
ಸರ್ಕಾರದ ಕಲ್ಯಾಣ ಯೋಜನೆಗೆ ಸಂಬಂಧಿಸಿದ ಜಾಹೀರಾತುಗಳಲ್ಲಿ ಯಾವುದೇ ಜೀವಂತ ವ್ಯಕ್ತಿಯ ಹೆಸರು, ಮಾಜಿ ಮುಖ್ಯಮಂತ್ರಿಗಳು ಮತ್ತು ಸೈದ್ಧಾಂತಿಕ ನಾಯಕರ ಛಾಯಾಚಿತ್ರ ಅಥವಾ ಪಕ್ಷಗಳ ಚಿಹ್ನೆ ಪ್ರದರ್ಶಿಸಬಾರದು ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಸ್ಪಷ್ಟಪಡಿಸಿದೆ.
ರಾಜ್ಯ ಸರ್ಕಾರ ಕಲ್ಯಾಣ ಯೋಜನೆಗಳಿಗೆ ಜೀವಂತ ರಾಜಕೀಯ ವ್ಯಕ್ತಿಗಳ ಹೆಸರಿಡುವುದನ್ನು ಅಥವಾ ಅವರ ಫೋಟೋಗಳನ್ನು ಹಾಗೂ ಪ್ರಚಾರ ಸಾಮಗ್ರಿಗಳಲ್ಲಿ ಪಕ್ಷದ ಲಾಂಛನ ಅಥವಾ ಚಿಹ್ನೆಗಳನ್ನು ಬಳಸುವುದನ್ನು ತಡೆಯಲು ನಿರ್ದೇಶನ ನೀಡುವಂತೆ ಕೋರಿ ಎಐಎಡಿಎಂಕೆ ಸಂಸದ ಸಿ ವಿ ಷಣ್ಮುಗಂ ಅವರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಸುಂದರ್ ಮೋಹನ್ ಅವರಿದ್ದ ಪೀಠ ಈ ಆದೇಶ ನೀಡಿದೆ.
ಸುಪ್ರೀಂ ಕೋರ್ಟ್ ಮಾರ್ಗಸೂಚಿ ಮತ್ತು 2014 ರ ಸರ್ಕಾರಿ ಜಾಹೀರಾತು (ವಸ್ತುವಿಷಯ ನಿಯಂತ್ರಣ) ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ಹಾಲಿ ಮುಖ್ಯಮಂತ್ರಿಯ ಹೆಸರು, ಸೈದ್ಧಾಂತಿಕ ನಾಯಕರ ಚಿತ್ರಗಳು ಮತ್ತು ಆಡಳಿತ ಪಕ್ಷದ ಚಿಹ್ನೆಗಳನ್ನು ಬಳಸಿಕೊಂಡು ಹೊಸ ಯೋಜನೆ ಪ್ರಾರಂಭಿಸಲಾಗುತ್ತಿದೆ ಎಂದು ವಾದಿಸಲಾಗಿತ್ತು.
ಸರ್ಕಾರದ ಪರ ವಾದ ಮಂಡಿಸಿದ ವಕೀಲರು ಅರ್ಜಿದಾರರು ಸಲ್ಲಿಸಿರುವ ದಾಖಲೆಗಳು ಅಧಿಕೃತವಲ್ಲ ಅವು ಅಧಿಕೃತ ಸರ್ಕಾರಿ ಪ್ರಕಟಣೆಗಳಲ್ಲ ಎಂದು ವಾದಿಸಿದರು. ಸೂಕ್ತ ಮಾಹಿತಿಯೊಂದಿಗೆ ಅಫಿಡವಿಟ್ ಸಲ್ಲಿಸಲು ಸಮಯ ನೀಡುವಂತೆ ಅವರು ಕೋರಿದರು. ಇದಲ್ಲದೆ, ಆಡಳಿತ ಪಕ್ಷದ ಪರ ವಕೀಲರು ಈ ಅರ್ಜಿ ರಾಜಕೀಯ ಪ್ರೇರಿತವಾಗಿದೆ ಎಂದರು.
ಕರ್ನಾಟಕ ಸರ್ಕಾರ ಮತ್ತು ಕಾಮನ್ ಕಾಸ್ ಇನ್ನಿತರರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಂತೆ, ಹಾಲಿ ಮುಖ್ಯಮಂತ್ರಿಯ ಛಾಯಾಚಿತ್ರ ಪ್ರಕಟಿಸಲು ಅನುಮತಿ ಇದೆಯಾದರೂ ಸೈದ್ಧಾಂತಿಕ ನಾಯಕರು ಅಥವಾ ಮಾಜಿ ಮುಖ್ಯಮಂತ್ರಿಗಳ ಚಿತ್ರಗಳನ್ನು ಬಳಸುವುದು ಪ್ರಾಥಮಿಕವಾಗಿ ನ್ಯಾಯಾಲಯದ ನಿರ್ದೇಶನಗಳಿಗೆ ವಿರುದ್ಧ ಎಂದು ನ್ಯಾಯಾಲಯ ತಿಳಿಸಿತು.
ಸರ್ಕಾರಿ ಯೋಜನೆಯ ಜಾಹೀರಾತಿನಲ್ಲಿ ರಾಜಕೀಯ ವ್ಯಕ್ತಿಗಳ ಹೆಸರು ಸೇರಿಸಲು ಅವಕಾಶವಿಲ್ಲ ಎಂದು ನ್ಯಾಯಾಲಯವು ಅವಲೋಕಿಸಿತು.
ಇದೇ ವೇಳೆ, ನ್ಯಾಯಾಲಯವು ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ಬಾಕಿ ಇದೆ ಎನ್ನುವ ಅರ್ಜಿದಾರರ ದೂರುಗಳ ಆಧಾರದ ಮೇಲೆ ಚುನಾವಣಾ ಆಯೋಗವು ವಿಚಾರಣೆಯನ್ನು ಆರಂಭಿಸದೆ ಇರುವಂತಿಲ್ಲ ಎಂದು ಸ್ಪಷ್ಟಪಡಿಸಿತು. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 13 ರಂದು ನಡೆಯಲಿದೆ.