ನ್ಯಾಯಾಂಗ ನಿಂದನೆ ತೀರ್ಪು: ವಿಜಯ ಮಲ್ಯ ತೀರ್ಪು ಮರುಪರಿಶೀಲನಾ ಅರ್ಜಿ ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ಬ್ಯಾಂಕ್ ಸುಸ್ತಿದಾರ ಪ್ರಕರಣದಲ್ಲಿ ನ್ಯಾಯಾಂಗ ನಿಂದನೆ ಶಿಕ್ಷೆಗೆ ಗುರಿಯಾಗಿದ್ದ ವಿಜಯ್ ಮಲ್ಯರನ್ನು ಜುಲೈ 10ರಂದು ಖುದ್ದು ಹಾಜರಿರುವಂತೆ 2017ರ ಮೇ 9ರಂದು ಸುಪ್ರೀಂ ಕೋರ್ಟ್ ಸೂಚಿಸಿತ್ತು.
ನ್ಯಾಯಾಂಗ ನಿಂದನೆ ತೀರ್ಪು: ವಿಜಯ ಮಲ್ಯ ತೀರ್ಪು ಮರುಪರಿಶೀಲನಾ ಅರ್ಜಿ ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್

2017ರ ಮೇನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಲ್ಪಟ್ಟಿರುವ ದೇಶ ತೊರೆದ ಉದ್ಯಮಿ ವಿಜಯ್ ಮಲ್ಯ ಸಲ್ಲಿಸಿದ್ದ ತೀರ್ಪು ಮರುಪರಿಶೀಲನಾ ಅರ್ಜಿಯ ಆದೇಶವನ್ನು ಸುಪ್ರೀಂ ಕೋರ್ಟ್‌ ಗುರುವಾರ ಕಾಯ್ದಿರಿಸಿದೆ.

ನ್ಯಾಯಮೂರ್ತಿಗಳಾದ ಯು ಯು ಲಲಿತ್ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಅರ್ಜಿ ವಿಚಾರಣೆ ನಡೆಸಿತು. ನ್ಯಾಯಾಲಯಕ್ಕೆ ಸಲ್ಲಿಸಲಾದ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳಲ್ಲಿ ಮಲ್ಯ ಸಲ್ಲಿಸಿದ್ದ ಪ್ರಮುಖ ಪ್ರತಿಕ್ರಿಯೆ ಪತ್ತೆಯಾಗದ ಹಿನ್ನೆಲೆಯಲ್ಲಿ ಹಿಂದೆ ಪ್ರಕರಣವನ್ನು ಮುಂದೂಡಲಾಗಿತ್ತು.

ಸದ್ಯ ನಿಷ್ಕ್ರಿಯವಾಗಿರುವ ಕಿಂಗ್ ಫಿಶರ್ ಏರ್ ಲೈನ್ಸ್ ಒಳಗೊಂಡ 9,000 ಕೋಟಿ ರೂಪಾಯಿ ಬ್ಯಾಂಕ್ ಸುಸ್ತಿ ಪ್ರಕರಣದಲ್ಲಿ ಮಲ್ಯ ಆರೋಪಿಯಾಗಿದ್ದಾರೆ. ಈ ಸಂಬಂಧ ಬ್ಯಾಂಕ್ ಗಳ ಒಕ್ಕೂಟವು ಸುಪ್ರೀಂ ಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಸಿವೆ.

ಬ್ಯಾಂಕ್ ಸುಸ್ತಿ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಲ್ಪಟ್ಟಿದ್ದ ಮಲ್ಯರನ್ನು ಜುಲೈ 10ರಂದು ಖುದ್ದು ಹಾಜರಿರುವಂತೆ 2017ರ ಮೇ 9ರ ಆದೇಶದಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶಿಸಿತ್ತು. ಆ ಬಳಿಕ ಮಲ್ಯ ಸುಪ್ರೀಂ ಕೋರ್ಟ್‌ ನಲ್ಲಿ ತೀರ್ಪು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

Also Read
ವರ್ಷದ ನಂತರ ನಿವೃತ್ತ ನ್ಯಾ. ರಮೇಶ್ ವಿರುದ್ಧದ ದೋಷಪೂರಿತ ವರದಿ ಕೈಬಿಟ್ಟ ಬೆಂಗಳೂರು ಮಿರರ್; ಬೇಷರತ್ ಕ್ಷಮೆಯಾಚನೆ

ಕರ್ನಾಟಕ ಹೈಕೋರ್ಟ್‌ ಆದೇಶ ಉಲ್ಲಂಘಿಸಿದ್ದ ವಿಜಯ್ ಮಲ್ಯ ಸತ್ಯವನ್ನು ಬಚ್ಚಿಟ್ಟು, ನಿಯಮಗಳನ್ನು ಉಲ್ಲಂಘಿಸಿ ಪುತ್ರ ಸಿದ್ಧಾರ್ಥ್‌ ಮಲ್ಯ ಮತ್ತು ಪುತ್ರಿಯರಾದ ಲಿಯನ್ನಾ ಮತ್ತು ತಾನ್ಯಾ ಮಲ್ಯರಿಗೆ ಹಣ ವರ್ಗಾಯಿಸಿದ್ದಾರೆ ಎಂದು ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ಬ್ಯಾಂಕ್ ಗಳು ಆರೋಪಿಸಿದ್ದವು.

ಮಲ್ಯ ಸಲ್ಲಿಸಿದ ಮರುಪರಿಶೀಲನಾ ಅರ್ಜಿಯನ್ನು ಮೂರು ವರ್ಷವಾದರೂ ಯಾಕೆ ವಿಚಾರಣೆಗೆ ಪ್ರಸ್ತುತಪಡಿಸಿಲ್ಲ ಎಂದು ಜೂನ್ 19ರಂದು ರೆಜಿಸ್ಟ್ರಿಯನ್ನು ನ್ಯಾಯಾಲಯ ಪ್ರಶ್ನಿಸಿತ್ತು. ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳ ಬಗ್ಗೆಯೂ ಮಾಹಿತಿ ನೀಡುವಂತೆ ನ್ಯಾಯಾಲಯವು ರೆಜಿಸ್ಟ್ರಿಗೆ ಸೂಚಿಸಿತ್ತು.

Related Stories

No stories found.
Kannada Bar & Bench
kannada.barandbench.com