ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು ಶುಕ್ರವಾರ ರಾತ್ರಿ 9.10ರವರೆಗೆ ಪ್ರಕರಣಗಳ ವಿಚಾರಣೆ ನಡೆಸಿತು.
ಬೆಳಿಗ್ಗೆ 10.30ಕ್ಕೆ ಕಲಾಪ ಆರಂಭಿಸಿದ ಪೀಠ ತನ್ನೆದುರು ಪಟ್ಟಿ ಮಾಡಿದ ಎಲ್ಲಾ ಪ್ರಕರಣಗಳನ್ನು ಆಲಿಸುವುದಕ್ಕಾಗಿ ರಾತ್ರಿಯವರೆಗೂ ವಿಚಾರಣೆ ನಡೆಸಲು ತೀರ್ಮಾನಿಸಿತು.
ನ್ಯಾಯಾಲಯದ ಸಾಮಾನ್ಯ ಕಾರ್ಯಾವಧಿ ಬೆಳಿಗ್ಗೆ 10.30ರಿಂದ ಸಂಜೆ 4ರವರೆಗೆ ಇರುತ್ತದೆ. ಮುಂದಿನ ವಾರ ದಸರಾ ರಜೆ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ರಜೆ ಇರುವುದರಿಂದ ಶುಕ್ರವಾರ ಕೊನೆಯ ಕೆಲಸದ ದಿನವಾಗಿತ್ತು.
ಪ್ರಕರಣಗಳ ವಿಚಾರಣೆ ಮುಕ್ತಾಯಗೊಳಿಸುವ ಮುನ್ನ ಪೀಠವು ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿತು. ಇದೇ ವೇಳೆ, “ಘನ ನ್ಯಾಯಮೂರ್ತಿಗಳು ಕಿರಿಯ ವಕೀಲ ಸಮುದಾಯಕ್ಕೆ ಮಾದರಿಯಾಗಿದ್ದಾರೆ” ಎಂದು ವಕೀಲರೊಬ್ಬರು ಸಹ ಪೀಠವನ್ನು ಶ್ಲಾಘಿಸಿದರು.
ಕಳೆದ ತಿಂಗಳು, ನ್ಯಾ. ಚಂದ್ರಚೂಡ್ ಹಾಗೂ ನ್ಯಾ. ಎ ಎಸ್ ಬೋಪಣ್ಣ ಅವರನ್ನೊಳಗೊಂಡ ಮತ್ತೊಂದು ಸುಪ್ರೀಂ ಕೋರ್ಟ್ ಪೀಠ ಸಾಮಾನ್ಯ ಕೆಲಸದ ಅವಧಿ ಮೀರಿ ಪ್ರಕರಣಗಳ ವಿಚಾರಣೆ ನಡೆಸಿತ್ತು.
ಸುಪ್ರೀಂ ಕೋರ್ಟ್ನಲ್ಲಿ ವಕೀಲರು ಕೆಲಸ ಮಾಡುವ ವಿಧಾನವನ್ನು ಬದಲಾಯಿಸಬೇಕೆಂದು ನ್ಯಾ. ಚಂದ್ರಚೂಡ್ ಕೆಲ ತಿಂಗಳುಗಳ ಹಿಂದೆ ಕರೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಕೋವಿಡ್ ಅಥವಾ ಕೌಟುಂಬಿಕ ಸಾವಿನ ಕಾರಣ ಹೊರತುಪಡಿಸಿ ಪ್ರಕರಣ ಮುಂದೂಡಲು ಕೋರುವಂತಿಲ್ಲ ಎಂದು ಅವರು ಆ ಸಂದರ್ಭದಲ್ಲಿ ಎಚ್ಚರಿಸಿದ್ದರು.