
ಎರಡು ವರ್ಷಗಳ ಹಿಂದೆ ಅಂದರೆ 2023ರಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಹಿಂಸಾಚಾರಕ್ಕೆ ತುತ್ತಾಗಿದ್ದ ಮಣಿಪುರದ ಸಂತ್ರಸ್ತರ ಪರಿಹಾರ ಶಿಬಿರಗಳಿಗೆ ಸುಪ್ರೀಂ ಕೋರ್ಟ್ ಆರು ನ್ಯಾಯಮೂರ್ತಿಗಳ ತಂಡ ಮಾರ್ಚ್ 22ರಂದು ಭೇಟಿ ನೀಡಿ ಅಲ್ಲಿನ ನಿರಾಶ್ರಿತರಿಗೆ ಕಾನೂನು ಮತ್ತು ಮಾನವೀಯ ನೆರವು ನೀಡಲಿದೆ.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ (ಎನ್ಎಎಲ್ಎಸ್ಎ) ಅಧ್ಯಕ್ಷರೂ ಆಗಿರುವ ನ್ಯಾಯಮೂರ್ತಿ ಬಿ ಆರ್ ಗವಾಯಿ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ವಿಕ್ರಮ್ ನಾಥ್, ಎಂ ಎಂ ಸುಂದರೇಶ್, ಕೆ ವಿ ವಿಶ್ವನಾಥನ್ ಹಾಗೂ ಎನ್ ಕೋಟಿಶ್ವರ್ ಸಿಂಗ್ ಮಣಿಪುರಕ್ಕೆ ಭೇಟಿ ನೀಡುತ್ತಿದ್ದಾರೆ.
"ನೂರಾರು ಮಂದಿಯ ಪ್ರಾಣಹರಣ, 50,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರದ ಮೇ 3, 2023ರ ವಿನಾಶಕಾರಿ ಜನಾಂಗೀಯ ಹಿಂಸಾಚಾರ ನಡೆದ ಸುಮಾರು ಎರಡು ವರ್ಷಗಳಾಗಿದ್ದು ಅನೇಕರು ಮಣಿಪುರದ ವಿವಿಧ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಈ ಭೇಟಿ ಸಂತ್ರಸ್ತ ಸಮುದಾಯಗಳಿಗೆ ಪ್ರಸ್ತುತ ಕಾನೂನು ಮತ್ತು ಮಾನವೀಯ ನೆರವು ಅಗತ್ಯವಿರುವುದನ್ನು ಎತ್ತಿ ತೋರಿಸಲಿದೆ" ಎಂದು ಮಾರ್ಚ್ 17 ರಂದು ಎನ್ಎಎಲ್ಎಸ್ಎ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಭೇಟಿಯ ಸಮಯದಲ್ಲಿ, ನ್ಯಾಯಮೂರ್ತಿ ಗವಾಯಿ ಅವರು ಮಣಿಪುರದ ಎಲ್ಲಾ ಜಿಲ್ಲೆಗಳಲ್ಲಿ ನಡೆಯಲಿರುವ ಕಾನೂನು ಸೇವಾ ಶಿಬಿರಗಳು ಮತ್ತು ವೈದ್ಯಕೀಯ ಶಿಬಿರಗಳನ್ನು ವರ್ಚುವಲ್ ವಿಧಾನದಲ್ಲಿ ಉದ್ಘಾಟಿಸಲಿದ್ದಾರೆ. ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ ಮತ್ತು ಉಖ್ರುಲ್ ಜಿಲ್ಲೆಗಳಲ್ಲಿ ಹೊಸ ಕಾನೂನು ನೆರವು ಕೇಂದ್ರಗಳನ್ನು ಉದ್ಘಾಟಿಸಲಿದ್ದಾರೆ. ತಮ್ಮ ಊರುಗಳನ್ನು ತೊರೆದು ಆಂತರಿಕವಾಗಿ ಸ್ಥಳಾಂತರಗೊಂಡ ವ್ಯಕ್ತಿಗಳಿಗೆ (ಐಡಿಪಿಗಳು) ಅಗತ್ಯ ಪರಿಹಾರ ಸಾಮಗ್ರಿಗಳ ವಿತರಣೆ ನಡೆಯಲಿದೆ.
ಕಾನೂನು ಸೇವಾ ಶಿಬಿರಗಳು ಮನೆ-ಮಠ ತೊರೆದವರರಿಗೆ ಸರ್ಕಾರಿ ಕಲ್ಯಾಣ ಕಾರ್ಯಕ್ರಮಗಳನ್ನು ಒದಗಿಸಲಿವೆ, ಆರೋಗ್ಯ ರಕ್ಷಣೆ, ಪಿಂಚಣಿ, ಉದ್ಯೋಗ ಯೋಜನೆಗಳು ಮತ್ತು ಗುರುತಿನ ದಾಖಲೆಗಳ ಮರು ಒದಗಿಸುವಿಕೆಯಂತಹ ಪ್ರಮುಖ ಸವಲತ್ತುಗಳನ್ನು ನೀಡಲಿವೆ.
ಹಿಂಸಾಚಾರದ ನಡುವೆಯೂ ಗಲಭೆ ಪೀಡಿತ ಸಮುದಾಯಗಳಿಗೆ ಮಣಿಪುರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಎಂಎಎಸ್ಎಲ್ಎಸ್ಎ) ಜೊತೆ ಸೇರಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ಎನ್ಎಎಲ್ಎಸ್ಎ) ಕಾನೂನು ನೆರವು ಮತ್ತು ಬೆಂಬಲ ನೀಡುತ್ತಾ ಬಂದಿದೆ. ಎಂಎಎಸ್ಎಲ್ಎಸ್ಎ ಪರಿಹಾರ ಶಿಬಿರಗಳಲ್ಲಿ 273 ವಿಶೇಷ ಕಾನೂನು ನೆರವು ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಸರ್ಕಾರಿ ಸೌಲಭ್ಯಗಳು, ಕಳೆದುಹೋದ ದಾಖಲೆಗಳು ಮತ್ತು ವೈದ್ಯಕೀಯ ನೆರವು ಪಡೆಯಲು ಸ್ಥಳಾಂತರಗೊಂಡವರಿಗೆ ಸಹಾಯ ಮಾಡುತ್ತಿದೆ.