[ಎಫ್‌ಎಸ್‌ಎಲ್‌ಗಳಲ್ಲಿ ಖಾಲಿ ಹುದ್ದೆ] ಕಾಗದದ ಮೇಲೆ ಮಾತ್ರ ಕೋರ್ಟ್‌ ಆದೇಶ ಪಾಲನೆ: ಸರ್ಕಾರದ ವಿರುದ್ಧ ಹೈಕೋರ್ಟ್‌ ಕಿಡಿ

ರಾಜ್ಯದ ವಿವಿಧ ಎಫ್‌ಎಸ್‌ಎಲ್‌ಗಳಲ್ಲಿ 3 ಜಂಟಿ ನಿರ್ದೇಶಕರು, 18 ಸಹಾಯಕ ನಿರ್ದೇಶಕರು, 35 ಹಿರಿಯ ವೈಜ್ಞಾನಿಕ ಅಧಿಕಾರಿಗಳು ಮತ್ತು 138 ವೈಜ್ಞಾನಿಕ ಅಧಿಕಾರಿಗಳ ಹುದ್ದೆಗಳು ಖಾಲಿ ಇವೆ ಎಂದು ಸರ್ಕಾರ ತಿಳಿಸಿದೆ.
Karnataka High Court and laboratory
Karnataka High Court and laboratory

ರಾಜ್ಯದ ವಿಚಾರಣಾಧೀನ ನ್ಯಾಯಾಲಯಗಳಲ್ಲಿ ಬಾಕಿರುವ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯನ್ನು ತುರ್ತಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ರಾಜ್ಯದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯಗಳಲ್ಲಿ (ಎಫ್‌ಎಸ್‌ಎಲ್‌) ಖಾಲಿ ಇರುವ ಹುದ್ದೆಗಳನ್ನು ತುಂಬುವ ಮೂಲಕ ಕಾರ್ಯನಿರ್ವಹಣೆ ಸುಲಲಿತಗೊಳಿಸುವಂತೆ ಗುರುವಾರ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ರಾಜ್ಯದ ವಿವಿಧ ಕಡೆ ಇರುವ ಎಫ್‌ಎಸ್‌ಎಲ್‌ಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬುವುದಕ್ಕೆ ಸಂಬಂಧಿಸಿದಂತೆ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಹೈಕೋರ್ಟ್‌ನ ಏಕಸದಸ್ಯ ಪೀಠವು ತೀರ್ಪಿನಲ್ಲಿ ನೀಡಿದ್ದ ನಿರ್ದೇಶನಗಳನ್ನು ಆಧರಿಸಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾ. ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಆಗಸ್ಟ್‌ 13ರ ವಿಚಾರಣೆಯಂದು ನ್ಯಾಯಾಲಯ ನೀಡಿದ್ದ ಮಧ್ಯಂತರ ನಿರ್ದೇಶನಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಅನುಪಾಲನಾ ವರದಿಯನ್ನು ಪರಿಶೀಲಿಸಿದ ಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿತು. “ಕಾಗದದ ಮೇಲೆ ಮಾತ್ರ ನ್ಯಾಯಾಲಯದ ಆದೇಶವನ್ನು ಪಾಲಿಸಲಾಗಿದೆಯೇ ವಿನಾ ಆದೇಶದಲ್ಲಿ ಉಲ್ಲೇಖಿಸಲಾಗಿರುವ ಜಂಟಿ ನಿರ್ದೇಶಕರು, ಉಪ ನಿರ್ದೇಶಕರು ಮತ್ತು ಇತರೆ ಅಧಿಕಾರಿಗಳ ಹುದ್ದೆಗಳನ್ನು ತುಂಬಲಾಗಿಲ್ಲ” ಎಂದು ಕಿಡಿಕಾರಿತು.

“ರಾಜ್ಯ ಸರ್ಕಾರದ ಅನುಪಾಲನಾ ವರದಿಯಲ್ಲಿ ಯಾವುದೇ ಸಕಾರಾತ್ಮಕ ಅಂಶಗಳು ಕಾಣುತ್ತಿಲ್ಲ. ಆಗಸ್ಟ್‌ 13ರ ನ್ಯಾಯಾಲಯದ ಆದೇಶ ಪಾಲನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಕಿರುವ ಪ್ರಯತ್ನದ ನಮಗೆ ಸಮಾಧಾನವಾಗಿಲ್ಲ. ನ್ಯಾಯಾಲಯ ನೀಡುವ ನಿರ್ದೇಶನಗಳು ವಿರೋಧದ ರೂಪದಲ್ಲಿ ಇರುವುದಿಲ್ಲ. ಸಂಬಂಧಪಟ್ಟ ಇಲಾಖೆಯ ಅನುಕೂಲಕ್ಕಾಗಿ ಪೀಠದ ಆದೇಶಗಳನ್ನು ಪಾಲಿಸಬೇಕು. ಇದರಿಂದ ಎಫ್‌ಎಸ್‌ಎಲ್‌ ಕಾರ್ಯನಿರ್ವಹಣೆ ಸುಧಾರಣೆಯಾಗಲಿದ್ದು, ಇದು ರಾಜ್ಯದಲ್ಲಿ ಬಾಕಿ ಇರುವ ಕ್ರಿಮಿನಲ್‌ ಪ್ರಕರಣಗಳನ್ನು ತುರ್ತಾಗಿ ವಿಲೇವಾರಿ ಮಾಡಲು ಅನುಕೂಲವಾಗುತ್ತದೆ” ಎಂದು ಆದೇಶದಲ್ಲಿ ಹೇಳಿರುವ ಪೀಠವು ಆದೇಶವನ್ನು ಸಂಪೂರ್ಣವಾಗಿ ಪಾಲನೆ ಮಾಡಲು ಆರು ವಾರಗಳ ಕಾಲಾವಕಾಶ ನೀಡಿದೆ.

ಎಫ್‌ಎಸ್‌ಎಲ್‌ನಲ್ಲಿ ಖಾಲಿ ಇರುವ ಹುದ್ದೆಗಳು ಮತ್ತು ಪ್ರಯೋಗಾಲಯಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಅಫಿಡವಿಟ್‌ ಅನ್ನು ಪರಿಶೀಲಿಸಿದ ಪೀಠವು “ರಾಜ್ಯ ಸರ್ಕಾರದ ನಿರ್ಧಾರಗಳು ಅತ್ಯಂತ ಶೈಶವಾವಸ್ಥೆಯಲ್ಲಿದ್ದು, ಕ್ರಮ ತೆಗೆದುಕೊಳ್ಳುವುದಕ್ಕೆ ಹೋಲಿಕೆ ಮಾಡಿದರೆ ಅವು ಏನೇನು ಅಲ್ಲ. ಪ್ರಮುಖವಾಗಿ ಕ್ರಿಮಿನಲ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಯು ನ್ಯಾಯಾಂಗ ಬಂಧನದಲ್ಲಿರುವಾಗ ಈ ವಿಧಿವಿಜ್ಞಾನ ಪ್ರಯೋಗಾಲಯದ ಪರೀಕ್ಷಾ ವರದಿಗಳು ಅಗತ್ಯ. ವರದಿ ವಿಳಂಬವಾಗಿ ದೊರೆಯುವುದರಿಂದ ವಿಚಾರಣೆಯೂ ಮಂದಗತಿಯಲ್ಲಿ ಸಾಗುತ್ತದೆ. ಇದು ಸಂವಿಧಾನದ 21ನೇ ವಿಧಿಯಡಿ ಆರೋಪಿಗೆ ದೊರೆತಿರುವ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ” ಎಂದಿತು.

“ವರದಿ ವಿಳಂಬತೆಯಿಂದ ವಿಚಾರಣಾಧೀನರಿಗೆ ಸಮಸ್ಯೆಯಾಗುವುದಲ್ಲದೇ ಇದು ಸಂತ್ರಸ್ತರು ಮತ್ತು ಅವರ ಕುಟುಂಬ ಸದಸ್ಯರಿಗೂ ಸಮಸ್ಯೆ ಉಂಟು ಮಾಡುತ್ತದೆ. ವರದಿಯ ವಿಳಂಬದಿಂದಾಗಿ ಅವರೆಲ್ಲರ ವೇದನೆಯೂ ವಿಸ್ತರಣೆಯಾಗುತ್ತದೆ. ಎಲ್ಲಾ ವಿಧಿವಿಜ್ಞಾನ ಮಾದರಿಗಳ ವಿಶ್ಲೇಷಣೆ ನಡೆಸಿ, ತುರ್ತಾಗಿ ವರದಿ ನೀಡುವುದಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ” ಎಂದು ಪೀಠ ಹೇಳಿದೆ.

ರಾಜ್ಯದ ವಿವಿಧ ಎಫ್‌ಎಸ್‌ಎಲ್‌ಗಳಲ್ಲಿ 3 ಜಂಟಿ ನಿರ್ದೇಶಕರು, 18 ಸಹಾಯಕ ನಿರ್ದೇಶಕರು, 35 ಹಿರಿಯ ವೈಜ್ಞಾನಿಕ ಅಧಿಕಾರಿಗಳು ಮತ್ತು 138 ವೈಜ್ಞಾನಿಕ ಅಧಿಕಾರಿಗಳ ಹುದ್ದೆಗಳು ಖಾಲಿ ಇವೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಸರ್ಕಾರ ತಿಳಿಸಿದೆ. ಮಾದಕ ವಸ್ತುಗಳಿಗೆ ಸಂಬಂಧಿಸಿದಂತೆ ವಿಧಿವಿಜ್ಞಾನದ ವರದಿ ಪಡೆಯಲು ಒಂದು ವರ್ಷ, ಕಂಪ್ಯೂಟರ್‌/ಮೊಬೈಲ್‌/ಆಡಿಯೊ ವಿಧಿವಿಜ್ಞಾನ ವರದಿ ಪಡೆಯಲು ಒಂದೂವರೆ ವರ್ಷ ಮತ್ತು ವಂಶವಾಹಿ ಪರೀಕ್ಷಾ ವರದಿ ಪಡೆಯಲು ಸರಾಸರಿ ಒಂದೂವರೆ ವರ್ಷ ಅಗತ್ಯವಿದೆ ಎಂದು ಹೇಳಲಾಗಿದೆ.

ನ್ಯಾಯಾಲಯಕ್ಕೆ ಸಲಹೆ ಮಾಡಲು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು (ಕೆಎಸ್‌ಎಲ್‌ಎಸ್‌ಎ) ಹಿರಿಯ ವಕೀಲ ವಿ ಎ ಅರಬಟ್ಟಿ ಅವರನ್ನು ನೇಮಿಸಿದೆ. ವಿಚಾರಣೆಯ ಸಂದರ್ಭದಲ್ಲಿ ಅರಬಟ್ಟಿ ಅವರು ಸರ್ಕಾರವು ನ್ಯಾಯಾಲಯದ ಆದೇಶ ಪಾಲಿಸಿಲ್ಲ ಎಂದು ಪೀಠದ ಗಮನಸೆಳೆದರು.

Related Stories

No stories found.
Kannada Bar & Bench
kannada.barandbench.com