![[ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ] ದತ್ತಾಂಶ ಸಂರಕ್ಷಣೆ ಕುರಿತು ಆಯೋಗದ ಅಫಿಡವಿಟ್ ಸಲ್ಲಿಕೆ: ಸರ್ಕಾರದ ವಿವರಣೆ](http://media.assettype.com/barandbench-kannada%2F2025-09-19%2Fq7pbjpvy%2FCaste-Survey.jpeg?w=480&auto=format%2Ccompress&fit=max)
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸಲಾಗುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸಂಗ್ರಹಿಸುತ್ತಿರುವ ದತ್ತಾಂಶ ಸಂರಕ್ಷಣೆಯನ್ನು ಹೇಗೆ ಮಾಡಲಾಗುತ್ತಿದೆ ಎಂಬುದರ ವಿಸ್ತೃತ ಅಫಿಡವಿಟ್ ಅನ್ನು ನ್ಯಾಯಾಲಯದ ನಿರ್ದೇಶನದಂತೆ 24 ಗಂಟೆಯೊಳಗೆ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರವು ಸೋಮವಾರ ಕರ್ನಾಟಕ ಹೈಕೋರ್ಟ್ಗೆ ತಿಳಿಸಿದೆ.
ರಾಜ್ಯದಲ್ಲಿ ಜಾತಿ ಗಣತಿ ಪ್ರಶ್ನಿಸಿ ಶಿವರಾಜ್ ಕಣಶೆಟ್ಟಿ ಮತ್ತಿತರರು ಹಾಗೂ ಜಾತಿ ಗಣತಿ ವರದಿ ಜಾರಿ ಕೋರಿ ಮುಖ್ಯಮಂತ್ರಿ ಚಂದ್ರು ಮತ್ತಿತರರು ಸಲ್ಲಿಸಿರುವ ಪ್ರತ್ಯೇಕ ನಾಲ್ಕು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ಸಮಾಜ ಸಂಪರ್ಕ ವೇದಿಕೆ ಪ್ರತಿನಿಧಿಸಿದ್ದ ವಕೀಲ ಕೆ ಅಭಿಷೇಕ್ ಅವರು “ಕಳೆದ ಸೆಪ್ಟೆಂಬರ್ 25ರಂದು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮುಂದುವರಿಕೆಗೆ ಅನುಮತಿಸಿ, ಸಮೀಕ್ಷೆಯಲ್ಲಿ ಸಂಗ್ರಹಿಸುವ ದತ್ತಾಂಶ ಸಂರಕ್ಷಣೆಯ ಕುರಿತು ವಿಸ್ತೃತ ಅಫಿಡವಿಟ್ ಸಲ್ಲಿಸಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ನ್ಯಾಯಾಲಯ ನಿರ್ದೇಶಿಸಿತ್ತು. ಆದರೆ, ಇದುವರೆಗೆ ಸರ್ಕಾರವು ಅಫಿಡವಿಟ್ ಸಲ್ಲಿಸಿಲ್ಲ ಅಥವಾ ಅದರ ಪ್ರತಿಯನ್ನು ನಮಗೆ ಒದಗಿಸಿಲ್ಲ” ಎಂದರು.
ಇದಕ್ಕೆ ಪೀಠವು “ಅಫಿಡವಿಟ್ ಸಲ್ಲಿಸಲು ಆಯೋಗಕ್ಕೆ ಒಂದು ವಾರ ಕಾಲಾವಕಾಶ ನೀಡಲಾಗಿತ್ತಲ್ಲವೇ? ಪರಿಶೀಲನೆ ನಡೆಸಿ, ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿ” ಎಂದಿತು.
ಈ ನಡುವೆ, ವಿಡಿಯೊ ಕಾನ್ಫರೆನ್ಸ್ನಲ್ಲಿ ಹಾಜರಾದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ಅಫಿಡವಿಟ್ ಸಲ್ಲಿಸಲು ಆಯೋಗಕ್ಕೆ ಹೈಕೋರ್ಟ್ ಒಂದು ದಿನ ಕಾಲಾವಕಾಶ ನೀಡಿತ್ತು. ಅದರಂತೆ ಅಫಿಡವಿಟ್ ಸಲ್ಲಿಸಲಾಗಿದೆ. ಅದರ ಪ್ರತಿಯನ್ನು ಅರ್ಜಿದಾರರಿಗೆ ಒದಗಿಸಲಾಗುವುದು” ಎಂದರು.
ಈ ಮಧ್ಯೆ, ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು “ಹಾಲಿ ಸಮೀಕ್ಷೆ ಪ್ರಶ್ನಿಸಿರುವ ಅರ್ಜಿಗಳನ್ನು ಡಿಸೆಂಬರ್ 5ಕ್ಕೆ ನಿಗದಿಪಡಿಸಲಾಗಿದೆ. ಅಂದೇ ಈ ಅರ್ಜಿಗಳನ್ನು ವಿಚಾರಣೆಗೆ ನಿಗದಿಪಡಿಸಬಹುದು” ಎಂದು ಕೋರಿದರು.
ಇದೇ ವೇಳೆ, 2015ರಲ್ಲಿ ನಡೆಸಲಾಗಿರುವ ಜಾತಿ ಗಣತಿಯನ್ನು ಪ್ರಶ್ನಿಸಿ ಬೀದರ್ನ ಶಿವರಾಜ್ ಕಣಶೆಟ್ಟಿ, ನರಗುಂದದ ಚಂದ್ರಶೇಖರ ಸಾಂಬ್ರಾಣಿ, ಹುನಗುಂದದ ಬಸವರಾಜ ದಿಂಡೂರ ಮತ್ತು ಬೆಂಗಳೂರಿನ ಎಂ ಎಸ್ ನಟರಾಜ್ ಸಲ್ಲಿಸಿರುವ ಪಿಐಎಲ್ ಮತ್ತು ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ 2009ರ ಸೆಕ್ಷನ್ 27ರ ಮತ್ತು ಅದರ ಅಡಿ 2010ರ ಅಡಿ ರೂಪಿಸಿರುವ ನಿಯಮಗಳ ಹೊರತಾಗಿ ಶಿಕ್ಷಕರನ್ನು ಬೇರಾವುದೇ ಕರ್ತವ್ಯಕ್ಕೆ ನಿಯೋಜಿಸದಂತೆ ಕೋರಿ ಬೆಂಗಳೂರಿನ ಬುಜೇಂದ್ರ ಮತ್ತು ಇತರರು ಸಲ್ಲಿಸಿದ್ದ ಪಿಐಎಲ್ ಹಿಂಪಡೆಯಲು ನ್ಯಾಯಾಲಯ ಅನುಮತಿಸಿತು.
ಅತಿ ಹಿಂದುಳಿದ ಜಾತಿಗಳ ಹಿತರಕ್ಷಣಾ ಸಮಿತಿಯ ಗೌರವಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮತ್ತು ವೇದಿಕೆಯ ಅಧ್ಯಕ್ಷ ಎಂ ಸಿ ವೇಣುಗೋಪಾಲ್, ತಿಗಳ ಕ್ಷತ್ರಿಯಾ ಮಹಾಸಭಾದ ಅಧ್ಯಕ್ಷ ಎಚ್ ಸುಬ್ಬಣ್ಣ, ಕರ್ನಾಟಕ ಪ್ರದೇಶ ಕುರುಬ ಸಂಘದ ಕಾರ್ಯದರ್ಶಿ ಡಿ ವೆಂಟಕೇಶ್ ಮೂರ್ತಿ, ರಾಜ್ಯ ಮಡಿವಾಳರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್ ಆರ್ ಯಲ್ಲಪ್ಪ, ಸೋಮವಂಶ ಆರ್ಯ ಕ್ಷತ್ರಿಯಾ ಸಮಾಜದ ಕೆ ವೆಂಕಟ ಸುಬ್ಬಾರಾಜು ಮತ್ತಿತರರು ಸಮೀಕ್ಷೆಯ ವರದಿ ಬಿಡುಗಡೆ ಹಾಗೂ ಜಾರಿಗೆ ಆಗ್ರಹಿಸಿರುವ ಅರ್ಜಿ ಮತ್ತು ಸಮೀಕ್ಷೆಗೆ ಆಕ್ಷೇಪಿಸಿ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕಾಯಿದೆ ಸೆಕ್ಷನ್ 9(i) ರದ್ದುಪಡಿಸುವಂತೆ ಕೋರಿ ಸಮಾಜ ಸಂಪರ್ಕ ವೇದಿಕೆ ಸಲ್ಲಿಸಿರುವ ಅರ್ಜಿಗಳನ್ನು ಡಿಸೆಂಬರ್ 5ಕ್ಕೆ ವಿಚಾರಣೆಗೆ ನಿಗದಿಪಡಿಸಿ ನ್ಯಾಯಾಲಯ ಆದೇಶಿಸಿತು.