
ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಬಿಹಾರದಲ್ಲಿ ಮತದಾರರ ಪಟ್ಟಿಯನ್ನು ಭಾರೀ ಪ್ರಮಾಣದಲ್ಲಿ ಪರಿಷ್ಕರಿಸಲು ಭಾರತೀಯ ಚುನಾವಣಾ ಆಯೋಗ ಕೈಗೊಂಡ ನಿರ್ಧಾರ ಪ್ರಶ್ನಿಸಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಬಿಹಾರದ ಬಹುತೇಕ ಮತಾದಾರರು ತಾವು ಮತದಾರರ ಪಟ್ಟಿಯಲ್ಲಿ ಉಳಿಯಬೇಕು ಎನ್ನುವುದಾದರೆ ಪೌರತ್ವಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಬೇಕಾಗುತ್ತದೆ ಎಂದು ಆಯೋಗ ಜೂನ್ 24ರಂದು ಆದೇಶ ಹೊರಡಿಸಿದೆ. ಈ ಆದೇಶವನ್ನುಆಕ್ಷೇಪಿಸಿ ಸಂವಿಧಾನದ 32ನೇ ವಿಧಿಯ ಅಡಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ದಾಖಲಿಸಲಾಗಿದೆ.
ಸಂವಿಧಾನದ 14, 19, 21, 325 ಮತ್ತು 326 ನೇ ವಿಧಿಗಳು, 1950ರ ಪ್ರಜಾ ಪ್ರತಿನಿಧಿ ಕಾಯಿದೆ ಹಾಗೂ 1960ರ ಮತದಾರರ ನೋಂದಣಿ ನಿಯಮ 21 ಎ ಸೆಕ್ಷನ್ಗಳನ್ನು ಆಯೋಗ ಉಲ್ಲಂಘಿಸಿದೆ ಎಂದು ಅರ್ಜಿ ದೂರಿದೆ. ವಕೀಲ ಪ್ರಶಾಂತ್ ಭೂಷಣ್ ಅವರ ಮೂಲಕ ಅರ್ಜಿ ಸಲ್ಲಿಸಲಾಗಿದೆ.
ಅರ್ಜಿಯ ಪ್ರಮುಖಾಂಶಗಳು
ಈ ಆದೇಶ ಹೊಸ ದಾಖಲೆಗಳನ್ನು ನೀಡಬೇಕು ಎಂದು ಆದೇಶಿಸುತ್ತದೆ. ಪುರಾವೆಯ ಹೊರೆಯನ್ನು ಪ್ರಭುತ್ವದ ಬದಲು ನಾಗರಿಕರಿಗೆ ವರ್ಗಾಯಿಸಿದೆ.
ಪೌರತ್ವವನ್ನು ಸಾಬೀತುಪಡಿಸಲು ಆಧಾರ್ ಮತ್ತು ಪಡಿತರ ಚೀಟಿಗಳಂತಹ ಸಾಮಾನ್ಯ ಬಳಕೆಯಲ್ಲಿರುವ ದಾಖಲೆಗಳನ್ನು ಕೈಬಿಟ್ಟಿದ್ದು ಇದರಿಂದ ಬಡವರು ಮತ್ತು ಸಮಾಜದಂಚಿನಲ್ಲಿರುವ ಮತದಾರರು ಅದರಲ್ಲಿಯೂ ಗ್ರಾಮೀಣ ಬಿಹಾರದ ಮೇಲೆ ಅಸಮಾನ ರೀತಿಯ ಪರಿಣಾಮ ಬೀರಲಿದೆ.
ಕಡಿಮೆ ಕಾಲಾವಧಿ ಹೊಂದಿರುವುದರಿಂದ ಅಪೇಕ್ಷಿತ ದಾಖಲೆ ಒದಗಿಸಲಾಗದ ಸುಮಾರು ಮೂರು ಕೋಟಿ ನೈಜ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿದು ಅವರ ಮತದಾರರ ಹಕ್ಕು ಕಸಿದುಕೊಂಡಂತಾಗುತ್ತದೆ.
2003ರ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿರದ ಮತದಾರರು ಇದೀಗ ತಮ್ಮ ಪೌರತ್ವವನ್ನು ಸಾಬೀತುಪಡಿಸುವ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ಡಿಸೆಂಬರ್ 2004ರ ನಂತರ ಜನಿಸಿದವರು ತಮ್ಮ ಸ್ವಂತ ದಾಖಲೆಗಳನ್ನು ಮಾತ್ರವಲ್ಲದೆ ಇಬ್ಬರೂ ಪೋಷಕರ ದಾಖಲೆಗಳನ್ನುಕೂಡ ಕಡ್ಡಾಯವಾಗಿ ನೀಡಬೇಕು ಎನ್ನುತ್ತದೆ. ಪೋಷಕರು ವಿದೇಶಿ ಪ್ರಜೆಯಾಗಿದ್ದರೆ, ಅರ್ಜಿದಾರರ ಜನನದ ಸಮಯದಲ್ಲಿನ ಅವರ ಪಾಸ್ಪೋರ್ಟ್ ಮತ್ತು ವೀಸಾವನ್ನು ಕೇಳುತ್ತದೆ.
ಬಿಹಾರದ ರೀತಿಯ ರಾಜ್ಯದಲ್ಲಿ ಜನನ ನೋಂದಣಿ ಐತಿಹಾಸಿಕವಾಗಿ ಕೆಳಮಟ್ಟದಲ್ಲಿದ್ದು ಅನೇಕ ಮತದಾರರಿಗೆ ಅಧಿಕೃತ ದಾಖಲೆಗಳು ಲಭ್ಯವಿಲ್ಲದೆ ಇರುವುದರಿಂದ ಆಯೋಗದ ಇಂತಹ ಬೇಡಿಕೆ ಅವಾಸ್ತವಿಕ.
ಹೀಗೆ ಮತದಾರರ ಪಟ್ಟಿ ಪರಿಷ್ಕರಣೆಗೆ ಆಯೋಗ ಕಾರಣ ಏನು ಎಂಬುದನ್ನು ವಿವರಿಸಿಲ್ಲ.