ಸನಾತನ ಧರ್ಮ ಕುರಿತ ಹೇಳಿಕೆ: ಕಾರ್ಯಕ್ರಮದ ಸಂಘಟಕರ ವಿರುದ್ಧದ ಕ್ರಿಮಿನಲ್‌ ಪ್ರಕರಣಕ್ಕೆ ಹೈಕೋರ್ಟ್‌ ತಡೆಯಾಜ್ಞೆ

ಉದಯನಿಧಿ ಸ್ಟ್ಯಾಲಿನ್‌ ನೀಡಿರುವ ಹೇಳಿಕೆಯ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ನ್ಯಾಯಾಲಯವು ಎಲ್ಲಾ ಧರ್ಮಗಳನ್ನು ಗೌರವಿಸುವುದು ಅತಿಮುಖ್ಯ ಎಂದರು.
High Court of Karnataka
High Court of Karnataka
Published on

ʼಸನಾತನ ಧರ್ಮ ನಿರ್ಮೂಲನೆ ಅಗತ್ಯʼ ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟ್ಯಾಲಿನ್‌ ಅವರು ಹೇಳಿಕೆ ನೀಡಿದ್ದಾರೆ ಎನ್ನಲಾದ ಕಾರ್ಯಕ್ರಮದ ಸಂಘಟಕರ ವಿರುದ್ಧದ ಕ್ರಿಮಿನಲ್‌ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ತಡೆಯಾಜ್ಞೆ ನೀಡಿದೆ.

ತಮಿಳುನಾಡಿನ ಸಂಘಟಕರಾದ ವೆಂಕಟೇಶನ್‌, ಎಂ ರಾಮಲಿಂಗಂ ಮತ್ತು ಆಧವನ್‌ ಧೀತ್ಚನ್ಯ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ನಡೆಸಿದರು.

ವರದಿಯಾಗಿರುವ ವಿವಾದಾತ್ಮಕ ಭಾಷಣದ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ಪೀಠವು ಎಲ್ಲಾ ಧರ್ಮಗಳನ್ನು ಗೌರವಿಸುವುದು ಅಗತ್ಯ ಎಂದು ಒತ್ತಿ ಹೇಳಿದರು. “ಹೇಳಿಕೆ ನೋಡಿ, ಅಲ್ಲಿಯ ಆರೋಪಗಳನ್ನು ನೋಡಿ. ಕೆಲವು ಸಿದ್ಧಾಂತ, ಧರ್ಮ, ಧರ್ಮಗ್ರಂಥಗಳನ್ನು ನಾವು ಒಪ್ಪದಿರುವುದು ಒಂದು ಕಡೆಯಾದರೆ ಅದನ್ನು ತುಚ್ಛವಾಗಿ ಕಾಣಯವುದು ಇನ್ನೊಂದು ವಿಚಾರವಾಗಿದೆ” ಎಂದು ನ್ಯಾ. ದೀಕ್ಷಿತ್‌ ಮೌಖಿಕವಾಗಿ ಹೇಳಿದರು.

ತಮಿಳುನಾಡು ಪ್ರಗತಿಪರ ಬರಹಗಾರರು, ಕಲಾವಿದರ ಸಂಘಟನೆ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಉದಯನಿಧಿ ಸ್ಟ್ಯಾಲಿನ್‌ ಅವರು “ಡೆಂಗಿ, ಸೊಳ್ಳೆಗಳು, ಮಲೇರಿಯಾ ಅಥವಾ ಕೊರೊನಾ ವೈರಸ್‌ ನಿರ್ಮೂನೆ ಮಾಡಿದ ಹಾಗೆ ಸನಾತನ ಧರ್ಮವನ್ನೂ ನಾವು ತೊಲಗಿಸಬೇಕು ಎಂದಿದ್ದರು.

ಇದಕ್ಕೆ ಪೀಠವು “ಜನರು ತಾವು ಏನು ಮಾತನಾಡುತ್ತಾರೆ ಎಂಬುದರ ಬಗ್ಗೆ ಎಚ್ಚರಿಕೆ ವಹಿಸಬೇಕು. ಇಂಥ ಮಾನಹಾನಿ ಹೇಳಿಕೆ ನೀಡಬಾರದು. ಅವರು ಸಾರ್ವಜನಿಕ ವ್ಯಕ್ತಿಗಳಾದ ಅಂಥ ಹೇಳಿಕೆಯನ್ನೇ ನೀಡಬಾರದು” ಎಂದರು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮದ ಸಂಘಟಕರ ವಿರುದ್ಧ ಕರ್ನಾಟಕದಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ವಿಚಾರಣಾಧೀನ ನ್ಯಾಯಾಲಯದಲ್ಲಿನ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ.

ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು “ವಿವಾದಾತ್ಮಕ ಭಾಷಣವನ್ನು ಕಾರ್ಯಕ್ರಮದ ಸಂಘಟಕರಿಗೆ ಅನ್ವಯಿಸಲಾಗದು. ಕಾರ್ಯಕ್ರಮ ಚೆನ್ನೈನಲ್ಲಿ ನಡೆದಿರುವುದರಿಂದ ವಿಚಾರಣೆ ನಡೆಸಲು ಬೆಂಗಳೂರು ಮ್ಯಾಜಿಸ್ಟ್ರೇಟ್‌ ವ್ಯಾಪ್ತಿ ಹೊಂದಿಲ್ಲ. ಸ್ಥಳೀಯ ಪತ್ರಿಕೆ ಕಾರ್ಯಕ್ರಮದ ವರದಿ ಪ್ರಕಟಿಸಿರುವುದನ್ನು ಆಧರಿಸಿ ಪ್ರಕರಣ ದಾಖಲಿಸಲಾಗಿದೆ. ನಾವು ಪ್ರಸ್ತುತ ಪ್ರಕರಣ ದಾಖಲಾಗಿರುವ ಮ್ಯಾಜಿಸ್ಟ್ರೇಟ್‌ ವ್ಯಾಪ್ತಿಯಲ್ಲಿ ಅಪರಾಧ ಎಸಗಿದ್ದೇವೆಯೇ ಎಂಬ ಪ್ರಶ್ನೆ ಇದೆ… ಅವರು ಎಲ್ಲಾ ಪ್ರಕಟಣೆಗಳೂ ಅಪರಾಧ ಎನ್ನುತ್ತಾರೆ. ನಾವು ಪ್ರಕಾಶಕರನ್ನು ಸಂಘಟಿಸಿರಲಿಲ್ಲ” ಎಂದರು.

ಇದನ್ನು ಆಲಿಸಿದ ಪೀಠವು ವ್ಯಾಪ್ತಿ ಕುರಿತಾದ ಪ್ರಶ್ನೆಯನ್ನು ಪರಿಶೀಲಿಸಬೇಕಿದೆ. ಆದರೆ, ಪ್ರತಿಯೊಬ್ಬರೂ ಎಲ್ಲಾ ಧರ್ಮಗಳನ್ನು ಗೌರವಿಸಬೇಕು ಎಂದರು.

ಆಗ ಪ್ರೊ. ಕುಮಾರ್‌ ಅವರು “ಹಿಂದೂ ಧರ್ಮ ಸಹಿಷ್ಣುತೆಗೆ ಹೆಸರುವಾಸಿಯಾಗಿದೆ. ಹಿಂದೂ ಧರ್ಮ ಹೊರತುಪಡಿಸಿ ಜಗತ್ತಿನ ಬಹುತೇಕ ಧರ್ಮಗಳು ಏಕದೇವರ ಆರಾಧನೆ ಮಾಡುತ್ತವೆ. ಹಿಂದೂ ಧರ್ಮ ಆಸ್ತಿಕತೆಯನ್ನಷ್ಟೇ ಅಲ್ಲ, ನಾಸ್ತಿಕತೆಯನ್ನು ಒಪ್ಪುತ್ತದೆ” ಎಂದರು.

ಇದಕ್ಕೆ ನ್ಯಾ. ದೀಕ್ಷಿತ್‌ ಅವರು ಉದಯನಿಧಿ ಭಾಷಣ ಉಲ್ಲೇಖಿಸಿ “ಆದರೆ ಅದನ್ನು ತುಚ್ಛವಾಗಿ ಕಾಣುವುದೇಕೆ?” ಎಂದರು. ಇದಕ್ಕೆ ಪ್ರೊ. ಕುಮಾರ್‌ ಅವರು “ಇಲ್ಲಿ ನಾನು ಆ ಹೇಳಿಕೆ ನೀಡಿರುವ ವ್ಯಕ್ತಿಯನ್ನು ಪ್ರತಿನಿಧಿಸಿಲ್ಲ. ಹೇಳಿಕೆ ನೀಡಿರುವ ಮೊದಲ ಆರೋಪಿ ಉದಯನಿಧಿ” ಎಂದರು. ಈ ನಡುವೆ, ನ್ಯಾ. ದೀಕ್ಷಿತ್‌ ಅವರು “ಅವರು ಸಂಘಟಕರು? ಭಾಷಣಕಾರರು ಏನು ಮಾಡುತ್ತಾರೆ ಎಂಬುದು ಅವರಿಗೇನು ಗೊತ್ತಿರುತ್ತದೆ” ಎಂದರು.

ಆಗ ಪ್ರೊ. ಕುಮಾರ್‌ ಅವರು “ಹಿಂದೂಗಳಿಗೆ ಅತ್ಯುನ್ನತವಾದ ಸಹಿಷ್ಣುತೆ ಇದೆ. ನನ್ನ ಹಿರಿಯರಾದ ಹಾವನೂರು ಅವರು ಸಹಿಷ್ಣುತೆ ನಮಗೆ ರಕ್ತಗತವಾಗಿದೆ ಎನ್ನುತ್ತಿದ್ದರು” ಎಂದರು. ಇದಕ್ಕೆ ನ್ಯಾ. ದೀಕ್ಷಿತ್‌ ಅವರು “ಈ ಕಾರಣಕ್ಕಾಗಿಯೇ ಹಲವು ನಂಬಿಕೆಗಳು ಭಾರತಕ್ಕೆ ಬಂದವು. ಕ್ರೈಸ್ತ ಧರ್ಮವು ಯುರೋಪ್‌ಗೆ ಹೋಗುವುದಕ್ಕೂ ಮುನ್ನ ಭಾರತಕ್ಕೆ ಬಂದಿತು ಎಂದು ನೆಹರೂ ಬರೆದಿದ್ದಾರೆ… ಪಾರ್ಸಿಗಳು, ಮುಸ್ಲಿಮರು ಬಂದರು” ಎಂದರು. ಇದಕ್ಕೆ ಪ್ರೊ. ಕುಮಾರ್‌ ಅವರು “ಆದರೆ, ಬೌದ್ಧ ಧರ್ಮವನ್ನು ಇಲ್ಲಿಂದ ಆಚೆಗೆ ನೂಕಲಾಯಿತು” ಎಂದರು.

ಇದಕ್ಕೆ ನ್ಯಾ. ದೀಕ್ಷಿತ್‌ “ಬೌದ್ಧ ಧರ್ಮ ಹಿಂದೂ ಧರ್ಮದ ಭಾಗ ಎಂದು ಪರಿಗಣಿಸಲಾಗಿದೆ. ಇದನ್ನೇ ಪಣಿಕ್ಕರ್‌, ವಿಲ್‌ ಡುರಾಂಟ್‌ ಬರೆದಿದ್ದಾರೆ” ಎಂದರು.

ಆಗ ಪ್ರೊ. ಕುಮಾರ್‌ ಅವರು “ಇದು ಚರ್ಚಾರ್ಹ ವಿಚಾರವಾಗಿದ್ದು, ಇದರಿಂದ ಅಂತರದಲ್ಲಿದ್ದೇನೆ” ಎಂದರು. ಅಲ್ಲದೇ, ದನದ ಮಾಂಸವನ್ನು ಸಾಗಿಸಲಾಗುತ್ತಿದೆ ಎಂದು ಈಚೆಗೆ ಮೂವರನ್ನು ಹೇಗೆ ಹತ್ಯೆ ಮಾಡಲಾಗಿದೆ ಎಂದು ವಿವರಿಸಿದರು.

ಸಹಿಷ್ಣುತೆ ಮತ್ತು ಅಸಹಿಷ್ಣುತೆ ಕುರಿತು ಪರಸ್ಪರ ನ್ಯಾ. ದೀಕ್ಷಿತ್‌ ಮತ್ತು ಪ್ರೊ. ಕುಮಾರ್‌ ನಡುವೆ ಚರ್ಚೆ ನಡೆಯಿತು. ಅಂತಿಮವಾಗಿ ನ್ಯಾ. ದೀಕ್ಷಿತ್‌ ಅವರು “ಸಹ ಜೀವನ ಒಂದು ಮಂತ್ರ… ಇದನ್ನೇ ಸಂವಿಧಾನ ಹೇಳುತ್ತದೆ. ದೇಶ ಒಂದು ಸಮುದಾಯಕ್ಕಲ್ಲ, ಈ ಮಾತೃಭೂಮಿಯಲ್ಲಿ ನೆಲೆಸಿರುವ ಪ್ರತಿಯೊಬ್ಬರಿಗೂ ದೇಶ ಸಲ್ಲುತ್ತದೆ” ಎಂದರು.

ಕೀಸ್ಟೋನ್‌ ಪಾರ್ಟ್ನರ್ಸ್ ತಂಡದ ಪರವಾಗಿ ಆದಿತ್ಯ ಚಟರ್ಜಿ, ನಿಖಿತಾ ಸುರಭಿ ಮತ್ತು ಸಹಜ ಬುರ್ದೆ ಹಾಜರಿದ್ದರು. 

Kannada Bar & Bench
kannada.barandbench.com