ಉದ್ಧವ್ ವಿರುದ್ಧದ ಪಿಐಎಲ್ ವಜಾಗೊಳಿಸಿದ ಬಾಂಬೆ ಹೈಕೋರ್ಟ್: ಶಿಂಧೆ ವಿರುದ್ಧದ ಅರ್ಜಿದಾರರಿಗೆ ಹಣ ಠೇವಣಿ ಇಡಲು ಸೂಚನೆ

ಶಿಂಧೆ ಬಣದ ವಿರುದ್ಧದ ಪಿಐಎಲ್ ರಾಜಕೀಯ ಪ್ರೇರಿತವಾಗಿರುವುದನ್ನು ಗಮನಿಸಿದ ನ್ಯಾಯಾಲಯ ₹ 1 ಲಕ್ಷ ಮೊತ್ತವನ್ನು ಭದ್ರತೆಯ ರೂಪದಲ್ಲಿ ಠೇವಣಿ ಇಟ್ಟು ಆರೋಪದ ಸತ್ಯಾಸತ್ಯತೆ ಸಾಬೀತುಪಡಿಸುವಂತೆ ಅರ್ಜಿದಾರರಿಗೆ ಸೂಚಿಸಿತು.
Eknath Shinde, Uddhav Thackeray and Bombay High Court
Eknath Shinde, Uddhav Thackeray and Bombay High CourtA1
Published on

ದೇಶದ್ರೋಹ ಮತ್ತು ಸಾರ್ವಜನಿಕ ಉಪದ್ರವ ನೀಡಿದ ಆರೋಪದಡಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ಅವರ ಮಗ ಆದಿತ್ಯ ಠಾಕ್ರೆ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್‌ ರಾವುತ್‌ ವಿರುದ್ಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು (ಪಿಐಎಲ್‌) ಬಾಂಬೆ ಹೈಕೋರ್ಟ್‌ ಬುಧವಾರ ವಜಾಗೊಳಿಸಿದೆ.

ಅರ್ಜಿದಾರರು ಪರ್ಯಾಯ ಕಾನೂನು ಮಾರ್ಗ ಆಶ್ರಯಿಸಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಖಾಸಗಿ ಕ್ರಿಮಿನಲ್ ದೂರು ಸಲ್ಲಿಸಬಹುದು ಎಂದು ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಎಂ ಎಸ್ ಕಾರ್ಣಿಕ್ ನೇತೃತ್ವದ ಪೀಠ ಅಭಿಪ್ರಾಯಪಟ್ಟಿತು. ಸಾಮಾಜಿಕ ಕಾರ್ಯಕರ್ತ ಹೇಮಂತ್‌ ಪಾಟೀಲ್‌ ಎಂಬುವವರು ಠಾಕ್ರೆ ಮತ್ತು ರಾವುತ್‌ ವಿರುದ್ಧ ಅರ್ಜಿ ಸಲ್ಲಿಸಿದ್ದರು.

Also Read
ಠಾಕ್ರೆ, ರಾವತ್ ವಿರುದ್ಧ ಸಾರ್ವಜನಿಕ ಉಪದ್ರವ, ದೇಶದ್ರೋಹ ಪ್ರಕರಣ ದಾಖಲಿಸಲು ಕೋರಿ ಬಾಂಬೆ ಹೈಕೋರ್ಟ್‌ಗೆ ಪಿಐಎಲ್

ಇದೇ ವೇಳೆ ನಗರಾಭಿವೃದ್ಧಿ ಹಾಗೂ ಮೂಲಸೌಕರ್ಯ ಸಚಿವ ಏಕನಾಥ್‌ ಶಿಂಧೆ ನೇತೃತ್ವದ ಬಂಡಾಯ ಶಾಸಕರ ವಿರುದ್ಧದ ಮತ್ತೊಂದು ಪಿಐಎಲ್‌ ರಾಜಕೀಯ ಪ್ರೇರಿತವಾಗಿರುವುದನ್ನು ಗಮನಿಸಿದ ನ್ಯಾಯಾಲಯ ₹ 1 ಲಕ್ಷ ಮೊತ್ತವನ್ನು ಭದ್ರತೆಯ ರೂಪದಲ್ಲಿ ಠೇವಣಿ ಇಟ್ಟು ಆರೋಪದ ಸತ್ಯಾಸತ್ಯತೆ ಸಾಬೀತುಪಡಿಸುವಂತೆ ಅರ್ಜಿದಾರರಿಗೆ ಸೂಚಿಸಿತು.

Also Read
ಮಹಾರಾಷ್ಟ್ರ ಬೇಗುದಿ: ಶಿಂಧೆ, ಬಂಡಾಯ ಶಾಸಕರು ಮಹಾರಾಷ್ಟ್ರಕ್ಕೆ ಮರಳಲು ಸೂಚಿಸುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಪಿಐಎಲ್

ಭದ್ರತೆ ರೂಪದಲ್ಲಿ ಎರಡು ವಾರದೊಳಗೆ ಹಣ ಠೇವಣಿ ಇಟ್ಟರೆ ಮಾತ್ರ ಅರ್ಜಿಯನ್ನು ಮೂರು ವಾರಗಳ ಬಳಿಕ ವಿಚಾರಣೆಗೆ ಪರಿಗಣಿಸುವುದಾಗಿ ಹೇಳಿದ ನ್ಯಾಯಾಲಯ ಒಂದು ವೇಳೆ ಠೇವಣಿ ಇಡದಿದ್ದರೆ ಅರ್ಜಿಯನ್ನು ವಿಲೇವಾರಿ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿತು.

ಶಿವಸೇನಾದ ಏಕನಾಥ್‌ ಶಿಂಧೆ ನೇತೃತ್ವದ ಬಂಡಾಯ ಶಾಸಕರು ಗುವಾಹಟಿಯಿಂದ ರಾಜ್ಯಕ್ಕೆ ಮರಳುವಂತೆ ನಿರ್ದೇಶನ ನೀಡಬೇಕೆಂದು ಕೋರಿ ವಕೀಲರಾದ ಅಸಿಮ್ ಸರೋದೆ ಮತ್ತು ಅಜಿಂಕ್ಯ ಉದನೆ ಅವರ ಮೂಲಕ ಉತ್ಪಲ್ ಚಂದಾವರ್ ಎಂಬುವವರು ಸಲ್ಲಿಸಿದ್ದ ಪಿಐಎಲ್‌ ಕೋರಿತ್ತು. ಆದರೆ, ಬುಧವಾರದ ಬೆಳವಣಿಗೆಗಳ ನಂತರವೂ ನೀವು ಅರ್ಜಿಯನ್ನು ಮುಂದುವರೆಸಲು ಬಯಸುತ್ತೀರಾ ಎಂದು ನ್ಯಾಯಾಲಯವು ಅರ್ಜಿದಾರರನ್ನು ಕೇಳಿತು. ಈ ವೇಳೆ, ಬಂಡಾಯ ಬಣದಲ್ಲಿನ ಸಚಿವರು, ಶಾಸಕರು ದೀರ್ಘ ಅವಧಿಯವರೆಗೆ ತಮ್ಮ ಕರ್ತವ್ಯದಿಂದ ವಿಮುಖರಾಗಿದ್ದ ಕಾರಣಕ್ಕೆ ಅವರ ವಿರುದ್ಧದ ಆರೋಪವನ್ನು ಸಂಜ್ಞಾನಕ್ಕೆ ತೆಗೆದುಕೊಳ್ಳುವಂತೆ ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದರು.

Kannada Bar & Bench
kannada.barandbench.com