ತಾಯಿ ಯೋಗಕ್ಷೇಮ ವಿಚಾರಿಸಲು ಪೆರೋಲ್‌ ಕೋರಿಕೆ; ಪಾತಕಿ ಉಮೇಶ್‌ ರೆಡ್ಡಿ ಅರ್ಜಿ ತಿರಸ್ಕರಿಸಿದ ಹೈಕೋರ್ಟ್‌

ಉಮೇಶ್‌ ರೆಡ್ಡಿಗೆ ಇಬ್ಬರು ಸಹೋದರರಿದ್ದು, ಅವರು ತಾಯಿಯನ್ನು ನೋಡಿಕೊಳ್ಳುವುದರ ಜೊತೆಗೆ ಶಿಥಿಲಗೊಂಡಿರುವ ಮನೆಯನ್ನು ಸರಿಪಡಿಸಲಿದ್ದಾರೆ. ಅರ್ಜಿದಾರರು ಪೆರೋಲ್‌ ಕೋರಲು ನೀಡಿರುವ ಮೇಲಿನ ಎರಡೂ ಕಾರಣಗಳು ಸಮರ್ಥನೀಯವಲ್ಲ ಎಂದ ನ್ಯಾಯಾಲಯ.
Umesh Reddy and Karnataka HC
Umesh Reddy and Karnataka HC

ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿ ಸುಪ್ರೀಂ ಕೋರ್ಟ್‌ ಆದೇಶದ ಬಳಿಕ ಜೀವಾವಧಿ ಶಿಕ್ಷಾ ಬಂಧಿಯಾಗಿರುವ ಬಿ ಎ ಉಮೇಶ್‌ ಅಲಿಯಾಸ್‌ ಉಮೇಶ್‌ ರೆಡ್ಡಿಗೆ ತಾಯಿಯ ಜೊತೆ ಕಳೆಯಲು 30 ದಿನ ಪೆರೋಲ್‌ ನೀಡಲು ಈಚೆಗೆ ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ 48 ವರ್ಷದ ಉಮೇಶ್‌ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

“ಉಮೇಶ್‌ ರೆಡ್ಡಿಯನ್ನು ಪೆರೋಲ್‌ ಮೇಲೆ ಬಿಡುಗಡೆ ಮಾಡಿದರೆ ಹಿಂದಿನ ದ್ವೇಷವು ಆತನ ಬದುಕಿಗೆ ಎರವಾಗಲಿದೆ. ದ್ವೇಷ ಮರುಕಳಿಸಲಿದೆ” ಎಂದು ಚಿತ್ರದುರ್ಗದ ಐಮಂಗಲ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಅವರು ಪರಪ್ಪನ ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ ಸಲ್ಲಿಸಿರುವ ವರದಿಯಲ್ಲಿ ವಿವರಿಸಿರುವುದನ್ನು ನ್ಯಾಯಾಲಯವು ಆದೇಶದಲ್ಲಿ ಉಲ್ಲೇಖಿಸಿದೆ.

“ಉಮೇಶ್‌ ರೆಡ್ಡಿ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ನೋಡಿಕೊಳ್ಳಬೇಕಿದೆ ಎಂದು ವಾದಿಸಲಾಗಿದೆ. ಆದರೆ, ವರದಿಯಲ್ಲಿ ಬೇರೆಯದೇ ಅಂಶವಿದೆ. ಉಮೇಶ್‌ ರೆಡ್ಡಿಗೆ ಇಬ್ಬರು ಸಹೋದರರಿದ್ದು, ಅವರು ತಾಯಿಯನ್ನು ನೋಡಿಕೊಳ್ಳುವುದರ ಜೊತೆಗೆ ಶಿಥಿಲಗೊಂಡಿರುವ ಮನೆಯನ್ನು ಸರಿಪಡಿಸಲಿದ್ದಾರೆ. ಅರ್ಜಿದಾರರು ಪೆರೋಲ್‌ ಕೋರಲು ನೀಡಿರುವ ಮೇಲಿನ ಎರಡೂ ಕಾರಣಗಳು ಸಮರ್ಥನೀಯವಲ್ಲ” ಎಂದು ನ್ಯಾಯಾಲಯ ಹೇಳಿದೆ.

“ಪ್ರತಿಯೊಂದು ಪ್ರಕರಣದಲ್ಲಿಯೂ ಮನವಿ ಮಾಡಿದಾಕ್ಷಣ ಪೆರೋಲ್‌ ನೀಡಲಾಗದು. ಪೆರೋಲ್‌ ನೀಡುವಾಗ ನಾಣ್ಯದ ಎರಡೂ ಮುಖಗಳನ್ನು ಪರಿಶೀಲಿಸಬೇಕಿದೆ. ಶಿಕ್ಷೆಯ ಸುಧಾರಣಾ ಸಿದ್ಧಾಂತದಲ್ಲಿ ಇರುವ ಪೆರೋಲ್ ಮಂಜೂರು ಮಾಡುವ ಅವಶ್ಯಕತೆಯನ್ನು ಗಮನಿಸುವುದರ ಜೊತೆಗೆ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯವನ್ನು ಪರಿಗಣಿಸಬೇಕಾಗಿದೆ. ವಿಶೇಷವಾಗಿ ಅಪರಾಧಿಗಳು ಜೀವಾವಧಿ ಶಿಕ್ಷೆಗೆ ಗುರಿಯಾಗಿರುವಾಗ ನಾಣ್ಯದ ಮತ್ತೊಂದು ಮುಖವನ್ನು ನಗಣ್ಯವಾಗಿ ಕಾಣಲಾಗದು. ಉಮೇಶ್‌ ರೆಡ್ಡಿಯನ್ನು ಇತರೆ ಅಪರಾಧಿಗಳಂತೆ ನೋಡಿ, ಪೆರೋಲ್‌ ಮೇಲೆ ಬಿಡುಗಡೆ ಮಾಡಲಾಗದು. 30 ವರ್ಷ ಶಿಕ್ಷೆ ಅನುಭವಿಸಿದರೆ ಪೆರೋಲ್‌ ನೀಡಬಹುದು ಎಂಬ ನಿಯಮವು ಅಸ್ಫಾಖ್‌ ಪ್ರಕರಣದಲ್ಲಿನಂತೆ ಎಲ್ಲದಕ್ಕೂ ಅನ್ವಯಿಸದು. ಹೀಗಾಗಿ, ಪೆರೋಲ್‌ ಕೋರಿರುವ ಉಮೇಶ್‌ ರೆಡ್ಡಿ ಪುರಸ್ಕರಿಸಲಾಗದು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಹಸ್ಮತ್‌ ಪಾಷಾ ಅವರು “ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿದ್ದು, ಅಪರಾಧಿಯು ಇತರೆ ಅಪರಾಧಿಗಳಂತೆ ಆಗಿದ್ದೇನೆ. ಸುಪ್ರೀಂ ಕೋರ್ಟ್‌ ತೀರ್ಪನ್ನು ತಪ್ಪಾಗಿ ಅರ್ಥೈಸಿ, ವ್ಯಾಖ್ಯಾನಿಸಲಾಗಿದೆ. 30 ವರ್ಷ ಪೂರ್ಣಗೊಳಿಸುವವರೆಗೆ ಅಪರಾಧಿಯು ಕ್ಷಮಾದಾನ ಕೋರಲಾಗದು ಎಂದು ಹೇಳಲಾಗಿದೆ. ಇದು ಉಮೇಶ್‌ ರೆಡ್ಡಿ ಪೆರೋಲ್‌ ಕೋರಿರುವುದಕ್ಕೆ ಅನ್ವಯಿಸುವುದಿಲ್ಲ. ಆತನ ತಾಯಿ ಅನಾರೋಗ್ಯದಿಂದ ಬಳಲುತ್ತಿರುವುದಕ್ಕಾಗಿ 30 ದಿನ ಪೆರೋಲ್‌ ಮೇಲೆ ಬಿಡುಗಡೆ ಮಾಡಬೇಕು” ಎಂದು ಕೋರಿದ್ದರು.

ಸರ್ಕಾರದ ಪರವಾಗಿ ವಾದಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಸಿ ಎಸ್‌ ಪ್ರದೀಪ್‌ ಅವರು “ಪ್ರತಿಯೊಬ್ಬ ಅಪರಾಧಿಯನ್ನು ಪೆರೋಲ್‌ ಮೇಲೆ ಬಿಡುಗಡೆ ಮಾಡಲಾಗದು. ಅಪರಾಧಿಯೊಬ್ಬನನ್ನು ಪೆರೋಲ್‌ ಮೇಲೆ ಬಿಡುಗಡೆ ಮಾಡುವಾಗ ಹಲವು ವಿಚಾರಗಳನ್ನು ಪರಿಗಣಿಸಬೇಕಾಗುತ್ತದೆ. ಅರ್ಜಿದಾರ ಕ್ಷಮಾಪಣೆಗೆ ಅರ್ಹವಾಗಿಲ್ಲದಾಗಿರುವಾಗ ಅವರನ್ನು ಪೆರೋಲ್‌ ಮೇಲೆ ಬಿಡುಗಡೆ ಮಾಡಲಾಗದು. ರೆಡ್ಡಿ ಬಿಡುಗಡೆ ಮಾಡುವುದರಿಂದ ಆತನ ಪ್ರಾಣಕ್ಕೆ ಅಪಾಯವಿದ್ದು, ಪೆರೋಲ್‌ ಪಡೆಯಲು ಆತ ಅರ್ಹನಲ್ಲ. ರೆಡ್ಡಿಯು ಭಯಾನಕ ಕ್ರಿಮಿನಲ್‌ ಆಗಿದ್ದಾನೆ. ಪೊಲೀಸ್‌ ಕಾನ್‌ಸ್ಟೆಬಲ್‌ ಆಗಿದ್ದ ರೆಡ್ಡಿ ಸರಣಿ ಅತ್ಯಾಚಾರ ಮತ್ತು ಕೊಲೆಗಳನ್ನು ಮಾಡಿದ್ದಾನೆ. ಆತ ಸೀರಿಯಲ್‌ ಕಿಲ್ಲರ್‌ ಎಂದೇ ಕುಖ್ಯಾತಿ ಪಡೆದಿದ್ದಾನೆ. ಹೀಗಾಗಿ, ಆತನಿಗೆ ಪೆರೋಲ್‌ ನೀಡಬಾರದು” ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಹಲವು ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದ ಉಮೇಶ್‌ ರೆಡ್ಡಿಯನ್ನು 1998ರ ಮಾರ್ಚ್‌ 2ರಂದು ಐಪಿಸಿ ಸೆಕ್ಷನ್‌ಗಳಾದ 302, 376 ಮತ್ತು 392 ಅಡಿ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಮರಡಿ ಸುಬ್ಬಯ್ಯ ಅವರ ಪತ್ನಿ ಜಯಶ್ರೀ ಅವರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪ ಉಮೇಶ್‌ ರೆಡ್ಡಿಯ ಮೇಲಿತ್ತು. 26-10-2006ರಂದು ರೆಡ್ಡಿಯನ್ನು ಅಪರಾಧಿ ಎಂದು ಘೋಷಿಸಿ, ಆತನಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಬಂಧಿತನಾಗಿರುವ ದಿನದಿಂದ ಇದುವರೆಗೂ ಉಮೇಶ್‌ ರೆಡ್ಡಿ ಸರಳುಗಳ ಹಿಂದೆ ಇದ್ದಾನೆ. 18-02-2009ರಂದು ಹೈಕೋರ್ಟ್‌ನ ತ್ರಿಸದ್ಯ ಪೀಠವು ಉಮೇಶ್‌ ರೆಡ್ಡಿಗೆ ಗಲ್ಲು ಶಿಕ್ಷೆ ಕಾಯಂಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ 01-02-2011ರಂದು ವಜಾ ಮಾಡಿತ್ತು. 01-02-2011ರಂದು ಕ್ಷಮಾಪಣೆ ಕೋರಿದ್ದ ಅರ್ಜಿಯ ಮರುಪರಿಶೀಲನೆ ಕೋರಿ ರಾಜ್ಯಪಾಲರಿಗೆ ಉಮೇಶ್‌ ರೆಡ್ಡಿ ಅರ್ಜಿ ಸಲ್ಲಿಸಿದ್ದನು. ಆನಂತರ ರಾಷ್ಟ್ರಪತಿಗಳಲ್ಲಿ ಕ್ಷಮಾಪಣೆ ಕೋರಲಾಗಿತ್ತು. ಈ ಎಲ್ಲಾ ಅರ್ಜಿಗಳು ತಿರಸ್ಕೃತಗೊಂಡಿದ್ದವು.

04-11-2022ರಂದು ದೇಶಾದ್ಯಂತ ಇದ್ದ ಗಲ್ಲು ಶಿಕ್ಷೆ ಅಪರಾಧಿಗಳ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಎಲ್ಲರ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿತ್ತು. 30 ವರ್ಷ ಶಿಕ್ಷೆ ಪೂರ್ಣಗೊಳಿಸಿದ ಬಳಿಕ ಅರ್ಜಿದಾರರು ಕ್ಷಮಾಪಣೆ ಕೋರಿದ್ದರೆ ಅದನ್ನು ಪರಿಗಣಿಸಬಹುದು ಎಂದು ಹೇಳಿತ್ತು. ಅದರ ಪ್ರಕಾರ ಉಮೇಶ್‌ ರೆಡ್ಡಿ 26 ವರ್ಷ ಶಿಕ್ಷೆ ಪೂರೈಸಿದ್ದು, ತಾಯಿ ಅಂತಿಮ ದಿನಗಳನ್ನು ಎಣಿಸುತ್ತಿದ್ದು ಅವರ ಜೊತೆ ಕಳೆಯಲು 30 ದಿನಗಳ ಪೆರೋಲ್‌ ರಜೆ ನೀಡಬೇಕು ಎಂದು ಕೋರಿದ್ದರು. ಆದರೆ, ಅರ್ಜಿದಾರ 30 ವರ್ಷ ಶಿಕ್ಷೆ ಪೂರ್ಣಗೊಳಿಸಿಲ್ಲ ಎಂಬ ಸುಪ್ರೀಂ ಕೋರ್ಟ್‌ ಆದೇಶ ಉಲ್ಲೇಖಿಸಿ ಉಮೇಶ್‌ ರೆಡ್ಡಿಯ ಅರ್ಜಿ ತಿರಸ್ಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಆತ ಹಾಲಿ ಅರ್ಜಿ ಸಲ್ಲಿಸಿದ್ದನು.

Related Stories

No stories found.
Kannada Bar & Bench
kannada.barandbench.com