
ಐದು ತಿಂಗಳ ಹಿಂದೆಯೇ ತೀರ್ಪುನೀಡಲಾಗಿದ್ದರೂ ಅದನ್ನು ನ್ಯಾಯಾಲಯದ ಜಾಲತಾಣದಲ್ಲಿ ಪ್ರಕಟಿಸಲು ವಿಳಂಬವಾಗಿದ್ದಕ್ಕೆ ನ್ಯಾಯಾಲಯದ ದೀರ್ಘ ಕೆಲಸದ ಅವಧಿ, ತಡರಾತ್ರಿಯವರೆಗೆ ಆದೇಶ ಬರೆಯುವುದು ಹಾಗೂ ವಾರಾಂತ್ಯದಲ್ಲಿಯೂ ನಡೆಯುವ ವಿಚಾರಣೆಗಳು ಕಾರಣ ಎಂದು ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಈಚೆಗೆ ಹೇಳಿದ್ದಾರೆ [ಅಲ್ಕಾ ಶ್ರೀರಂಗ್ ಚವಾಣ್ ಮತ್ತಿತರರು ಹಾಗೂ ಹೇಮಚಂದ್ರ ರಾಜಾರಾಮ್ ಭೋನ್ಸಲೆ ಇನ್ನಿತರರ ನಡುವಣ ಪ್ರಕರಣ].
ಕಳೆದ ವರ್ಷ ಡಿಸೆಂಬರ್ನಲ್ಲಿಯೇ ಮುಕ್ತ ನ್ಯಾಯಾಲಯದಲ್ಲಿ ತೀರ್ಪು ನೀಡಲಾಗಿದ್ದರೂ, ದೀರ್ಘಾವಧಿಯ ನಿತ್ಯದ ಕೆಲಸ ಹಾಗೂ ಬಾಕಿ ಉಳಿದ ಕೆಲಸದ ಪ್ರಮಾಣದಿಂದಾಗಿ ತೀರ್ಪನ್ನು ಮೇ 30ರವರೆಗೆ ಜಾಲತಾಣದಲ್ಲಿ ಪ್ರಕಟಿಲು ಸಾಧ್ಯವಾಗಲಿಲ್ಲ ಎಂದು ನ್ಯಾ. ಮಾಧವ್ ಜೆ ಜಾಮ್ದಾರ್ ಅವರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
ನ್ಯಾಯಾಲಯದ ಕೆಲಸದ ಅವಧಿಯ ನಂತರವೂ ದಿನವೂ ಹೆಚ್ಚಿನ ಅವದಿಗೆ ವಿಚಾರಣೆ ನಡೆಸುತ್ತಿದ್ದೆ. ಪ್ರಕರಣಗಳನ್ನು ನಿಯಮಿತವಾಗಿ ಆಲಿಸುತ್ತಿದೆ. ಮನೆಗೆ ತೆರಳಿದ ನಂತರವೂ ವಿವಿಧ ಆದೇಶಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆ ತಡರಾತ್ರಿಯವರೆಗೆ ನಡೆಯುತ್ತಿತ್ತು. ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಗೊಳಿಸುವುದಕ್ಕಾಗಿ ವಾರಾಂತ್ಯ ಮತ್ತು ರಜಾದಿನಗಳಲ್ಲಿಯೂ ಕೆಲಸ ಮುಂದುವರೆಸುತ್ತಿದ್ದುದಾಗಿ ಅವರು ವಿವರಿಸಿದ್ದಾರೆ.
ಪ್ರತಿದಿನ ಕೆಲಸದ ಅವಧಿ ಮುಕ್ತಾಯಗೊಂಡು 2 ಅಥವಾ ಎರಡೂ ಕಾಲು ಗಂಟೆ ಕಳೆದರೂ ನಾನು ನ್ಯಾಯಾಲಯ ನಡೆಸುವುದರಿಂದ; ನ್ಯಾಯಾಲಯದ ಎಲ್ಲಾ ಕೆಲಸದ ದಿನಗಳಲ್ಲಿ 10:30 ರಿಂದ 11:30 ರ ನಂತರ ದೈನಂದಿನ ಆದೇಶಗಳನ್ನು ಅಂತಿಮಗೊಳಿಸುತ್ತಿದ್ದುದರಿಂದ; ಅಲ್ಲದೆ ಪ್ರಕರಣದ ಪತ್ರಗಳನ್ನು ನಸುಕಿನ 02:00ಗಂಟೆಯರವರೆಗೆ ಓದುತ್ತ ಇದ್ದುದರಿಂದ ಹಾಗೂ ಶನಿವಾರ ಇಲ್ಲವೇ ಭಾನುವಾರ ಸಹ ರಜಾದಿನಗಳಲ್ಲಿ ಕೂಡ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಕೆಲಸ ಮಾಡುತ್ತಿದ್ದುದರಿಂದ ಈ ಪ್ರಕರಣದ ಆದೇಶವನ್ನು ಪ್ರಕಟಿಸುವುದು ವಿಳಂಬವಾಗಿದೆ” ಎಂದು ಅವರು ವಿವರಿಸಿದ್ದಾರೆ.
ಡಿಸೆಂಬರ್ 24, 1984 ರ ಒಪ್ಪಂದದ ನಿರ್ದಿಷ್ಟ ಕಾರ್ಯಕ್ಷಮತೆಗಾಗಿ 1986ರಷ್ಟು ಹಿಂದೆ ಸಲ್ಲಿಸಲಾಗಿದ್ದ ಮೊಕದ್ದಮೆಯಲ್ಲಿ ಡಿಕ್ರಿ-ಹೋಲ್ಡರ್ಗಳಿಗೆ ಆಸ್ತಿಯ ಒಡೆತನ ನೀಡುವಂತೆ ಸೂಚಿಸಿದ ಜಾರಿ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿಗಳು ಈ ವಿಚಾರ ತಿಳಿಸಿದ್ದಾರೆ.
[ತೀರ್ಪಿನ ಪ್ರತಿ]