ನಟ ಸೂರ್ಯಗೆ ಎಚ್ಚರಿಕೆ ನೀಡುತ್ತ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ತೆರೆ ಎಳೆಯಲು ನಿರ್ಧರಿಸಿದ ಮದ್ರಾಸ್ ಹೈಕೋರ್ಟ್

ಬಲಪ್ರಯೋಗ ಮಾಡುವುದು ಸಾಂವಿಧಾನಿಕ ನ್ಯಾಯಾಲಯದ ಕೆಲಸವಲ್ಲ. ಇದು ನ್ಯಾಯಾಂಗ ನಿಂದನೆಗೆ ಪರಿಗಣಿಸುವ ಸಾಮರ್ಥ್ಯವೂ ಇಲ್ಲದ ಪ್ರಕರಣ ಎನ್ನಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
Actor Surya and Madras Highcourt
Actor Surya and Madras Highcourt

ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು ಎಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ಪ್ರಕರಣ ಮುಂದುವರಿಸಿದಿರಲು ನಿರ್ಧರಿಸಿದೆ. ಕೊರೊನಾ ಸಮಯದಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆ ಎದುರಿಸುವಂತೆ ಸೂಚಿಸಿದ್ದಕ್ಕಾಗಿ ಸೂರ್ಯ ಆಕ್ಷೇಪ ವ್ಯಕ್ತಪಡಿಸಿದ್ದರು.

ಸಾಂಕ್ರಾಮಿಕ ರೋಗದ ಹೊರತಾಗಿಯೂ ನ್ಯಾಯಾಲಯಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಅರಿತಿಲ್ಲ ಮತ್ತು ನೀಟ್ ನಡಾವಳಿಗಳಿಗೂ ತಮಿಳುನಾಡಿನ ನ್ಯಾಯಾಲಯಗಳಿಗೂ ಸಂಬಂಧ ಇಲ್ಲದ ಹಿನ್ನೆಲೆಯಲ್ಲಿ ಸೂರ್ಯ ಆಡಿದ ಮಾತುಗಳು ಅನಗತ್ಯ ಮತ್ತು ಅಸ್ವೀಕಾರಾರ್ಹವಾಗಿದ್ದವು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

Also Read
ನಟ ಸೂರ್ಯ ವಿರುದ್ಧ ನಿಂದನಾ ಪ್ರಕ್ರಿಯೆ ಕೈಗೊಳ್ಳದಂತೆ ಮದ್ರಾಸ್ ಸಿಜೆಗೆ ಆರು ನಿವೃತ್ತ ನ್ಯಾಯಮೂರ್ತಿಗಳು ಹೇಳಿದ್ದೇನು?
Also Read
ಕೋವಿಡ್ ಸಂದರ್ಭದಲ್ಲಿ ನೀಟ್ ನಡೆಸಿದ್ದಕ್ಕೆ ಪ್ರತಿಕ್ರಿಯಿಸಿದ ಸೂರ್ಯ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ: ಸಿಜೆಗೆ ದೂರು

ಮುಖ್ಯ ನ್ಯಾಯಮೂರ್ತಿ ಎ ಪಿ ಸಾಹಿ ಮತ್ತು ನ್ಯಾಯಮೂರ್ತಿ ಸೆಂಥಿಲ್ ರಾಮಮೂರ್ತಿ ಅವರಿದ್ದ ನ್ಯಾಯಪೀಠ ಶುಕ್ರವಾರ ಲಾರ್ಡ್ ಡೆನ್ನಿಂಗ್ ಅವರನ್ನು ಉಲ್ಲೇಖಿಸಿ, ಈ ವಿಷಯವನ್ನು ಮತ್ತಷ್ಟು ಮುಂದುವರಿಸಲು ಬಯಸುವುದಿಲ್ಲ ಎಂದು ಹೇಳಿದೆ:

"ನಾವು ಟೀಕೆಗಳ ಗಾಳಿಗೆ ಒಡ್ಡಿಕೊಂಡಂತೆ, ಈ ವ್ಯಕ್ತಿ ಅಥವಾ ಆ ವ್ಯಕ್ತಿ ಹೇಳಿದ, ಈ ಲೇಖನಿ ಅಥವಾ ಮತ್ತೊಂದರಲ್ಲಿ ಬರೆದ ಎನ್ನುವ ಯಾವುದೇ ಅಂಶಗಳು ನಮ್ಮನ್ನು ಆಯಾ ಸಂದರ್ಭಕ್ಕೆ ಅಗತ್ಯ ಇರುವುದನ್ನು ಮಾಡುವುದರಿಂದ ತಡೆಯುವುದಿಲ್ಲ. ಕೆಟ್ಟ ಕೆಲಸ ನಡೆಯುತ್ತಿದ್ದಾಗ ಮೌನ ಆಯ್ಕೆಯಾಗಬಾರದು. ನಿಸ್ಸಂದೇಹವಾಗಿ ಲೇಖನದಲ್ಲಿ ದೋಷವಿದೆ, ಆದರೆ ದೋಷಗಳು ನ್ಯಾಯಾಂಗ ನಿಂದನೆ ಎನಿಸಿಕೊಳ್ಳುವುದಿಲ್ಲ”

ಲಾರ್ಡ್ ಡೆನ್ನಿಂಗ್ ಅವರನ್ನು ಉಲ್ಲೇಖಿಸಿ ಮದ್ರಾಸ್ ಹೈಕೋರ್ಟ್ ಹೇಳಿದ ಮಾತುಗಳು

ಪ್ರಕರಣಕ್ಕೆ ಇತಿಶ್ರೀ ಹಾಡಿದ ಕೋರ್ಟ್ ಕೆಲ ಎಚ್ಚರಿಕೆಯ ಮಾತುಗಳನ್ನೂ ಹೇಳಿತು:

  • ಆರೋಪ ಮಾಡುವ ಧಾಟಿಯಲ್ಲಿ ಹೇಳಿಕೆ ನೀಡದೆ, ಕ್ಷುಲ್ಲಕವೆನಿಸಿದರೂ ಉದ್ವಿಗ್ನವಾದ ಸ್ಥಿತಿಗೆ ಎಡೆ ಮಾಡಕೊಡದೆ ಶಾಂತ ರೀತಿಯಲ್ಲಿ ಪ್ರತಿಕ್ರಿಯಿಸಬಹುದಿತ್ತು.

  • ಸಾರ್ವಜನಿಕ ಜೀವನದಲ್ಲಿರುವ ಒಬ್ಬ ವ್ಯಕ್ತಿ ತಾನು ನಿಭಾಯಿಸುವ ಜವಾಬ್ದಾರಿಯ ಕಾರಣಕ್ಕಾಗಿ ಆ ಸ್ಥಾನಮಾನ ಅನುಭವಿಸುತ್ತಾನೆಯೇ ಹೊರತು ಇತರೆ ಮನುಷ್ಯರ ಚಟುವಟಿಕೆಯನ್ನು ಸಣ್ಣದಾಗಿ ನೋಡುವ ಮೂಲಕ ಅಲ್ಲ.

  • ಆದರೆ ಇದಕ್ಕಿಂತ ಹೆಚ್ಚಿನದನ್ನು ನಾವು ಹೇಳಲು ಬಯಸುವುದಿಲ್ಲ. ಏಕೆಂದರೆ ನೀಟ್ ಪರೀಕ್ಷೆಗಳು ಮತ್ತು ಅದರ ಸುತ್ತಲಿನ ವಿವಾದವು ತಮಿಳುನಾಡು ರಾಜ್ಯದ ನ್ಯಾಯಾಲಯಗಳ ವ್ಯಾಪ್ತಿಯ ವಿಷಯವಾಗಿರಲಿಲ್ಲ.

  • ಶುದ್ಧ ಆಲೋಚನೆ ವಿಕಸನಗೊಳ್ಳಲೆಂದು ಅಭಿಪ್ರಾಯಗಳು ಮತ್ತು ಭಿನ್ನಮತವನ್ನು ರೂಪಿಸುವುದು ಒಳ್ಳೆಯದು. ಆದರೆ ಕ್ಷುದ್ರತೆ ಕಾಳ್ಗಿಚ್ಚಿನಂತೆ ಹರಡುತ್ತಿದ್ದರೆ ಅದಕ್ಕೆ ಅವಕಾಶ ನೀಡಬಾರದು.

  • ಬಲಪ್ರಯೋಗ ಮಾಡುವುದು ಸಾಂವಿಧಾನಿಕ ನ್ಯಾಯಾಲಯದ ಕೆಲಸವಲ್ಲ. ಇದು ನ್ಯಾಯಾಂಗ ನಿಂದನೆಗೆ ಪರಿಗಣಿಸುವ ಸಾಮರ್ಥ್ಯವೂ ಇಲ್ಲದ ಪ್ರಕರಣವಾಗಿದ್ದು ಕ್ರಿಮಿನಲ್ ಪ್ರಕರಣದ ಮಟ್ಟದಲ್ಲಿ ಚರ್ಚೆ ನಡೆಸಬಹುದಾದ ಪ್ರಕರಣವಲ್ಲ.

  • ಸತ್ಯಾಸತ್ಯತೆಯನ್ನು ಪರಿಶೀಲಿಸಿದ ಖಚಿತಪಡಿಸಿಕೊಂಡ ನಂತರವಷ್ಟೇ ಸಾರ್ವಜನಿಕ ಗ್ರಹಿಕೆ ಕುರಿತಾದ ಯಾವುದೇ ಆತಂಕ ಅಥವಾ ಸೂಕ್ಷ್ಮ ಸಂಗತಿಗಳನ್ನು ಚಿತ್ರಿಸಬೇಕು. ಇಲ್ಲದಿದ್ದರೆ ವಿಕೃತ ಪ್ರವೃತ್ತಿ ಹುಟ್ಟಬಹುದು.

Related Stories

No stories found.
Kannada Bar & Bench
kannada.barandbench.com