ಸಂವಿಧಾನ ಟೀಕೆ: ಶಾಸಕ ಸಾಜಿ ಅನರ್ಹತೆ ಕೋರಿದ್ದ ಅರ್ಜಿ ಕುರಿತಂತೆ ಸರ್ಕಾರದ ಪ್ರತಿಕ್ರಿಯೆ ಕೇಳಿದ ಕೇರಳ ಹೈಕೋರ್ಟ್

ದೇಶದ ಸಂವಿಧಾನವನ್ನು ಜನಸಾಮಾನ್ಯರ ಶೋಷಣೆಗೆ ಬಳಸಲಾಗಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಮೀನುಗಾರಿಕೆ ಮತ್ತು ಸಂಸ್ಕೃತಿ ಸಚಿವ ಸಾಜಿ ಚೆರಿಯನ್ ಅವರು ಇತ್ತೀಚೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
Saji Cherian, Kerala MLA
Saji Cherian, Kerala MLA Facebook
Published on

ದೇಶದ ಸಂವಿಧಾನಕ್ಕೆ ಅಗೌರವ ತೋರಿದ ಆರೋಪದಡಿ ಸಿಪಿಎಂ ಶಾಸಕ ಹಾಗೂ ಮಾಜಿ ಸಚಿವ ಸಾಜಿ ಚೆರಿಯನ್‌ ಅವರನ್ನು ಶಾಸಕತ್ವದಿಂದ ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್‌ ಬುಧವಾರ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಕೇಳಿದೆ [ಬಿಜು ಪಿ ಚೆರುಮಾನ್ ಮತ್ತು ಭಾರತ ಚುನಾವಣಾ ಆಯೋಗ ನಡುವಣ ಪ್ರಕರಣ].

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸಲು ಸರ್ಕಾರಿ ವಕೀಲರಿಗೆ ಮುಖ್ಯ ನ್ಯಾಯಮೂರ್ತಿ ಎಸ್ ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

Also Read
ಜನನ ಪ್ರಮಾಣಪತ್ರ, ಇತರೆ ದಾಖಲೆಗಳಲ್ಲಿ ತಾಯಿಯ ಹೆಸರನ್ನಷ್ಟೇ ಸೇರಿಸುವ ಹಕ್ಕು: ಮಹತ್ವದ ತೀರ್ಪು ನೀಡಿದ ಕೇರಳ ಹೈಕೋರ್ಟ್

ಶಾಸಕರ ಅರ್ಹತೆಗಳ ಬಗ್ಗೆ ವ್ಯವಹರಿಸುವ 173 (ಎ) ಕಲಂನ ನಿಯಮಾವಳಿಗಳು ಮೇಲ್ನೋಟಕ್ಕೆ ಅನ್ವಯಿಸುವುದಿಲ್ಲ ಎಂದು ಮಂಗಳವಾರ ಪೀಠ ತಿಳಿಸಿತ್ತು. ಆದರೆ ಚೆರಿಯನ್‌ ಭಾಷಣ ಸಂವಿಧಾನದ 188ನೇ ವಿಧಿಯಡಿ (ಶಾಸಕರ ಪ್ರತಿಜ್ಞಾವಿಧಿ) ಅನರ್ಹತೆಯಾಗಲಿದೆಯೇ ಎಂಬುದನ್ನು ಪರಿಶೀಲಿಸಬೇಕಿದೆ ಎಂದು ಹೇಳಿತ್ತು.

ದೇಶದ ಸಂವಿಧಾನವನ್ನು ಜನಸಾಮಾನ್ಯರ ಶೋಷಣೆಗೆ ಬಳಸಲಾಗಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಮೀನುಗಾರಿಕೆ ಮತ್ತು ಸಂಸ್ಕೃತಿ ಸಚಿವ ಸಾಜಿ ಅವರು ಇತ್ತೀಚೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 2ರಂದು ನಡೆಯಲಿದೆ.

Kannada Bar & Bench
kannada.barandbench.com