[ಪಿಎಸ್‌ಐ ನೇಮಕಾತಿ ಹಗರಣ] ರಾಜ್ಯ ಸರ್ಕಾರಕ್ಕೆ ನೋಟಿಸ್‌ ನೀಡಿದ ಹೈಕೋರ್ಟ್‌; ಸಿಐಡಿ ಅಧಿಕಾರಿಗೆ ತುರ್ತು ನೋಟಿಸ್‌

"ನೀವು ನಿರ್ಭಿಡೆಯ ಹೆಜ್ಜೆ ಇರಿಸಿದ್ದೀರಿ. ಸಾಧಕಬಾಧಕಗಳನ್ನು ಪರೀಕ್ಷಿಸುತ್ತಿದ್ದೀರಿ” ಎಂದು ಅರ್ಜಿದಾರರ ಪರ ವಕೀಲರಿಗೆ ಹೇಳಿದ ನ್ಯಾಯಾಲಯ.
PSI exam scam and Karnataka HC
PSI exam scam and Karnataka HC

ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಆರೋಪದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿರುವ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ರದ್ದುಪಡಿಸುವಂತೆ ಕೋರಿ ತಾತ್ಕಾಲಿಕ ಪಟ್ಟಿಯಲ್ಲಿ ಮೊದಲ ಮತ್ತು ನಾಲ್ಕನೇ ರ‍್ಯಾಂಕ್‌ ಪಡೆದಿರುವ ಇಬ್ಬರು ಅಭ್ಯರ್ಥಿಗಳು ಸಲ್ಲಿಸಿರುವ ರಿಟ್‌ ಮನವಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಗುರುವಾರ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

ಪಿಎಸ್‌ಐ ನೇಮಕಾತಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಪ್ರಥಮ ರ‍್ಯಾಂಕ್‌ ಪಡೆದಿರುವ ಬೆಂಗಳೂರಿನ ರಚನಾ ಹನಮಂತ್‌ ಹಾಗೂ ನಾಲ್ಕನೇ ರ‍್ಯಾಂಕ್‌ ಪಡೆದಿರುವ ಜಾಗೃತ್‌ ಅವರು ಸಲ್ಲಿಸಿರುವ ಪ್ರತ್ಯೇಕ ಮನವಿಗಳನ್ನು ನ್ಯಾಯಮೂರ್ತಿ ಜೆ ಎಂ ಖಾಜಿ ಅವರ ನೇತೃತ್ವದ ರಜಾಕಾಲೀನ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು. ಎರಡನೇ ಪ್ರತಿವಾದಿಯಾಗಿರುವ ಸಿಐಡಿ ಪೊಲೀಸ್‌ ಅಧಿಕಾರಿ ಟಿ ನರಸಿಂಹ ಮೂರ್ತಿ ಅವರಿಗೆ ತುರ್ತು ನೋಟಿಸ್‌ ಜಾರಿ ಮಾಡಿರುವ ನ್ಯಾಯಾಲಯವು ಸಿಐಡಿ ಅಧಿಕಾರಿಗೆ ಹ್ಯಾಂಡ್‌ ನೋಟಿಸ್‌ ನೀಡಲು ಅರ್ಜಿದಾರರಿಗೆ ಅನುಮತಿಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಎಸ್‌ ಶ್ಯಾಮ್‌ ಸುಂದರ್‌ ಅವರು ಪೀಠದ ಮುಂದೆ ಬರುತ್ತಿದ್ದಂತೆ ನ್ಯಾಯಮೂರ್ತಿ ಖಾಜಿ ಅವರು “ನೀವು ಎಲ್ಲಾ ಇಂಥ ಪ್ರಕರಣಗಳಲ್ಲೇ ಬರುತ್ತೀರಿ ವಕೀಲರೇ. ಇದೇನು ಪಿಎಸ್‌ಐ ಹಗರಣಕ್ಕೆ ಸಂಬಂಧಿಸಿದ ಪ್ರಕರಣವಾ? ನಾನು ಯಾವುದೇ ಆದೇಶ ಮಾಡುವುದಿಲ್ಲ. ನ್ಯಾಯಾಲಯ ಪುನಾರಂಭವಾದಾಗ ಯಾವ ದಿನಾಂಕ ಬೇಕು ಕೇಳಿ, ಅಂದು ಪ್ರಕರಣ ಪಟ್ಟಿ ಮಾಡಲಾಗುವುದು” ಎಂದರು.

ಆಗ ಶ್ಯಾಮ್‌ ಸುಂದರ್‌ ಅವರು “ತನಿಖಾಧಿಕಾರಿಯಾಗಿರುವ ನರಸಿಂಹಮೂರ್ತಿ ಅವರೇ ದೂರು ದಾಖಲಿಸಿದ್ದಾರೆ” ಎಂದರು.

ಇದಕ್ಕೆ ಪೀಠವು “ನೀವು ನಿರ್ಭಿಡೆಯ ಹೆಜ್ಜೆ ಇರಿಸಿದ್ದೀರಿ. ಸಾಧಕಬಾಧಕಗಳನ್ನು ಪರೀಕ್ಷಿಸುತ್ತಿದ್ದೀರಿ” ಎಂದಿತು.

ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅವರು ರಾಜ್ಯ ಸರ್ಕಾರದ ಪರವಾಗಿ ನೋಟಿಸ್‌ ಪಡೆದುಕೊಳ್ಳಬೇಕು ಎಂದು ಪೀಠವು ಆದೇಶಿಸಿತು. ಅಲ್ಲದೇ, ಅರ್ಜಿದಾರರು ತನಿಖಾಧಿಕಾರಿಯಾಗಿರುವ ನರಸಿಂಹ ಮೂರ್ತಿ ಅವರಿಗೆ ಹ್ಯಾಂಡ್‌ ನೋಟಿಸ್‌ ನೀಡಲು ತೆರಳಿದಾಗ ಅರ್ಜಿದಾರರನ್ನು ಹಿಡಿದುಕೊಂಡು ಬಿಡಲು ಹೇಳಿ ಎಂದು ಲಘು ದಾಟಿಯಲ್ಲಿ ಸರ್ಕಾರದ ವಕೀಲರನ್ನು ಕುರಿತು ಹೇಳಿತು.

ಪಿಎಸ್‌ಐ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಪ್ರಕರಣಗಳು ಹೈಕೋರ್ಟ್‌ಗೆ ಬರಲಾರಂಭವಾಗುತ್ತವೆ. ಹೀಗಾಗಿ, ಪಿಎಸ್‌ಐ ಪ್ರಕರಣ ನಿರ್ದಿಷ್ಟ ಪೀಠದ ಮುಂದೆ ಬರುವ ಸಂಬಂಧ ನ್ಯಾಯಾಲಯದಿಂದ ಆದೇಶ ಮಾಡಿಸಿಬಿಡಿ. ಇದರಿಂದ ಪ್ರಕರಣದ ಮೇಲೆ ನಿಗಾ ಇಡಲು ನಿಮಗೆ ಮತ್ತು ನ್ಯಾಯಾಲಯಕ್ಕೂ ಅನುಕೂಲವಾಗುತ್ತದೆ ಎಂದು ನ್ಯಾ. ಖಾಜಿ ಅವರು ಸರ್ಕಾರದ ವಕೀಲರಿಗೆ ಸಲಹೆ ನೀಡಿದರು. ಅಂತಿಮವಾಗಿ ಪ್ರಕರಣವನ್ನು ಮೇ 25ಕ್ಕೆ ಮುಂದೂಡಿದರು.

ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಬೇಕು. ಅರ್ಜಿಯನ್ನು ನ್ಯಾಯಾಲಯ ಇತ್ಯರ್ಥಪಡಿಸುವವರೆಗೆ ಪ್ರಕರಣದ ಮುಂದಿನ ಪ್ರಕ್ರಿಯೆ ಹಾಗೂ ತನಿಖೆಗೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿದಾರರು ಮಧ್ಯಂತರ ಮನವಿ ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ ನಡೆದಿರುವ ಸಿಐಡಿ ತನಿಖೆಯಲ್ಲಿ ಅಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ ತಮ್ಮ ವಿರುದ್ಧ ಯಾವುದೇ ಆರೋಪ ಮತ್ತು ಸಾಕ್ಷ್ಯಾಧಾರಗಳು ಸಿಕ್ಕಿಲ್ಲ. ಹೀಗಿದ್ದರೂ ಪ್ರಕರಣದಲ್ಲಿ ಅನಗತ್ಯವಾಗಿ ಸಿಲುಕಿಸುವ ಉದ್ದೇಶದಿಂದ ಎಫ್‌ಐಆರ್ ದಾಖಲಿಸಲಾಗಿದೆ. ಸಿಐಡಿ ಪೊಲೀಸ್ ಅಧಿಕಾರಿ ಪಿ ನರಸಿಂಹ ಮೂರ್ತಿ ಪ್ರಕರಣದ ದೂರುದಾರರಾಗಿದ್ದು, ಅವರೇ ತನಿಖಾ ತಂಡದಲ್ಲಿ ಸಹಾಯಕ ಅಧಿಕಾರಿಯಾಗಿದ್ದಾರೆ. ನಿಯಮಗಳ ಪ್ರಕಾರ ದೂರು ಸಲ್ಲಿಸಿದ ಅಧಿಕಾರಿಯೇ ತನಿಖೆ ನಡೆಸುವಂತಿಲ್ಲ ಎಂದು ಮನವಿಯಲ್ಲಿ ವಿವರಿಸಲಾಗಿದೆ.

Also Read
[ಪಿಎಸ್‌ಐ ಹಗರಣ] ಎಫ್‌ಐಆರ್‌ ರದ್ದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ 1ನೇ ರ‍್ಯಾಂಕ್‌ ರಚನಾ, 4ನೇ ರ‍್ಯಾಂಕ್‌ ಜಾಗೃತ್‌

ಪರೀಕ್ಷಾ ಕೇಂದ್ರದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಮೇಲ್ವಿಚಾರಕರು ಮತ್ತು ವಿಚಕ್ಷಣಾ ಸ್ಕ್ವಾಡ್‌ ಪರೀಕ್ಷಾ ಕೇಂದ್ರದ ಮೇಲೆ ನಿಗಾ ಇಟ್ಟಿದ್ದರು. ಹೀಗಿರುವಾಗ ಪರೀಕ್ಷೆಯಲ್ಲಿ ಯಾವುದೇ ರೀತಿ ನಕಲು ಹಾಗೂ ಅಕ್ರಮ ನಡೆಯಲು ಸಾಧ್ಯವಿಲ್ಲ. ಪರೀಕ್ಷೆ ನಡೆದು ಬಹುತೇಕ ಒಂದು ವರ್ಷ ಕಳೆದಿದೆ. ಆದರೆ, ಇದೀಗ ಫಲಿತಾಂಶ ಪ್ರಕಟಗೊಂಡ ನಂತರ ಎಫ್‌ಐಆರ್‌ ದಾಖಲಿಸಲಾಗಿದೆ. ಪ್ರಕರಣದ ಇತರೆ ಆರೋಪಿಗಳಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಮನವಿಯಲ್ಲಿ ವಿವರಿಸಲಾಗಿದೆ.

Also Read
ಪಿಎಸ್‌ಐ ನೇಮಕಾತಿ ಮರು ಪರೀಕ್ಷೆ: ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಮೇ 24ರವರೆಗೆ ಕಾಲಾವಕಾಶ ನೀಡಿದ ಕೆಎಸ್‌ಎಟಿ

ಪಿಐಎಸ್‌ ಪರೀಕ್ಷೆಗೆ ಸಂಬಂಧಿಸಿದಂತೆ ಬೆಂಗಳೂರಿನ ಪರೀಕ್ಷಾ ಕೇಂದ್ರಗಳಲ್ಲಿ ನಡೆದಿರುವ ಅಕ್ರಮದ ಕುರಿತು ಹೈಗ್ರೌಂಡ್ಸ್‌ ಠಾಣೆಯಲ್ಲಿ ಸಿಐಡಿ ಉಪ ಪೊಲೀಸ್‌ ವರಿಷ್ಠಾಧಿಕಾರಿ ಪಿ ನರಸಿಂಹ ಮೂರ್ತಿ ಅವರ ದೂರಿನ ಮೇರೆಗೆ ಐಪಿಸಿ ಸೆಕ್ಷನ್‌ 120B (ಕ್ರಿಮಿನಲ್‌ ಪಿತೂರಿ), 420 (ವಂಚನೆ), 465 (ನಕಲು), 468 (ವಂಚನೆಗೆ ವಿದ್ಯುನ್ಮಾನ ಸಾಧನ ಬಳಕೆ), 471 (ನಕಲಿ ದಾಖಲೆಯನ್ನು ನೈಜ ಎಂದು ಬಿಂಬಿಸುವುದು) ಜೊತೆಗೆ 34ರ (ಹಲವು ಕೃತ್ಯಗಳಲ್ಲಿ ಭಾಗಿ) ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದ್ದು, ಜಾಗೃತ್‌ ಮೊದಲ ಆರೋಪಿಯಾಗಿದ್ದು, ರಚನಾ ಅವರು 17ನೇ ಆರೋಪಿಯಾಗಿದ್ದಾರೆ. ಒಟ್ಟಾರೆ 22 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

Related Stories

No stories found.
Kannada Bar & Bench
kannada.barandbench.com