ್ 149ರ ಅಡಿ ಐದಕ್ಕಿಂತ ಕಡಿಮೆ ಸಂಖ್ಯೆಯಲ್ಲಿರುವ ವ್ಯಕ್ತಿಗಳ ಮೇಲೆ ಆರೋಪ ನಿಗದಿಪಡಿಸಬಹುದಾಗಿದೆ ಎಂಬುದಾಗಿ ನ್ಯಾಯಾಲಯ ತಿಳಿಸಿದೆ.

ಆದರೂ ಐದಕ್ಕಿಂತ ಹೆಚ್ಚು ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದ್ದು ಅವರು ವಿಚಾರಣೆ ಎದುರಿಸಿ ಕೆಲವರು ಖುಲಾಸೆಗೊಂಡು ಸಭೆ ಸೇರಿದವರ ಸಂಖ್ಯೆ 5 ಕ್ಕಿಂತ ಕಡಿಮೆಯಿದ್ದರೆ ಆಗ ಸೆಕ್ಷನ್ 149ರ ಅಡಿಯಲ್ಲಿ ಉಳಿದವರನ್ನು ಅಪರಾಧಿ ಎಂದು ಪರಿಗಣಿಸಲಾಗದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಐಪಿಸಿ ಸೆಕ್ಷನ್ 149ರ ಅಡಿಯಲ್ಲಿ ಎಸಗಿದ ಅಪರಾಧಕ್ಕಾಗಿ ಆರೋಪಿಗಳನ್ನು ಅಪರಾಧಿಗಳೆಂದು ಪರಿಗಣಿಸುವ ಕೆಳ ಹಂತದ ನ್ಯಾಯಾಲಯಗಳ ಆದೇಶವನ್ನು ಎತ್ತಿಹಿಡಿದ ಮಧ್ಯಪ್ರದೇಶ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ಪೀಠದಲ್ಲಿ ನಡೆಯಿತು.

ದೂರುದಾರ ಮತ್ತು ಆತನ ಮಗನ ಮೇಲೆ 20 ಜನರ ತಂಡ ಹಲ್ಲೆ ನಡೆಸಿತ್ತು. ಅವರಲ್ಲಿ ಕೆಲವರನ್ನಷ್ಟೇ ಗುರುತಿಸಲು ಮತ್ತು ಹೆಸರಿಸಲು ಅವರಿಗೆ ಸಾಧ್ಯವಾಗಿತ್ತು. ಉಳಿದವರನ್ನು ತನಿಖೆಯ ವೇಳೆ ಬಂಧಿಸಲಾಗಿತ್ತು. ಎಲ್ಲಾ 20 ಮಂದಿ ವಿಚಾರಣೆ ಎದುರಿಸಿದ್ದರು, ಆದರೆ ಕಾನೂನುಬಾಹಿರ ಸಭೆ ಸೇರಿದ್ದಕ್ಕಾಗಿ ಮೂವರನ್ನು ಮಾತ್ರ ಶಿಕ್ಷೆಗೆ ಒಳಪಡಿಸಲಾಗಿತ್ತು.

Also Read
ಸುಧಾರಣಾ ಪರೀಕ್ಷಾ ಅಂಕಗಳನ್ನು ಅಂತಿಮ ಎಂದು ಪರಿಗಣಿಸಿದ್ದ ಸಿಬಿಎಸ್‌ಇ ನಿರ್ಧಾರ ವಜಾ ಮಾಡಿದ ಸುಪ್ರೀಂ ಕೋರ್ಟ್‌

ಕಾನೂನುಬಾಹಿರ ಸಭೆ ಸೇರಿದ ಅಪರಾಧವನ್ನು ಸಾಬೀತುಪಡಿಸಲು ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಇರಬೇಕಿರುವುದರಿಂದ, ಕೇವಲ ಮೂವರಿಗೆ ಶಿಕ್ಷೆ ವಿಧಿಸಿ 17 ಮಂದಿಯನ್ನು ಖುಲಾಸೆಗೊಳಿಸಿರುವುದರಿಂದ ಪ್ರಕರಣಕ್ಕೆ ಪೂರಕ ಅಂಶ ಒದಗಿಸಲು ವಿಫಲವಾಗಿದೆ ಎಂದು ಆರೋಪಿಗಳು ವಾದಿಸಿದ್ದರು.

ಈ ವಾದ ಮನ್ನಿಸಿದ ಸುಪ್ರೀಂಕೋರ್ಟ್‌2 0 ಆರೋಪಿಗಳನ್ನು ದೂರುದಾರರು ನಿರ್ದಿಷ್ಟವಾಗಿ ಹೆಸರಿಸಿದ್ದು ತನಿಖೆಯ ನಂತರ, ಎಲ್ಲಾ 20 ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಯಿತು. ಬಳಿಕ ಅವರು ವಿಚಾರಣೆ ಎದುರಿಸಿದರು. ಈ ಪೈಕಿ 17 ಮಂದಿಯನ್ನು ಖುಲಾಸೆಗೊಳಿಸಲಾಗಿದೆ ಎಂದಿತು.

ಆರೋಪಪಟ್ಟಿಯಲ್ಲಿರುವವರು ಮತ್ತು ವಿಚಾರಣೆ ಎದುರಿಸಿದವರನ್ನು ಹೊರತುಪಡಿಸಿ ಹೆಸರಿಸದ ಅಥವಾ ಅಪರಿಚಿತ ವ್ಯಕ್ತಿಗಳು ಇದ್ದಾರೆ ಎಂಬುದಾಗಿ ಪ್ರಾಸಿಕ್ಯೂಷನ್ ಹೇಳುವಂತಿಲ್ಲ ಎಂದು ಅದು ತಿಳಿಸಿತು.

"ಇತರ ಸಹ-ಆರೋಪಿಗಳು ವಿಚಾರಣೆ ಎದುರಿಸಿದಾಗ ಅವರ ಮೇಲೆ ವಿಶ್ವಾಸವಿರಿಸಿ ಖುಲಾಸೆಗೊಳಿಸಲಾಗಿದ್ದು, ಸಂತ್ರಸ್ತರ ಮೇಲೆ ದಾಳಿ ನಡೆಸುವಾಗ ಅಪೀಲುದಾರರೊಂದಿಗೆ ಇತರ ಕೆಲವು ವ್ಯಕ್ತಿಗಳು ಇದ್ದಿರಬೇಕು ಎಂಬ ಅಭಿಪ್ರಾಯವನ್ನು (ಪ್ರಾಸಿಕ್ಯೂಷನ್‌) ವ್ಯಕ್ತಪಡಿಸಲು ಅನುಮತಿಸಲಾಗದು" ಎಂದು ತೀರ್ಪು ಹೇಳಿದೆ. ಸನ್ನಿವೇಶ ಮತ್ತು ಸಂದರ್ಭಾನುಸಾರ ಪ್ರಕರಣದಲ್ಲಿ ಐಪಿಸಿ ಸೆಕ್ಷನ್‌ 149 ಅನ್ವಯಿಸಲು ಅನುಮತಿ ಇಲ್ಲ ಎಂದು ತಿಳಿಸಿದ ನ್ಯಾಯಾಲಯ ಮೇಲ್ಮನವಿಯನ್ನು ಒಪ್ಪಿ ಹೈಕೋರ್ಟ್‌ ತೀರ್ಪನ್ನು ರದ್ದುಗೊಳಿಸಿತು.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

Attachment
PDF
Mahendra_vs_State_of_MP.pdf
Preview

Related Stories

No stories found.
Kannada Bar & Bench
kannada.barandbench.com