ಮದ್ರಾಸ್ ಹೈಕೋರ್ಟ್ನಲ್ಲಿ ಸೋಮವಾರ ಆಚರಿಸಿದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ವೇಳೆ ನ್ಯಾಯಾಲಯ ಅಸ್ತಿತ್ವಕ್ಕೆ ಬಂದ 160ನೇ ವರ್ಷದ ನೆನಪಿಗಾಗಿ ಅಂಚೆಚೀಟಿ ಬಿಡುಗಡೆ ಮಾಡಲಾಯಿತು.
ರಾಣಿ ವಿಕ್ಟೋರಿಯಾ ನೀಡಿದ ಅನುಮತಿ ಮೂಲಕ 19ನೇ ಶತಮಾನದಲ್ಲಿ ಸ್ಥಾಪಿಸಲಾದ ಭಾರತದಲ್ಲಿನ ಮೂರು ಹೈಕೋರ್ಟ್ಗಳಲ್ಲಿ ಮದ್ರಾಸ್ ಹೈಕೋರ್ಟ್ ಒಂದಾಗಿದೆ. ಇತರ ಎರಡು ಚಾರ್ಟರ್ಡ್ ನ್ಯಾಯಾಲಯಗಳೆಂದರೆ ಕಲ್ಕತ್ತಾ ಹೈಕೋರ್ಟ್ ಮತ್ತು ಬಾಂಬೆ ಹೈಕೋರ್ಟ್.
ಕಲ್ಕತ್ತಾ ಹೈಕೋರ್ಟ್ ಜುಲೈ 1, 1862 ರಂದು ಸ್ಥಾಪನೆಯಾದರೆ ಎರಡನೆಯದಾಗಿ ಬಾಂಬೆ ಹೈಕೋರ್ಟ್ ಆಗಸ್ಟ್ 14, 1862 ರಂದು ಮದ್ರಾಸ್ ಹೈಕೋರ್ಟ್ ಅಸ್ತಿತ್ವಕ್ಕೆ ಬರುವುದಕ್ಕಿಂತ ಒಂದು ದಿನ ಮೊದಲು ಜನ್ಮ ತಳೆಯಿತು.
ಹೈಕೋರ್ಟ್ ಕಟ್ಟಡದ ಚಿತ್ರವಿರುವ 'ಕಾರ್ಪೊರೇಟ್ ಮೈ ಸ್ಟ್ಯಾಂಪ್' ಸ್ಮಾರಕ ಅಂಚೆಚೀಟಿಯನ್ನು ಮುಖ್ಯ ನ್ಯಾಯಮೂರ್ತಿ ಮುನೀಶ್ವರ್ ನಾಥ್ ಭಂಡಾರಿ ಬಿಡುಗಡೆ ಮಾಡಿದರು. ಇದರ ಮೊದಲ ಪ್ರತಿಯನ್ನು ಹೈಕೋರ್ಟ್ನ ಹಿರಿಯ ನ್ಯಾಯಮೂರ್ತಿ ಎಂ ದುರೈಸ್ವಾಮಿ ಸ್ವೀಕರಿಸಿದರು.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮುಖ್ಯ ನ್ಯಾಯಮೂರ್ತಿಗಳು ಸಮನೀತಿ ಕಂದ ಚೋಳನ ಪ್ರತಿಮೆ ಎದುರು ರಾಷ್ಟ್ರಧ್ವಜಾರೋಹಣ ನೆರವೇರಿಸಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಗೌರವ ವಂದನೆ ಸ್ವೀಕರಿಸಿದರು.
ಕಾರ್ಯಕ್ರಮವನ್ನು ಹೈಕೋರ್ಟ್ನ ಯೂಟ್ಯೂಬ್ ಚಾನೆಲ್ನಲ್ಲಿ ನೇರ ಪ್ರಸಾರ ಮಾಡಲಾಯಿತು. ಸಚಿವರು, ನ್ಯಾಯಮೂರ್ತಿಗಳು, ಕಾನೂನು ಅಧಿಕಾರಿಗಳು, ತಮಿಳುನಾಡು ಮತ್ತು ಪುದುಚೇರಿ ವಕೀಲರ ಸಂಘದ ಪದಾಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.