ಪ್ರಧಾನಿ ಮೋದಿ ಟೀಕೆ: ಎಫ್ಐಆರ್ ರದ್ದತಿ ಕೋರಿ ಅಲಾಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್ ನಾಯಕ ಖೇರಾ

ಈ ಸಂಬಂಧ ಉತ್ತರ ಪ್ರದೇಶ ಸರ್ಕಾರ ಮತ್ತು ಖಾಸಗಿ ದೂರುದಾರರು ಪ್ರತಿಕ್ರಿಯೆ ನೀಡುವಂತೆ ನ್ಯಾಯಮೂರ್ತಿಗಳಾದ ಸಂಗೀತಾ ಚಂದ್ರ ಮತ್ತು ನರೇಂದ್ರ ಕುಮಾರ್ ಜೋಹಾರಿ ಅವರಿದ್ದ ವಿಭಾಗೀಯ ಪೀಠ ಏಪ್ರಿಲ್ 6ರಂದು ಕೋರಿದೆ.
Pawan Khera
Pawan Khera facebook

ಮಾಧ್ಯಮಗೋಷ್ಠಿಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸಿದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಗೊಳಿಸುವಂತೆ ಕೋರಿ ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರು ಅಲಾಹಾಬಾದ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ [ಪವನ್ ಖೇರಾ ಮತ್ತು ಉತ್ತರಪ್ರದೇಶ ಸರ್ಕಾರ ನಡುವಣ ಪ್ರಕರಣ].

ಈ ಸಂಬಂಧ ಉತ್ತರ ಪ್ರದೇಶ ಸರ್ಕಾರ ಮತ್ತು ಖಾಸಗಿ ದೂರುದಾರರಾದ ಬಿಜೆಪಿ ಉತ್ತರಪ್ರದೇಶ ಶಾಸಕ ಮುಖೇಶ್ ಶರ್ಮಾ, ಬಿಜೆಪಿಯ ಕಾಶಿ ಕ್ಷೇತ್ರ ಅಧ್ಯಕ್ಷ ಮಹೇಶ್ ಚಂದ್ರ ಹಾಗೂ ಶ್ರೀವಾಸ್ತವ ಹಾಗೂ ಅಸ್ಸಾಂ ಬಿಜೆಪಿ ನಾಯಕ ಹೆನ್ ಸ್ಯಾಮ್ಯುಯೆಲ್ ಚಾಂಗ್ಸನ್  ಪ್ರತಿಕ್ರಿಯೆ ನೀಡುವಂತೆ  ನ್ಯಾಯಮೂರ್ತಿಗಳಾದ ಸಂಗೀತಾ ಚಂದ್ರ ಮತ್ತು ನರೇಂದ್ರ ಕುಮಾರ್ ಜೋಹಾರಿ ಅವರಿದ್ದ ವಿಭಾಗೀಯ ಪೀಠ ಏಪ್ರಿಲ್ 6ರಂದು ಸೂಚಿಸಿದೆ.

Also Read
ಪ್ರಧಾನಿ ಮೋದಿ ಟೀಕೆ: ಪವನ್ ಖೇರಾ ವಿರುದ್ಧದ ಮೂರು ಎಫ್‌ಐಆರ್‌ಗಳನ್ನು ಉತ್ತರಪ್ರದೇಶಕ್ಕೆ ವರ್ಗಾಯಿಸಿದ ಸುಪ್ರೀಂ

ಸುಪ್ರೀಂ ಕೋರ್ಟ್‌ ಈಗಾಗಲೇ ಖೇರಾ ಅವರಿಗೆ ನೀಡಿರುವ ರಕ್ಷಣೆಯ ಅವಧಿಯನ್ನು ವಿಸ್ತರಿಸಿರುವುದರಿಂದ ಖೇರಾ ಪರವಾಗಿ ಮಧ್ಯಂತರ ಆದೇಶ ನೀಡುವ ಅಗತ್ಯವಿಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿತು. ಪ್ರಕರಣದ ಮುಂದಿನ ವಿಚಾರಣೆ ಮೇ 4ಕ್ಕೆ ನಿಗದಿಯಾಗಿದೆ.

ಗೌತಮ್ ಅದಾನಿ- ಹಿಂಡೆನ್‌ಬರ್ಗ್ ವಿವಾದದ ಬಗ್ಗೆ ಜಂಟಿ ಸಂಸದೀಯ ತನಿಖೆ ನಡೆಸುವಂತೆ ಖೇರಾ ಅವರು ಒತ್ತಾಯಿಸಿದ್ದರು. ಆಗ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಗೆ ಉದ್ದೇಶಪೂರ್ವಕವಾಗಿ ಅವಮಾನ ಉಂಟುಮಾಡುವಂತಹ ಮಾತುಗಳನ್ನಾಡಿದ ಆರೋಪ ಅವರ ವಿರುದ್ಧ ಕೇಳಿಬಂದಿತ್ತು.

"(ಮಾಜಿ ಪ್ರಧಾನಿ) ನರಸಿಂಹರಾವ್ ಅವರು ಜೆಪಿಸಿ (ಜಂಟಿ ಸಂಸದೀಯ ಸಮಿತಿ) ರಚಿಸುವುದಾದರೆ, ಅಟಲ್ ಬಿಹಾರಿ ವಾಜಪೇಯಿ ಅವರು ಜೆಪಿಸಿ ರಚನೆ ಮಾಡುವುದಾದರೆ, ನರೇಂದ್ರ ಗೌತಮ್ ದಾಸ್... ಕ್ಷಮಿಸಿ ದಾಮೋದರ ದಾಸ್ ಮೋದಿ ಅವರಿಗೆ ಜೆಪಿಸಿ ರಚಿಸಲು ಏನು ಸಮಸ್ಯೆ " ಎಂದು ಕೇಳಿದ್ದರು. ಪ್ರಧಾನಿ ಅವರ ತಂದೆ ದಾಮೋದರ್‌ ದಾಸ್‌ ಹೆಸರನ್ನು ಪ್ರಸ್ತಾಪಿಸುವ ಕಡೆ ಗೌತಮ್‌ ಅವರ ಹೆಸರನ್ನು ಉದ್ದೇಶಪೂರ್ವಕವಾಗಿ ಪ್ರಸ್ತಾಪಿಸಲಾಗಿದೆ ಎಂದು ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು.

Also Read
ಪ್ರಧಾನಿ ಮೋದಿಗೆ ಅಪಮಾನ: ಕಾಂಗ್ರೆಸ್‌ ನಾಯಕ ಖೇರಾ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಹೂಡಿರುವ ಸೆಕ್ಷನ್‌ಗಳು ಇವು

ಈ ಹಿನ್ನೆಲೆಯಲ್ಲಿ ಖೇರಾ ಅವರ ವಿರುದ್ಧ 1860ರ ಐಪಿಸಿ ಸೆಕ್ಷನ್ 153 ಎ (ವಿವಿಧ ಗುಂಪುಗಳ ನಡುವೆ ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದಲ್ಲಿ ದ್ವೇಷ ಉಂಟು ಮಾಡುವ ಮತ್ತು ಸೌಹಾರ್ದತೆಗೆ ಧಕ್ಕೆ ತರುವಂತಹ ಕೃತ್ಯಗಳಿಗೆ ಶಿಕ್ಷೆ ), ಐಪಿಸಿ ಸೆಕ್ಷನ್ 295ಎ (ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ಘಾಸಿ), ಸೆಕ್ಷನ್ 500 (ಮಾನಹಾನಿ), ಸೆಕ್ಷನ್‌ 504 (ಶಾಂತಿಗೆ ಭಂಗ ತರುವ ಸಲುವಾಗಿ ಮಾಡಲಾದ ಉದ್ದೇಶಪೂರ್ವಕ ಅವಮಾನ), ಸೆಕ್ಷನ್‌ 505 (ಸಾರ್ವಜನಿಕ ತೊಂದರೆಗೆ ಕಾರಣವಾಗುವಂತಹ ಹೇಳಿಕೆ), ಸೆಕ್ಷನ್ 505(2) (ವರ್ಗಗಳ ನಡುವೆ ವೈರತ್ವ, ದ್ವೇಷ ಅಥವಾ ದುರುದ್ದೇಶಕ್ಕೆ ಪ್ರಚೋದನೆ) ಅಡಿ ಪ್ರಕರಣ ದಾಖಲಿಸಲಾಗಿತ್ತು.

Related Stories

No stories found.
Kannada Bar & Bench
kannada.barandbench.com