ಎಫ್ಐಆರ್ ರದ್ದಾದ ಬಳಿಕ ಮಾಧ್ಯಮಗಳು ಎಫ್ಐಆರ್ ದಾಖಲಾಗಿದ್ದರ ಕುರಿತು ಪ್ರಕಟಿಸಿದ್ದ ವರದಿಗಳನ್ನು ಅಳಿಸಿಹಾಕಬೇಕು. ಹಾಗೆ ಮಾಡದಿದ್ದರೆ ಪ್ರಕರಣದಲ್ಲಿ ಆರೋಪಿಯಾಗಿದ್ದ ವ್ಯಕ್ತಿಯ ಪ್ರತಿಷ್ಠೆ ಮತ್ತು ಸದ್ಭಾವನೆಗೆ ಧಕ್ಕೆ ಒದಗುತ್ತದೆ ಎಂದು ಗುಜರಾತ್ ಹೈಕೋರ್ಟ್ ಬುಧವಾರ ಹೇಳಿದೆ.
ಅಕ್ಟೋಬರ್ 2020ರಲ್ಲಿ ದಾಖಲಾಗಿದ್ದ ಎಫ್ಐಆರ್ನಲ್ಲಿ ಹೆಸರಿಸಲಾದ ಎನ್ಆರ್ಐ ಉದ್ಯಮಿಯೊಬ್ಬರು ನ್ಯಾ. ವೈಭವಿ ನಾನಾವತಿ ಅವರಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಲೆಟರ್ ಪೇಟೆಂಟ್ಸ್ ಅಪೀಲು (ಎಲ್ಪಿಎ) ಸಲ್ಲಿಸಿದ್ದರು.
ತನ್ನ ವಿರುದ್ಧ ದಾಖಲಾಗಿದ್ದ ಎಫ್ಐಆರ್ಗೆ ಸಂಬಂಧಿಸಿದ ಸುದ್ದಿಯನ್ನು ಆಂಗ್ಲ ಪತ್ರಿಕೆಯೊಂದರ ಜಾಲತಾಣದಿಂದ ತೆಗೆದು ಹಾಕಲು ನಿರ್ದೇಶನ ನೀಡಬೇಕೆಂದು ಉದ್ಯಮಿಯು ಕೋರಿದ್ದರು.
ವರದಿಯ ನಿರಂತರ ಪ್ರಸಾರದಿಂದಾಗಿ ತಮ್ಮ ಕಕ್ಷಿದಾರನ ವಿಸ್ಮೃತಿ ಹಕ್ಕನ್ನು (ವಿಸ್ಮೃತಿ ಹಕ್ಕು- ವ್ಯಕ್ತಿಯ ಖಾಸಗಿ ಮಾಹಿತಿಯನ್ನು ಕೆಲ ಸಂದರ್ಭಗಳಲ್ಲಿ ಅಂತರರ್ಜಾಲ ಶೋಧ ಮತ್ತಿತರ ಡೈರೆಕ್ಟರಿಗಳಿಂದ ತೆಗೆದುಹಾಕುವಂತೆ ಆಗ್ರಹಿಸುವ ಹಕ್ಕು) ಉಲ್ಲಂಘಿಸಲಾಗಿದೆ ಎಂದು ಉದ್ಯಮಿ ಪರ ವಕೀಲ ವಿರಾಟ್ ಪೋಪಟ್ ಅವರ ಮೂಲಕ ಸಲ್ಲಿಸಲಾದ ಅರ್ಜಿ ವಿವರಿಸಿದೆ. ವಿಸ್ಮೃತಿಯ ಹಕ್ಕು, ಖಾಸಗಿತನದ ಹಕ್ಕಿನ ಭಾಗವಾಗಿದೆ ಎನ್ನುವ ನ್ಯಾ. ಕೆ ಎಸ್ ಪುಟ್ಟಸ್ವಾಮಿ ವರ್ಸಸ್ ಭಾರತ ಸರ್ಕಾರದ ತೀರ್ಪನ್ನು ಅರ್ಜಿದಾರರು ಉಲ್ಲೇಖಿಸಿದ್ದಾರೆ.
ಈ ವಾದವನ್ನು ಪತ್ರಿಕೆ ಪರ ವಕೀಲ ಕೆ ಎಂ ಆಂಟನಿ ವಿರೋಧಿಸಿದರು. ಯಾವುದೇ ಆದೇಶವನ್ನು ಹೊರಡಿಸುವ ಮೊದಲು ನ್ಯಾಯಾಲಯವು ಪತ್ರಿಕಾ ಸ್ವಾತಂತ್ರ್ಯವನ್ನು ಪರಿಗಣಿಸಬೇಕು ಎಂದು ಅವರು ವಿನಂತಿಸಿದರು.
ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಅಗರ್ವಾಲ್ ಅವರು ಮೌಖಿಕವಾಗಿ “"ಒಮ್ಮೆ ಎಫ್ಐಆರ್ ಅನ್ನು ರದ್ದುಗೊಳಿಸಿದರೆ, ಪ್ರಕರಣದಲ್ಲಿ ಏನೂ ಉಳಿದಿರುವುದಿಲ್ಲ. ಆನಂತರವೂ ಎಫ್ಐಆರ್ ದಾಖಲಿಸಿದ ವರದಿ ಪ್ರಸಾರ ಮುಂದುವರೆಸಿದರೆ, ಒಬ್ಬ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಬಾಕಿ ಇದೆ ಎಂಬ ಅಭಿಪ್ರಾಯ ಮೂಡಿದರೆ ಅವರು ಉದ್ಯಮಿ, ಸೇವಾ ವ್ಯಕ್ತಿ ಮುಂತಾದವರಾಗಿದ್ದರೆ ಅವರ ಖ್ಯಾತಿ ಮತ್ತು ಸಮಾಜದಲ್ಲಿನ ಅವರೆಡೆಗಿನ ಸದ್ಭಾವನೆಗೆ ಅದು ಧಕ್ಕೆ ಉಂಟುಮಾಡುತ್ತದೆ. ಅಂತಹ ವಿಷಯಗಳಲ್ಲಿ ಮಾಧ್ಯಮಗಳು ಯಾವುದೇ ರೀತಿಯ ವಿನಾಯಿತಿ ಪಡೆಯುವಂತಿಲ್ಲ” ಎಂದು ಹೇಳಿದರು.