
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್ ಅವರು ಜುಲೈ 1ರಿಂದ 27ರವರೆಗೆ ವಿದೇಶ ಪ್ರವಾಸ ಕೈಗೊಳ್ಳಲು ಅನುಮತಿಸಿರುವ ಬೆಂಗಳೂರಿನ ಸತ್ರ ನ್ಯಾಯಾಲಯವು ವಿದೇಶದಿಂದ ಮರಳಿದ ಬಳಿಕ ವಿನಾಯಿತಿ ಕೋರದೇ ಕಡ್ಡಾಯವಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂಬ ಷರತ್ತನ್ನು ಶುಕ್ರವಾರ ವಿಧಿಸಿದೆ.
ದರ್ಶನ್ ಅವರು ಸಿಆರ್ಪಿಸಿ ಸೆಕ್ಷನ್ 438(1)(ಬಿ) ಅಡಿ ಸಲ್ಲಿಸಿರುವ ಅರ್ಜಿಯನ್ನು 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶ ಈರಪ್ಪಣ್ಣ ಪಾವಡಿ ನಾಯ್ಕ್ ಅವರು ಪುರಸ್ಕರಿಸಿದ್ದಾರೆ.
ಪ್ರಕರಣದ ತನಿಖೆಯ ಸಂದರ್ಭದಲ್ಲಿ ಜಫ್ತಿ ಮಾಡಿರುವ ₹34 ಲಕ್ಷ ಬಿಡುಗಡೆ ಕೋರಿ ನಟ ದರ್ಶನ್ ಮತ್ತು ಇದಕ್ಕೆ ಆಕ್ಷೇಪಿಸಿ ಆದಾಯ ತೆರಿಗೆ ಇಲಾಖೆಯು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯವು ಜೂನ್ 3ಕ್ಕೆ ನಿಗದಿಪಡಿಸಿದೆ.
ಕಳೆದ ವಿಚಾರಣೆಯಲ್ಲಿ ಪ್ರಕರಣದ ಮೊದಲನೇ ಆರೋಪಿ ಪವಿತ್ರಾ ಗೌಡಗೆ ದೇಶದ ವಿವಿಧ ಪ್ರಮುಖ ನಗರಗಳಲ್ಲಿ ನಡೆಯುವ ಬೊಟೀಕ್ ಮತ್ತು ಉಡುಪುಗಳ ವಸ್ತು ಪ್ರದರ್ಶನದಲ್ಲಿ ಭಾಗಿಯಾಗಲು 15 ದಿನಗಳ ಅನುಮತಿಯನ್ನು ನ್ಯಾಯಾಲಯ ನೀಡಿತ್ತು.