ಹಿಂಸಗ್ರಸ್ತ ಮಣಿಪುರದ ಸ್ಥಿತಿ ಸುಧಾರಿಸಿದೆ ಎಂದ ರಾಜ್ಯ ಸರ್ಕಾರ; ಹೊಸ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಸೂಚನೆ

ಸರ್ಕಾರದ ವರದಿಗೆ ವ್ಯತಿರಿಕ್ತವಾಗಿ ಶಿರಚ್ಛೇದ ಸೇರಿದಂತೆ ಮೂರು ಹತ್ಯೆಗಳು ನಡೆದಿದ್ದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ ಎಂದು ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್ ನ್ಯಾಯಾಲಯಕ್ಕೆ ತಿಳಿಸಿದರು.
Manipur violence and supreme court
Manipur violence and supreme court

ಇತ್ತೀಚೆಗೆ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ತಡೆಗಟ್ಟಲು ಕೈಗೊಂಡ ಕ್ರಮಗಳನ್ನು ವಿವರಿಸುವ ನವೀಕೃತ ಸ್ಥಿತಿಗತಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೋಮವಾರ ಸೂಚಿಸಿರುವ ಸುಪ್ರೀಂ ಕೋರ್ಟ್‌ ಪ್ರಕರಣದ ವಿಚಾರಣೆಯನ್ನು ಒಂದು ವಾರ ಕಾಲ ಮುಂದೂಡಿತು.

ಮಣಿಪುರದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಕುರಿತು ತೆಗೆದುಕೊಂಡ ಕ್ರಮಗಳನ್ನು ಸೂಚಿಸುವ ನವೀಕರಿಸಿದ ಸ್ಥಿತಿಗತಿ ವರದಿಯನ್ನು ಸಲ್ಲಿಸುವುದಾಗಿ ರಾಜ್ಯ ಸರ್ಕಾರ ಸಲ್ಲಿಸಿದ ನಂತರ ಸುಪ್ರೀಂ ಕೋರ್ಟ್ ಸೋಮವಾರ ಒಂದು ವಾರದವರೆಗೆ ಅರ್ಜಿಯನ್ನು ಮುಂದೂಡಿದೆ.

ಮಣಿಪುರ ಸರ್ಕಾರವನ್ನು ಪ್ರತಿನಿಧಿಸಿದ್ದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ರಾಜ್ಯದಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠಕ್ಕೆ ವಿವರಿಸಿದರು.

ಆಗ ಸಿಜೆಐ ಅವರು “ನವೀಕೃತ ವರದಿಯನ್ನು ತರಿಸಿಕೊಳ್ಳೋಣ. ಪುನರ್ವಸತಿ ಶಿಬಿರಗಳು, ಕಾನೂನು ಮತ್ತು ಸುವ್ಯವಸ್ಥೆ, ಮಾರಕಾಸ್ತ್ರಗಳ ವಶಪಡಿಸಿಕೊಳ್ಳುವಿಕೆ ಇತ್ಯಾದಿ ವಿವರಗಳನ್ನು ಈ ವರದಿ ಒಳಗೊಂಡಿರಬೇಕು” ಎಂದರು.

Also Read
ಕೇಂದ್ರದ್ದು ಖೊಟ್ಟಿ ಭರವಸೆ, ಬಿಜೆಪಿ ಬೆಂಬಲಿಗರಿಂದ ಮಣಿಪುರ ಹಿಂಸಾಚಾರ: ಸುಪ್ರೀಂ ಕೋರ್ಟ್‌ಗೆ ಬುಡಕಟ್ಟು ವೇದಿಕೆ ದೂರು

ಸರ್ಕಾರದ ವರದಿಗೆ ವ್ಯತಿರಿಕ್ತವಾಗಿ  ಶಿರಚ್ಛೇದ ಸೇರಿದಂತೆ ಮೂರು ಹತ್ಯೆಗಳು ನಡೆದಿದ್ದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ ಎಂದು ಹಿರಿಯ ವಕೀಲ ಕಾಲಿನ್‌ ಗೊನ್ಸಾಲ್ವೆಸ್‌ ಅವರು ವಿಚಾರಣೆ ವೇಳೆ ತಿಳಿಸಿದರು. “ಮೊದಲ ಬಾರಿಗೆ ಶಿರಚ್ಛೇದನ ನಡೆದಿದೆ… ಶಸ್ತ್ರಸಜ್ಜಿತ ಮೈತೇಯಿ ಸಮುದಾಯ ಹದ್ದು ಮೀರುತ್ತಿದ್ದಾರೆ… ಕುಕಿಗಳು ಅವಿತು ಕುಳಿತಿದ್ದಾರೆ” ಎಂದು ಅವರು ವಿವರಿಸಿದರು.ಆದರೂ ನವೀಕೃತ ವರದಿ ಪಡೆಯುವವರೆಗೆ ಕಾಯುವುದಕ್ಕೆ ಪೀಠ ಸಮ್ಮತಿಸಿತು.

ಮಣಿಪುರದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ  ಸುಪ್ರೀಂ ಕೋರ್ಟ್‌ಗೆ ನೀಡಿರುವ ಭರವಸೆ ಪೊಳ್ಳಾಗಿದ್ದು, ಗಂಭೀರತೆಯನ್ನು ಹೊಂದಿಲ್ಲ ಎಂದು ಮಣಿಪುರ ಬುಡಕಟ್ಟು ವೇದಿಕೆ ಸಲ್ಲಿಸಿದ್ದ ವಾದಕಾಲೀನ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

Related Stories

No stories found.
Kannada Bar & Bench
kannada.barandbench.com