ಆರ್‌ಎಸ್‌ಎಸ್‌, ಪ್ರಧಾನಿ ಮೋದಿ ವ್ಯಂಗ್ಯಚಿತ್ರ: ಕಲಾವಿದನಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಮಧ್ಯಪ್ರದೇಶ ಹೈಕೋರ್ಟ್

ಮಾಳವೀಯ ಅವರು ವಾಕ್ ಸ್ವಾತಂತ್ರ್ಯ ದುರುಪಯೋಗಪಡಿಸಿಕೊಂಡಿದ್ದು ಚಿತ್ರ ಬರೆಯುವಾಗ ವಿವೇಚನೆ ಬಳಸಬೇಕಿತ್ತು ಎಂದು ನ್ಯಾಯಮೂರ್ತಿ ಸುಬೋಧ್ ಅಭ್ಯಂಕರ್ ತಿಳಿಸಿದರು.
ಆರ್‌ಎಸ್‌ಎಸ್‌, ಪ್ರಧಾನಿ ಮೋದಿ ವ್ಯಂಗ್ಯಚಿತ್ರ: ಕಲಾವಿದನಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಮಧ್ಯಪ್ರದೇಶ ಹೈಕೋರ್ಟ್
Published on

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಅಗೌರವಯುತ ರೀತಿಯಲ್ಲಿ ಚಿತ್ರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ಇಂದೋರ್ ಮೂಲದ ವ್ಯಂಗ್ಯಚಿತ್ರಕಾರ ಹೇಮಂತ್ ಮಾಳವೀಯ ಅವರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದೆ [ಹೇಮಂತ್ ಮಾಳವೀಯ ಮತ್ತು ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣ] .

ಮಾಳವೀಯ ಅವರು ವಾಕ್ ಸ್ವಾತಂತ್ರ್ಯ ದುರುಪಯೋಗಪಡಿಸಿಕೊಂಡಿದ್ದು ಚಿತ್ರ ಬರೆಯುವಾಗ ವಿವೇಚನೆ ಬಳಸಬೇಕಿತ್ತು ಎಂದು ನ್ಯಾಯಮೂರ್ತಿ ಸುಬೋಧ್ ಅಭ್ಯಂಕರ್ ಅವರು ಜುಲೈ 3ರಂದು ಹೊರಡಿಸಲಾದ ಆದೇಶದಲ್ಲಿ ತಿಳಿಸಿದ್ದಾರೆ.

Also Read
ಆರ್‌ಎಸ್‌ಎಸ್‌ ಸಮಾವೇಶಕ್ಕೆ ಅನುಮತಿಸಿದ ಕಲ್ಕತ್ತಾ ಹೈಕೋರ್ಟ್: ಪ.ಬಂಗಾಳ ಸರ್ಕಾರದ ಆಕ್ಷೇಪಣೆಗೆ ತಿರಸ್ಕಾರ

ವ್ಯಂಗ್ಯಚಿತ್ರಕಾರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಎಲ್ಲೆಯನ್ನು ಮೀರಿದ್ದು ಅವರನ್ನು ಕಸ್ಟಡಿ ವಿಚಾರಣೆಗೆ ಒಳಪಡಿಸುವಂತೆ ನ್ಯಾಯಾಲಯ ಆದೇಶಿಸಿತು.

ವ್ಯಂಗ್ಯಚಿತ್ರದಲ್ಲಿ ದೇಶದ ಪ್ರಧಾನ ಮಂತ್ರಿಯೊಂದಿಗೆ ಆರ್‌ ಎಸ್‌ಎಸ್‌ ಹಿಂದೂ ಸಂಘಟನೆಯನ್ನು ಚಿತ್ರಿಸಿರುವ ಅರ್ಜಿದಾರರ ನಡೆ ಮತ್ತು ಅದಕ್ಕೆ ನೀಡಲಾಗಿರುವ ಹೇಳಿಕೆಯಲ್ಲಿ ಹಿಂದೂ ದೈವ ಶಿವನ ಹೆಸರನ್ನು ಅನಗತ್ಯವಾಗಿ ಎಳೆದು ತಂದಿರುವುದು ಸಂವಿಧಾನದ 19(1) (ಎ) ವಿಧಿಯಡಿಯಲ್ಲಿ ಪ್ರತಿಪಾದಿಸಲಾದ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸಂಪೂರ್ಣ ದುರುಪಯೋಗವಲ್ಲದೆ ಬೇರೇನೂ ಅಲ್ಲ. ಇದು ದೂರುದಾರರು ವಾದಿಸಿದಂತೆ ಅಪರಾಧದ ವ್ಯಾಖ್ಯೆಯಡಿ ಬರುತ್ತದೆ ಎಂದು ಏಕಸದಸ್ಯ ಪೀಠ ಹೇಳಿದೆ.

ಶಿವನನ್ನು ಕುರಿತ ಅವಹೇಳನಕಾರಿ ಸಾಲುಗಳಿರುವುದರಿಂದ ವ್ಯಂಗ್ಯಚಿತ್ರ ಇನ್ನಷ್ಟು ವಿಚಲಿತಗೊಳಿಸುತ್ತದೆ. ವ್ಯಂಗ್ಯಚಿತ್ರವನ್ನು ಬಳಸಲು ಅವರು ಬೇರೆಯವರನ್ನು ಪ್ರಚೋದಿಸಿರುವುದರಿಂದ ಇದು ಸದಭಿರುಚಿಯಿಂದಾಗಲಿ ಅಥವಾ ಉತ್ತಮ ಆಸ್ಥೆಯಿಂದಾಗಲಿ ರೂಪಿತಗೊಂಡಿದೆ ಎನಿಸದು ಎಂದು ಅದು ಹೇಳಿದೆ.

ಅರ್ಜಿದಾರರ ಕೃತ್ಯ ದುರುದ್ದೇಶದಿಂದ ಕೂಡಿದ್ದು, ದೂರುದಾರರ ಮತ್ತು ಸಾರ್ವಜನಿಕರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶ ಹೊಂದಿದೆ. ಸಮಾಜದಲ್ಲಿ ಸಾಮರಸ್ಯಕ್ಕೆ ಧಕ್ಕೆ ತರುವಂತಿದೆ ಎಂದು ನ್ಯಾಯಾಲಯ ನುಡಿಯಿತು.

Also Read
ಸಿಪಿಎಂ ಕಾರ್ಯಕರ್ತನ ಹತ್ಯೆ: 8 ಆರ್‌ಎಸ್‌ಎಸ್‌ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೇರಳ ನ್ಯಾಯಾಲಯ

ಮಾಳವೀಯಾ ಅಪರಾಧ ಎಸಗುವ ಮತ್ತು ಭವಿಷ್ಯದಲ್ಲಿ ಅದನ್ನು ಉತ್ತೇಜಿಸುವ ಪ್ರವೃತ್ತಿಯನ್ನು ಸ್ಪಷ್ಟವಾಗಿ ಪ್ರದರ್ಶಿಸಿದ್ದಾರೆ. ಆದ್ದರಿಂದ ಅವರು ಕಾನೂನು ರಕ್ಷಣೆಗಳಿಗೆ ಅರ್ಹರಲ್ಲ ಎಂದು ಪೀಠ ನುಡಿಯಿತು.

ಮನಸೋ ಇಚ್ಛೆಯ ಬಂಧನದ ವಿರುದ್ಧ ಸುಪ್ರೀಂ ಕೋರ್ಟ್‌ ನೀಡಿದ ಮಾರ್ಗದರ್ಶನವನ್ನು ಪಾಲಿಸುತ್ತಿಲ್ಲ ಎಂಬ ಮಾಳವೀಯಾ ಪರ ವಕೀಲರ ವಾದ ಒಪ್ಪದ ನ್ಯಾಯಾಲಯ ಅರ್ನೇಶ್‌ ಕುಮಾರ್‌ ಪ್ರಕರಣದಲ್ಲಿ ನೀಡಿದ್ದ ಮಾರ್ಗಸೂಚಿ ಈ ಪ್ರಕರಣದಲ್ಲಿ ಮಾಳವೀಯ ಅವರಿಗೆ ಅನ್ವಯವಾಗುವುದಿಲ್ಲ ಎಂದಿತು.

Kannada Bar & Bench
kannada.barandbench.com