
ಸ್ವತಂತ್ರ ನ್ಯಾಯಾಂಗಕ್ಕೆ ಸ್ವತಂತ್ರ ವಕೀಲ ವರ್ಗ ಬೆಂಬಲ ನೀಡುತ್ತಿರುವುದರಿಂದ ಭಾರತದಲ್ಲಿ ಕಾನೂನಾತ್ಮಕ ಆಡಳಿತ ಎಂಬುದು ಇನ್ನೂ ಚಲಾವಣೆಯಲ್ಲಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ವಿ ನಾಗರತ್ನ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ದೆಹಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಘಟಿಕೋತ್ಸವದಲ್ಲಿ ಮಾತನಾಡಿದ ಅವರು ವಕೀಲರು ಮತ್ತು ನ್ಯಾಯಧೀಶರ ಪರಸ್ಪರ ಬದ್ಧತೆಯಿಂದಾಗಿ ಪ್ರಜಾಪ್ರಭುತ್ವ ಉಳಿಯುತ್ತದೆ ಎಂದು ಹೇಳಿದರು.
ನ್ಯಾಯಾಂಗ ಸ್ವಾತಂತ್ರ್ಯ ಎಂಬುದು ಅಧಿಕಾರ ಪ್ರತ್ಯೇಕತೆಗೆ ಸಂಬಂಧಿಸಿದ್ದಾಗಿದೆ. ಭಾರತದಲ್ಲಿ ಕಾನೂನಾತ್ಮಕ ಆಡಳಿತ ಸುಸ್ಥಿರವಾಗಿರುವುದು ನ್ಯಾಯಾಂಗ ಸ್ವಾತಂತ್ರ್ಯ ಇರುವುದರಿಂದ ಮತ್ತು ಈ ಸ್ವಾತಂತ್ರ್ಯಕ್ಕೆ ವಕೀಲರ ವರ್ಗದ ಬೆಂಬಲ ಇರುವುದರಿಂದ ಎಂದು ಅವರು ವಿವರಿಸಿದರು.
ನ್ಯಾ. ನಾಗರತ್ನ ಅವರ ಭಾಷಣದ ಪ್ರಮುಖಾಂಶಗಳು
ಸ್ವತಂತ್ರ ನ್ಯಾಯಾಂಗ ಮತ್ತು ವಕೀಲರ ವರ್ಗದಿಂದಾಗಿ ದೇಶದ ಕಾನೂನಾತ್ಮಕ ಆಡಳಿತ ಸುಸ್ಥಿರವಾಗಿದೆ.
ವಕೀಲರು ಮತ್ತು ನ್ಯಾಯಧೀಶರ ಪರಸ್ಪರ ಬದ್ಧತೆಯಿಂದಾಗಿ ಪ್ರಜಾಪ್ರಭುತ್ವ ಉಳಿಯುತ್ತದೆ.
ಕಕ್ಷಿದಾರರ ಆಚೆಗೂ ವಕೀಲರು ಪಾತ್ರ ವಹಿಸಲಿದ್ದು ಅವರು ಸಂವಿಧಾನದ ಆಜೀವ ರಕ್ಷಕಾರಾಗಿರಬೇಕು.
ಸಂವಿಧಾನದ ಯಶಸ್ಸು ಅದನ್ನು ರಕ್ಷಿಸುವವರ ಮೇಲೆ ಅವಲಂಬಿತವಾಗಿದೆ ಎಂಬುದು ಡಾ. ಬಿ ಆರ್ ಅಂಬೇಡ್ಕರ್ ಅವರ ಆಶಯವಾಗಿತ್ತು. ಅಧಿಕಾರದಲ್ಲಿರುವವರಷ್ಟೇ ಅಲ್ಲದೆ ಎಲ್ಲಾ ವಕೀಲರು ಸಂವಿಧಾನದ ಪರವಾಗಿ ಕಾರ್ಯ ನಿರ್ವಹಿಸಬೇಕು.
ಉತ್ತಮ ಕಾನೂನು ವೃತ್ತಿಗೆ ಆಧಾರ ನೈತಿಕತೆ. ನೈತಿಕ ಸಂಘರ್ಷದ ಕ್ಷಣಗಳಲ್ಲಿ, ವಕೀಲರ ಸಮಗ್ರತೆ ಹೆಚ್ಚು ಮುಖ್ಯವಾಗುತ್ತದೆ.
ಕಾನೂನು ಜೀವನ ಎಂಬುದು ಕೇವಲ ವೃತ್ತಿಯಲ್ಲ, ಬದಲಾಗಿ ಸಾರ್ವಜನಿಕ ಸೇವೆಯಾಗಿದೆ.
ವಕೀಲರು ಸಂವಿಧಾನವನ್ನು ಜನರ ಬದುಕಿನ ಭಾಷೆಗೆ ಅನುವಾದಿಸುವವರು.
ಕಾನೂನು ವೃತ್ತಿಎಂಬುದು ಅಸಮಾನತೆಗಳನ್ನು ಕಡಿಮೆ ಮಾಡಬಲ್ಲದು. ಹಕ್ಕುಗಳು ಮತ್ತು ಪರಿಹಾರಗಳನ್ನು ಒದಗಿಸುವ ಜೊತೆಗೆ ಸಂವಿಧಾನ ಹಾಗೂ ನಾಗರಿಕರ ನಡುವೆ, ನ್ಯಾಯ ಮತ್ತು ಜನರ ನಡುವೆ ಸೇತುವೆಯಾಗಬಲ್ಲದು.