[ಮೋಟಾರು ಅಪಘಾತ] ಸಂತ್ರಸ್ತರು ಕೋರಿದ್ದಕ್ಕಿಂತಲೂ ಹೆಚ್ಚಿನ ಪರಿಹಾರ ನೀಡಲು ನಿರ್ಬಂಧವಿಲ್ಲ: ಬಾಂಬೆ ಹೈಕೋರ್ಟ್

ಕೇಳಿದ ಮೊತ್ತಕ್ಕಿಂತ ಹೆಚ್ಚಿದ್ದರೂ ಕೂಡ ನ್ಯಾಯಮಂಡಳಿ ಮತ್ತು ನ್ಯಾಯಾಲಯಗಳು ʼಕನಿಷ್ಠ ಪರಿಹಾರʼ ನೀಡುವುದು ಕಡ್ಡಾಯವಾಗಿದೆ ಎಂದು ಪೀಠ ತಿಳಿಸಿದೆ.
Bombay High Court, Justice Anuja Prabhudessai
Bombay High Court, Justice Anuja Prabhudessai

ಅಪಘಾತ ಸಂತ್ರಸ್ತರು ಕೇಳಿದ ಮೊತ್ತಕ್ಕಿಂತಲೂ ಹೆಚ್ಚಿನ ಪರಿಹಾರ ಧನವನ್ನು ಮೋಟಾರು ಅಪಘಾತದ ಪರಿಹಾರ ನ್ಯಾಯಮಂಡಳಿ (ಎಂಎಸಿಟಿ) ಅಥವಾ ನ್ಯಾಯಾಲಯಗಳು ನೀಡಲು ಯಾವುದೇ ನಿರ್ಬಂಧ ಇಲ್ಲ ಎಂದು ಬಾಂಬೆ ಹೈಕೋರ್ಟ್‌ ಇತ್ತೀಚೆಗೆ ತೀರ್ಪು ನೀಡಿದೆ [ಯೋಗೇಶ್ ಸುಭಾಷ್ ಪಂಚಾಲ್ ಮತ್ತು ಮೊಹಮ್ಮದ್ ಹುಸೇನ್ ಮತ್ತು ಸಂಬಂಧಿತ ಮೇಲ್ಮನವಿ].

“ಹಕ್ಕುದಾರರು ಕೋರಿರುವುದಕ್ಕಿಂತ ಹೆಚ್ಚಿನ ಪರಿಹಾರ ನೀಡಲು ಯಾವುದೇ ನಿರ್ಬಂಧವಿಲ್ಲ. ಒಂದೊಮ್ಮೆ 'ನ್ಯಾಯಯುತ ಪರಿಹಾರ'ವು ಹಕ್ಕುದಾರರು ಕೋರಿರುವ ಪರಿಹಾರಕ್ಕಿಂತ ಹೆಚ್ಚಿನದಾಗಿದ್ದರೆ ಅದನ್ನು ನೀಡುವುದು ಮಂಡಳಿ ಮತ್ತು ನ್ಯಾಯಾಲಯದ ಹೊಣೆಯಾಗಿದೆ”ಎಂದು ಹೈಕೋರ್ಟ್ ಹೇಳಿದೆ.

ಈ ಹಿನ್ನೆಲೆಯಲ್ಲಿ ನ್ಯಾ. ಅನುಜಾ ಪ್ರಭುದೇಸಾಯಿ ಅವರಿದ್ದ ಏಕಸದಸ್ಯ ಪೀಠವು ಅರ್ಜಿದಾರರು ಕೋರಿದ್ದ ಮೊತ್ತಕ್ಕಿಂತಲೂ ಹೆಚ್ಚಿನ ಮೊತ್ತದ ರೂಪದಲ್ಲಿ ʼನೋ ಫಾಲ್ಟ್‌ ಲಯಬಿಲಿಟಿʼಯನ್ನೂ ಒಳಗೊಂಡಂತೆ ಎಂಎಸಿಟಿ ನೀಡಿದ್ದ ರೂ 48.3 ಲಕ್ಷ ಪರಿಹಾರದ ಬದಲಿಗೆ ₹ 64.8 ಲಕ್ಷ ಪರಿಹಾರಕ್ಕೆ ಆದೇಶಿಸಿತು. ಬಡ್ಡಿ ಸೇರಿ ಸಂತ್ರಸ್ತರಿಗೆ ₹1.17 ಕೋಟಿಗೂ ಹೆಚ್ಚು ಮೊತ್ತದ ಪರಿಹಾರ ನೀಡುವಂತೆ ವಿಮಾ ಕಂಪೆನಿಗೆ ಸೂಚಿಸಿತು.

Also Read
ಖಾಸಗಿ ಭೂಮಿ ಸ್ವಾಧೀನಪಡಿಸಿಕೊಂಡು ಪರಿಹಾರ ನೀಡುವುದಿಲ್ಲ ಎಂದು ಸರ್ಕಾರ ಹೇಳುವಂತಿಲ್ಲ: ಗುಜರಾತ್ ಹೈಕೋರ್ಟ್

ಸಂತ್ರಸ್ತ ವ್ಯಕ್ತಿ ಗಾಲಿ ಕುರ್ಚಿಯನ್ನೇ ಆಧರಿಸಿ ಜೀವನ ಪರ್ಯಂತ ಬದುಕಬೇಕಿದ್ದು ಕುಟುಂಬದ ಆಧಾರವಾಗಿದ್ದ ಆತ ತನ್ನ ಗಳಿಕೆಯ ಸಾಮರ್ಥ್ಯವನ್ನು ಸಂಪೂರ್ಣ ಕಳೆದುಕೊಂಡಿದ್ದಾನೆ ಎಂಬುದನ್ನು ಗಮನಿಸಿ ನ್ಯಾಯಾಲಯ ಈ ಆದೇಶ ನೀಡಿತು.

“ವಿತ್ತೀಯ ಪರಿಹಾರ ಎಷ್ಟೇ ಹೆಚ್ಚಿದ್ದರೂ ಅದು ಸಂತ್ರಸ್ತನ ಜೀವನವನ್ನು ಮರುರೂಪಿಸಲು ಅಥವಾ ಮಾನಸಿಕ ಇಲ್ಲವೇ ದೈಹಿಕ ಆಘಾತವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ . ಆತನ ಸಂಗಾತಿಯ ಒಡೆದ ಕನಸುಗಳನ್ನು ಜೋಡಿಸಲು ಸಾಧ್ಯವಿಲ್ಲ. ಆತನ ಮಕ್ಕಳ ಬಾಲ್ಯವನ್ನು ಮರಳಿ ತರಲು ಇಲ್ಲವೇ ತನ್ನ ಮಗ ಜೀವಂತ ಶವದಂತೆ ಇರುವುದನ್ನು ಕಂಡ ಪೋಷಕರ ಸಂಕಟವನ್ನು ತೊಡೆದು ಹಾಕಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ತಿಳಿಸಿತು.

Kannada Bar & Bench
kannada.barandbench.com