ಅನುಮಾನ ಮತ್ತು ಸಂಶಯಗಳು ಅಪರಾಧಕ್ಕೆಆಧಾರವಾಗದು: 22 ವರ್ಷಗಳ ಹಿಂದೆ ಪತ್ನಿ ಕೊಂದ ಆರೋಪಿಯನ್ನು ಖುಲಾಸೆಗೊಳಿಸಿದ ಸುಪ್ರೀಂ

ತಪ್ಪು ಮತ್ತು ಅಪೂರ್ಣ ಪುರಾವೆಗಳ ಆಧಾರದ ಮೇಲೆ ಮೇಲ್ಮನವಿದಾರನನ್ನು ಅಪರಾಧಿ ಎಂದು ನಿರ್ಣಯಿಸಿ ಕೆಳ ನ್ಯಾಯಾಲಯಗಳು ಗಂಭೀರ ತಪ್ಪೆಸಗಿದ್ದು ಇದು ನ್ಯಾಯದ ಅಪಹಾಸ್ಯಕ್ಕೆ ಕಾರಣವಾಗುತ್ತದೆ ಎಂದು ಪೀಠ ಹೇಳಿದೆ.
Supreme Court
Supreme Court
Published on

ಸುಮಾರು 22 ವರ್ಷಗಳ ಹಿಂದೆ ತನ್ನ ಹೆಂಡತಿಯನ್ನು ಕೊಂದದ್ದಾಗಿ ಕೇವಲ ಅನುಮಾನಗಳ ಆಧಾರದ ಮೇಲೆ ಕೆಳ ನ್ಯಾಯಾಲಯಗಳಿಂದ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯೊಬ್ಬನನ್ನು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ದೋಷಮುಕ್ತಗೊಳಿಸಿದೆ [ಗುಣೋ ಮಹ್ತೊ ಮತ್ತು ಜಾರ್ಖಂಡ ಸರ್ಕಾರ ನಡುವಣ ಪ್ರಕರಣ].

ಮೃತಪತ್ನಿಯೊಂದಿಗೆ ಆರೋಪಿ ಪತಿಯು ಅಂತಿಮವಾಗಿ ಕಾಣಿಸಿಕೊಂಡಿದ್ದ ಎಂಬ ಕಾರಣಕ್ಕಾಗಿ ಕೆಳ ನ್ಯಾಯಾಲಯಗಳು ಮೇಲ್ಮನವಿದಾರ ಅಪರಾಧಿ ಎಂಬ ಅಭಿಪ್ರಾಯಕ್ಕೆ ಬಂದಿವೆ. ಕೃತ್ಯಕ್ಕೆ ನಂಟು ಕಲ್ಪಿಸುವ ಸಂದರ್ಭಗಳು ಸಾಬೀತಾಗಿಲ್ಲ. ಇದು ಸಮಂಜಸ ಅನುಮಾನವನ್ನು ಮೀರಿದ್ದಾಗಿದೆ ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂಜಯ್ ಕರೋಲ್ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

ಸಂಶಯವು ಎಷ್ಟೇ ಗಂಭೀರವಾಗಿದ್ದರೂ, ಅದು ಕೇವಲ ಪ್ರಾಸಿಕ್ಯೂಷನ್‌ನ ಕಲ್ಪನೆಯ ಕತೆಯಾಗಿದ್ದು ಅದನ್ನು ಸಂಶಯಾಸ್ಪದವಾಗಿ ನಿರೂಪಿಸಲಾಗಿಲ್ಲ. ಇದನ್ನು ಹೊರತುಪಡಿಸಿ ನೇರ, ಸಾಂದರ್ಭಿಕ ಅಥವಾ ಇನ್ನಾವುದೇ ಪುರಾವೆಗಳಿಲ್ಲ. ಆರೋಪಿಯ ಕೃತ್ಯವನ್ನು ಸಾಬೀತುಪಡಿಸುವಂತಹ ಯಾವುದೇ ವಾಸ್ತವಾಂಶ ಪತ್ತೆಯಾಗಿಲ್ಲ. ಸಮಂಜಸ ಅನುಮಾನವನ್ನು ಮೀರಿ ಪ್ರಾಸಿಕ್ಯೂಷನ್‌ ಇದನ್ನು ಮಂಡಿಸಿದೆ ಎಂದು ತೀರ್ಪು ವಿವರಿಸಿದೆ.

ತಪ್ಪು ಮತ್ತು ಅಪೂರ್ಣ ಪುರಾವೆಗಳ ಆಧಾರದ ಮೇಲೆ ಮೇಲ್ಮನವಿದಾರನನ್ನು ಅಪರಾಧಿ ಎಂದು ನಿರ್ಣಯಿಸಿ ಕೆಳ ನ್ಯಾಯಾಲಯಗಳು ಗಂಭೀರ ತಪ್ಪೆಸಗಿದ್ದು ಇದು ನ್ಯಾಯದ ಅಪಹಾಸ್ಯಕ್ಕೆ ಕಾರಣವಾಗುತ್ತದೆ ಎಂದು ಪೀಠ ಹೇಳಿದೆ.

Also Read
ಪುಷ್ಟೀಕರಿಸದ, ಕೇವಲ ಹಿತಾಸಕ್ತ ಸಾಕ್ಷಿಗಳ ಸಾಕ್ಷ್ಯ ಆಧರಿಸಿ ಶಿಕ್ಷೆ ನೀಡುವುದು ಸಮರ್ಥನೀಯವಲ್ಲ: ಸುಪ್ರೀಂ

ವಿಚಾರಣಾ ನ್ಯಾಯಾಲಯ ಆರೋಪಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು 2004ರಲ್ಲಿ ಜಾರ್ಖಂಡ್‌ ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಈ ತೀರ್ಪನ್ನು ಪ್ರಶ್ನಿಸಿ ಆರೋಪಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಸುಮಾರು 35 ವರ್ಷಗಳ ಹಿಂದೆ, ಅಂದರೆ ಆಗಸ್ಟ್ 1988ರಲ್ಲಿ, ಮೇಲ್ಮನವಿದಾರನ ಹೆಂಡತಿ ಬಾವಿಯೊಂದರಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆರೋಪಿಯೇ ತನ್ನ ಪತ್ನಿಯನ್ನು ಕೊಂದು ಸಾಕ್ಷ್ಯಾಧಾರಗಳನ್ನು ನಾಶಗೊಳಿಸಲು ಆಕೆಯ ಮೃತದೇಹವನ್ನು ಹಳ್ಳಿಯ ಬಾವಿಗೆ ಎಸೆದಿದ್ದಾನೆ. ಬಳಿಕ ಪೊಲೀಸರೆದುರು ನಾಪತ್ತೆಯ ಕತೆ ಕಟ್ಟಿದ್ದಾನೆ ಎಂದು ಪ್ರಾಸಿಕ್ಯೂಷನ್‌ ಆರೋಪಿಸಿತ್ತು. ಆದರೆ ಹೈಕೋರ್ಟ್ ಪ್ರತ್ಯಕ್ಷದರ್ಶಿಗಳ ಸಾಕ್ಷ್ಯವನ್ನು ಮಾತ್ರ ಅವಲಂಬಿಸಿ ತೀರ್ಪು ನೀಡಿರುವುದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

ಇಡೀ ಪ್ರಕರಣ ಸಾಂದರ್ಭಿಕ ಸಾಕ್ಷ್ಯವನ್ನು ಆಧರಿಸಿದೆ. ತನಿಖಾ ಅಧಿಕಾರಿಯನ್ನು ವಿಚಾರಣೆಗೆ ಒಳಪಡಿಸಿಲ್ಲ. ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಆರೋಪಿ, ಸಾಕ್ಷ್ಯ ಮರೆಮಾಚಿರುವುದಕ್ಕೆ ನೇರ ಅಥವಾ ಸಾಂದರ್ಭಿಕ ಸಾಕ್ಷ್ಯಗಳಿಲ್ಲ. ಮೇಲ್ಮನವಿದಾರ ತನ್ನ ಮೃತಪತ್ನಿಯನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಕ್ಕೆ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ. ಹೀಗಾಗಿ ಅಪರಾಧಕ್ಕೆ ನಂಟು ಕಲ್ಪಿಸುವ ಸನ್ನಿವೇಶಗಳು ಸಾಬೀತಾಗಿಲ್ಲ ಎಂದು ಪೀಠ ಹೇಳಿತು. ಅದರಂತೆ ಮೇಲ್ಮನವಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್‌, ವಿಚಾರಣಾ ನ್ಯಾಯಾಲಯ ಹಾಗೂ ಹೈಕೋರ್ಟ್‌ ನೀಡಿದ್ದ ಆದೇಶಗಳನ್ನು ರದ್ದುಗೊಳಿಸಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Guno_Mahto_v__State_of_Jharkhand
Preview
Kannada Bar & Bench
kannada.barandbench.com