ಸುದ್ದಿಗಳು
ಶುದ್ಧ ಗಾಳಿಗಾಗಿ ಕಾರ್ ರಹಿತ ದಿನ: ಸಾರಿಗೆ, ದ್ವಿಚಕ್ರ ವಾಹನ ಬಳಸಿದ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿಗಳು, ವಕೀಲರು
ಆಂದೋಲನಕ್ಕೆ ಚಾಲನೆ ನೀಡಿದ ಇಂದೋರ್ ಮಹಾಪೌರರಾದ ಪುಷ್ಯಮಿತ್ರ ಭಾರ್ಗವ ಗಾಳಿಯ ಗುಣಮಟ್ಟ ಮತ್ತು ಸ್ವಚ್ಛತೆಯ ವಿಷಯದಲ್ಲಿ ನಗರ ಮುಂಚೂಣಿಯಲ್ಲಿರಬೇಕು ಎಂದು ಕರೆ ನೀಡಿದರು.
ಇಂದೋರ್ ಮಹಾಪೌರರು ನೀಡಿದ್ದ ಕರೆಗೆ ಓಗೊಟ್ಟು ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ವಕೀಲರು ಈಚೆಗೆ ಸಾರ್ವಜನಿಕ ಸಾರಿಗೆ ಹಾಗೂ ದ್ವಿಚಕ್ರವಾಹನವೇರಿ 'ಕಾರ್ ರಹಿತ ದಿನ' ಆಚರಿಸಿದರು.
ನ್ಯಾಯಮೂರ್ತಿಗಳು, ವಕೀಲರು ಹಾಗೂ ಸಾರ್ವಜನಿಕ ಪ್ರತಿನಿಧಿಗಳು ತಮ್ಮ ಕಚೇರಿಗಳಿಗೆ ಸಾರ್ವಜನಿಕ ಸಾರಿಗೆ ಅಥವಾ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸಿದರು. ಅಂತೆಯೇ ಜಿಲ್ಲಾ ನ್ಯಾಯಾಲಯದ ನ್ಯಾಯಮೂರ್ತಿಗಳು ಕೂಡ ನ್ಯಾಯಾಲಯಕ್ಕೆ ತಲುಪಲು ಸೈಕಲ್ನಲ್ಲಿ ತೆರಳಿದರು ಎಂದು ಮೂಲಗಳು ತಿಳಿಸಿವೆ.
ಮೇಯರ್ ಪುಷ್ಯಮಿತ್ರ ಭಾರ್ಗವ ಅವರು ಸೆಪ್ಟೆಂಬರ್ 22ರಂದು ಕಾರುಗಳನ್ನು ಬಳಸದೆ ಕಾರು ರಹಿತ ದಿನ ಆಚರಿಸಲು ಕರೆ ನೀಡಿದ್ದರು. ಗಾಳಿಯ ಗುಣಮಟ್ಟ ಮತ್ತು ಸ್ವಚ್ಛತೆಯ ವಿಷಯದಲ್ಲಿ ನಗರ ಮುಂಚೂಣಿಯಲ್ಲಿರಬೇಕು ಎಂದು ಅವರು ಹೇಳಿದ್ದರು.
ಮಧ್ಯಪ್ರದೇಶ ಹೈಕೋರ್ಟ್ ಇಂದೋರ್ ಪೀಠ ತನ್ನ ಸಿಬ್ಬಂದಿ, ನ್ಯಾಯಮೂರ್ತಿಗಳು ಮತ್ತು ವಕೀಲರಿಗೆ ಕಾರುಗಳ ಬದಲಿಗೆ ಪರ್ಯಾಯ ಸಾರಿಗೆ ಬಳಸುವಂತೆ ಪ್ರಕಟಣೆ ಹೊರಡಿಸಿತ್ತು.