
₹700 ಕೋಟಿ ಮಾದಕವಸ್ತು ಜಾಲದ ಸೂತ್ರಧಾರ ಎಂಬ ಆರೋಪದ ಮೇಲೆ ದಶಕದ ಹಿಂದೆ ಬಂಧಿತರಾಗಿದ್ದ ಪಂಜಾಬ್ನ ವಜಾಗೊಂಡ ಪೊಲೀಸ್ ಉಪ ವರಿಷ್ಠಾಧಿಕಾರಿ (ಡಿಎಸ್ಪಿ) ಮತ್ತು ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ವಿಜೇತ ಕುಸ್ತಿಪಟು ಜಗದೀಶ್ ಸಿಂಗ್ ಭೋಲಾ ಅವರಿಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ಜಾಮೀನು ನೀಡಿದೆ.
ಆತ ತನ್ನ 12 ವರ್ಷಗಳ ಶಿಕ್ಷೆಯ ಅವಧಿಯಲ್ಲಿ ಈಗಾಗಲೇ 11 ವರ್ಷ 5 ತಿಂಗಳುಗಳನ್ನು ಜೈಲಿನಲ್ಲಿ ಕಳೆದಿದ್ದು ಆತನ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗಳು ಬಾಕಿ ಉಳಿದಿವೆ. ಮೇಲ್ಮನವಿ ಮುಂದಿನ ದಿನಗಳಲ್ಲಿ ಅಂತಿಮ ವಿಚಾರಣೆಗೆ ಬರುವ ಸಾಧ್ಯತೆಗಳಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ಮತ್ತು ನ್ಯಾಯಮೂರ್ತಿ ಸುಮೀತ್ ಗೋಯೆಲ್ ಅವರಿದ್ದ ಪೀಠ ಹೇಳಿತು.
ಗಮನಾರ್ಹ ಸಂಗತಿ ಎಂದರೆ ಭೋಲಾ ಅವರು 100 ಸಸಿಗಳನ್ನು ನೆಡಬೇಕು ಎಂದು ನ್ಯಾಯಾಲಯ ಜಾಮೀನು ಷರತ್ತು ವಿಧಿಸಿದೆ. ತಪ್ಪಿದಲ್ಲಿ ಜಾಮೀನು ರದ್ದಾಗುತ್ತದೆ ಎಂದು ಕೂಡ ಅದು ಎಚ್ಚರಿಕೆ ನೀಡಿದೆ.
ಮಾದಕ ವಸ್ತು ಕಳ್ಳಸಾಗಣೆ ಜಾಲದ ಪ್ರಮುಖ ಸೂತ್ರಧಾರ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾದಕವಸ್ತು ಮತ್ತುಅಮಲು ಪದಾರ್ಥ ಕಾಯಿದೆ (ಎನ್ಡಿಪಿಎಸ್ ಕಾಯಿದೆ) ಅಡಿ 2019 ರಲ್ಲಿ ಭೋಲಾ ಅವರನ್ನು ದೋಷಿ ಎಂದು ಘೋಷಿಸಲಾಯಿತು. ಔಷಧೀಯ ಉದ್ದೇಶಗಳಿಗಾಗಿ ಬಳಸಬೇಕಿದ್ದ ರಾಸಾಯನಿಕಗಳನ್ನು ಸಂಶ್ಲೇಷಿತ ಮಾದಕವಸ್ತು ತಯಾರಿಸುವ ಕಾರ್ಖಾನೆಗಳಿಗೆ ವರ್ಗಾಯಿಸಿದ ಆರೋಪ ಈ ಜಾಲದ ಮೇಲಿತ್ತು.
ವರದಿಗಳ ಪ್ರಕಾರ ಇದಕ್ಕೂ ಮುನ್ನ ಅಂದರೆ 2008 ರಲ್ಲಿ ಮಾದಕ ವಸ್ತು ಹೊಂದಿದ್ದ ಆರೋಪದ ಮೇಲೆ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದರು. ಪರಿಣಾಮ ಕ್ರೀಡಾಕ್ಷೇತ್ರದ ಅತ್ಯುನ್ನತ ಪುರಸ್ಕಾರ ಎನಿಸಿದ ಅರ್ಜುನ ಪ್ರಶಸ್ತಿಯನ್ನು ಆತನಿಂದ ಹಿಂಪಡೆಯಲಾಗಿತ್ತು. ಅಲ್ಲದೆ ಡಿಎಸ್ಪಿ ಹುದ್ದೆಯಿಂದಲೂ ಅಮಾನತುಗೊಳಿಸಲಾಗಿತ್ತು.
2013 ರಲ್ಲಿ, ಮುಂಬೈ ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರ, ಪಂಜಾಬ್ ಪೊಲೀಸರು ದೊಡ್ಡ ಮಾದಕವಸ್ತು ಜಾಲವನ್ನು ಬಯಲು ಮಾಡಿದ್ದರು. ಇದರಲ್ಲಿ ಭೋಲಾ ಪ್ರಮುಖ ಪಾತ್ರ ವಹಿಸಿದ್ದಾರೆಂದು ಆರೋಪಿಸಲಾಗಿತ್ತು. ಇದೇ ಘಟನೆಗೆ ಸಂಬಂಧಿಸಿದಂತೆ ಅವರ ಹಾಗೂ ಇತರರ ವಿರುದ್ಧ ಹಣ ವರ್ಗಾವಣೆ ಪ್ರಕರಣ ದಾಖಲಿಸಲಾಗಿತ್ತು.2019ರಲ್ಲಿ ಎನ್ಡಿಪಿಎಸ್ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ, ಅವರು ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ದೀರ್ಘಾವಧಿಯ ಸೆರೆವಾಸ ಅನುಭವಿಸಿರುವುದನ್ನು ಪರಿಗಣಿಸಿದ ಹೈಕೋರ್ಟ್ ಆತನಿಗೆ ಜಾಮೀನು ನೀಡಿದೆ.