ತಮಿಳುನಾಡು ಲೋಕಸೇವಾ ಆಯೋಗ (ಟಿಎನ್ಪಿಎಸ್ಸಿ) ನಡೆಸಿದ ಪರೀಕ್ಷೆಯ ಪ್ರಬಂಧವೊಂದರ ಅಂತ್ಯದಲ್ಲಿ “ಜೈ ಹಿಂದ್, ನಾವು ಪ್ರಕೃತಿಯೊಂದಿಗೆ ಒಂದಾಗಿ ಬಾಳೋಣ" ಎಂದು ಬರೆದ ಕಾರಣಕ್ಕೆ ಉತ್ತರ ಪತ್ರಿಕೆ ಅಮಾನ್ಯಗೊಂಡಿದ್ದ ಮಹಿಳೆಯೊಬ್ಬರಿಗೆ ಮದ್ರಾಸ್ ಹೈಕೋರ್ಟ್ ಮಧುರೈ ಪೀಠ ಈಚೆಗೆ ರಕ್ಷಣೆ ನೀಡಿದೆ [ಎಂ ಕಲ್ಪನಾ ಮತ್ತು ಟಿಎನ್ಪಿಎಸ್ಸಿ ಕಾರ್ಯದರ್ಶಿ ನಡುವಣ ಪ್ರಕರಣ].
ʼನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯ ಪ್ರಾಮುಖ್ಯತೆʼ ಯುವಕರು ವಿಚಾರಮಗ್ನರಾಗಿ ಭಾವಪರವಶತೆಯಿಂದ ದೇಶಭಕ್ತಿ ಅನುಭವಿಸುವುದು ಸಹಜ ಎಂದು ನ್ಯಾ. ಬಟ್ಟು ದೇವಾನಂದ್ ತಿಳಿಸಿದರು.
ಜೈಹಿಂದ್ ಎಂದರೆ ಭಾರತಕ್ಕೆ ಜಯವಾಗಲಿ ಎಂಬರ್ಥ ಬರಲಿದ್ದು ಇದು ಸಾಮಾನ್ಯವಾಗಿ ಶಾಲಾ ಮಕ್ಕಳ ಪ್ರಾರ್ಥನೆಯಿಂದ ಹಿಡಿದು ಗಣ್ಯ ವ್ಯಕ್ತಿಗಳ ಭಾಷಣದವರೆಗೆ ಉದ್ಗರಿಸುವ ಘೋಷಣೆಯಾಗಿದೆ. ಆದ್ದರಿಂದ, ಅಭ್ಯರ್ಥಿಯ ಉತ್ತರ ಪತ್ರಿಕೆ ಕೊನೆಯಲ್ಲಿ “ಜೈ ಹಿಂದ್”ಎಂದು ಬರೆದಿರುವುದರಿಂದ ಅದನ್ನು ಅಮಾನ್ಯಗೊಳಿಸಲಾಗದು ಎಂದು ಅವರು ಅಭಿಪ್ರಾಯಪಟ್ಟರು.
'ಜೈ ಹಿಂದ್ - ನಾವು ಪ್ರಕೃತಿಯೊಂದಿಗೆ ಒಂದಾಗಿ ಬಾಳೋಣ' ಎಂಬ ಮಾತು ಯಾವುದೇ ದುಷ್ಕೃತ್ಯಕ್ಕೆ ಯತ್ನಿಸದ ಸ್ವಾಭಾವಿಕ, ಸ್ವಯಂಪ್ರೇರಿತ ಹಾಗೂ ಪರಿಣಾಮಕಾರಿ ಘೋಷಣೆಯಾಗಿದೆ ಎಂದು ಕೂಡ ನ್ಯಾಯಾಲಯ ಹೇಳಿದೆ.
ಬ್ರಿಟಿಷರ ಆಳ್ವಿಕೆ ವೇಳೆ ಭಾರತೀಯ ಕ್ರಾಂತಿಕಾರಿ ಹೋರಾಟಗಾರ ಚಂಪಕ ರಾಮನ್ ಪಿಳ್ಳೈ ಅವರು 'ಜೈ ಹಿಂದ್' ಘೋಷಣೆ ರೂಪಿಸಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಭಾರತೀಯ ರಾಷ್ಟ್ರೀಯ ಸೇನೆಯ (INA) ಸಮರ ಘೋಷ ಇದು ಎಂದು ವ್ಯಾಖ್ಯಾನಿಸಿದ ಬಳಿಕ ಅದರ ಪ್ರಾಮುಖ್ಯತೆ ಹೆಚ್ಚಾಯಿತು ಎಂದು ನ್ಯಾಯಮೂರ್ತಿಗಳು ಸ್ಮರಿಸಿದರು.
"ತಾಯ್ನಾಡಿಗೆ ಸಂಬಂಧಿಸಿದಂತೆ ದೇಶಭಕ್ತಿಯ ಉತ್ಕಟತೆಯನ್ನು ವ್ಯಕ್ತಪಡಿಸುವ ಹಲವಾರು ಪತ್ರಗಳಲ್ಲಿ ಇದು ಆತ್ಯಂತಿಕ ಪದವಾಗಿದೆ" ಎಂದು ನ್ಯಾಯಮೂರ್ತಿಗಳು ತಿಳಿಸಿದರು.
ಆದ್ದರಿಂದ, ಈ ಪ್ರಕರಣದಲ್ಲಿ ಅಭ್ಯರ್ಥಿಯ ಉತ್ತರ ಪತ್ರಿಕೆಯನ್ನು ಅಮಾನ್ಯಗೊಳಿಸುವ ತನ್ನ ನಿರ್ಧಾರ ಹಿಂತೆಗೆದುಕೊಳ್ಳುವಂತೆ ಟಿಎನ್ಪಿಎಸ್ಸಿಗೆ ನ್ಯಾಯಾಲಯ ನಿರ್ದೇಶಿಸಿತು. ಜೊತೆಗೆ ಆದೇಶ ದೊರೆತ ನಾಲ್ಕು ವಾರದೊಳಗೆ ಅಭ್ಯರ್ಥಿಯ ಪ್ರಬಂಧವನ್ನು ಮೌಲ್ಯಮಾಪನ ಮಾಡಿ ಆಕೆ ಅರ್ಹತೆ ಹೊಂದಿದ್ದರೆ ಆಕೆಯನ್ನು ನೇಮಾಕಾತಿ ಮಾಡಿಕೊಳ್ಳುವಂತೆ ಆಯೋಗಕ್ಕೆ ಸೂಚಿಸಿತು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]