
ಸಾಮಾಜಿಕ ಅಥವಾ ಪರಿಸರ ಪರಿಣಾಮದ ಅಧ್ಯಯನ ನಡೆಸದೆ ತರಾತುರಿಯಲ್ಲಿ ಪಂಜಾಬ್ನ ಎಎಪಿ ಸರ್ಕಾರ ರೂಪಿಸಿದ್ದ ಭೂ ಸಂಚಯನ ನೀತಿ 2025ಕ್ಕೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ತಡೆ ನೀಡಿದೆ [ಗುರುದೀಪ್ ಸಿಂಗ್ ಗಿಲ್ ಮತ್ತು ಪಂಜಾಬ್ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಅಗತ್ಯ ಅಧ್ಯಯನ ನಡೆಸಿದೆ ಅಭಿವೃದ್ಧಿ ಕಾರ್ಯಗಳಿಗಾಗಿ ಹತ್ತಾರು ಸಾವಿರ ಎಕರೆ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ನ್ಯಾಯಮೂರ್ತಿಗಳಾದ ಅನುಪಿಂದರ್ ಸಿಂಗ್ ಗ್ರೆವಾಲ್ ಮತ್ತು ದೀಪಕ್ ಮಂಚಂದ ಅವರಿದ್ದ ಪೀಠ ತಿಳಿಸಿತು.
"ಈ ನೀತಿಗೆ ಸಂಬಂಧಿಸಿದಂತೆ ತರಾತುರಿಯಲ್ಲಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು ಸಾಮಾಜಿಕ ಪರಿಣಾಮದ ಮೌಲ್ಯಮಾಪನ, ಪರಿಸರ ಪರಿಣಾಮದ ಮೌಲ್ಯಮಾಪನ, ಸಮಯಸೂಚಿಗಳು ಮತ್ತು ಪರಿಹಾರ ಅಹವಾಲು ಕಾರ್ಯವಿಧಾನ ಸೇರಿದಂತೆ ಎಲ್ಲಾ ಕಾಳಜಿಗಳನ್ನು ನೀತಿಯ ಪ್ರಾರಂಭದಲ್ಲಿಯೇ, ಅಧಿಸೂಚನೆಗೂ ಮುನ್ನವೇ ತಿಳಿಸಬೇಕಾಗಿತ್ತು" ಎಂದು ಪೀಠ ಹೇಳಿದೆ.
2025ರ ನೀತಿಯಡಿಯಲ್ಲಿ, ರಾಜ್ಯ ಸರ್ಕಾರ ನಗರಾಭಿವೃದ್ಧಿಗಾಗಿ ಪಂಜಾಬ್ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾವಿರಾರು ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಯೋಜನೆ ರೂಪಿಸಿತ್ತು. ಸರ್ಕಾರವು ಭೂಮಾಲೀಕರಿಗೆ ಭೂಮಿಗೆ ಬದಲಾಗಿ ಅಭಿವೃದ್ಧಿಪಡಿಸಿದ ವಸತಿ ಮತ್ತು ವಾಣಿಜ್ಯ ಪ್ಲಾಟ್ಗಳನ್ನು ನೀಡಲು ಮುಂದಾಗಿತ್ತು.
ಪಾಕಿಸ್ತಾನದಿಂದ ಸ್ಥಳಾಂತರಗೊಂಡ ವ್ಯಕ್ತಿಯಾಗಿ ತನ್ನ ತಂದೆಗೆ ಮಂಜೂರು ಮಾಡಲಾಗಿದ್ದ ಆರು ಎಕರೆ ಭೂಮಿ ಹೊಂದಿರುವ ಲುಧಿಯಾನ ನಿವಾಸಿಯೊಬ್ಬರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಆಗಸ್ಟ್ 07ರಂದು ಈ ಮಧ್ಯಂತರ ಆದೇಶ ನೀಡಲಾಗಿದೆ.
ನೀತಿ ಅನಿಯಂತ್ರಿತ ಮತ್ತು ಅತಾರ್ಕಿಕವಾಗಿದೆ. ಸ್ವಾಧೀನಪಡಿಸಿಕೊಳ್ಳುವ ಸಮಯದಲ್ಲಿ ಪರಿಹಾರ ಕುರಿತಂತೆ ಯಾವುದೇ ಅವಕಾಶ ನೀಡಿಲ್ಲ. ಜೊತೆಗೆ ಎಕರೆಗೆ ₹50,000 ವಾರ್ಷಿಕ ಜೀವನೋಪಾಯ ಭತ್ಯೆ ಮಾತ್ರ ನೀಡಲಾಗುತ್ತಿದೆ. ಆದರೆ ಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಬಗಳ ಜೀವನೋಪಾಯಕ್ಕೆ ಇದು ತುಂಬಾ ಕಡಿಮೆ ಮೊತ್ತ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು.
ಆದರೆ ಅಭಿವೃದ್ಧಿ ಕಾರ್ಯಗಳೂ ಪ್ರಾರಂಭವಾಗಿಲ್ಲ ಮತ್ತು ಕಡ್ಡಾಯವಾಗಿ ಸ್ವಾಧೀನವೂ ನಡೆದಿರದ ಕಾರಣ, 2013ರ ಭೂಸ್ವಾಧೀನ, ಪುನರ್ವಸತಿ ಮತ್ತು ಮರುವ್ಯವಸ್ಥೆ ಕಾಯಿದೆ ಅಡಿಯಲ್ಲಿ ಮತ್ತು ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು ಕಾಯ್ದೆಯ ಅಧ್ಯಾಯ IIರ ಅಡಿಯಲ್ಲಿ ಯಾವುದೇ ಸಾಮಾಜಿಕ ಪರಿಣಾಮ ಮೌಲ್ಯಮಾಪನ ಅಧ್ಯಯನವನ್ನು ನಡೆಸುವ ಅಗತ್ಯವಿಲ್ಲ ಎಂದು ಸರ್ಕಾರ ವಾದಿಸಿತು.
ಮುಂದಿನ ವಿಚಾರಣೆಯ ದಿನಾಂಕದೊಳಗೆ ನ್ಯಾಯಾಲಯದ ಎಲ್ಲಾ ಕಳವಳಗಳನ್ನು ಪರಿಹರಿಸಲಾಗುವುದು ಎಂದು ಅದು ವಾದಿಸಿತು. ಈ ವಾದವನ್ನು ಪರಿಗಣಿಸಿದ ಪೀಠ ನೀತಿಗೆ ತಡೆ ನೀಡಿ ಸೆಪ್ಟೆಂಬರ್ 10ಕ್ಕೆ ವಿಚಾರಣೆ ನಿಗದಿಪಡಿಸಿತು.