
ಮಗುವಿನ ಪಾಲನೆಗೆ ಸಂಬಂಧಿಸಿದಂತೆ ಭಾರತೀಯ ಪತಿಯೊಂದಿಗೆ ಕಾನೂನು ವ್ಯಾಜ್ಯ ನಡೆಸುತ್ತಿದ್ದ ರಷ್ಯಾದ ಮಹಿಳೆಯೊಬ್ಬರು ತನ್ನ ನಾಲ್ಕು ವರ್ಷದ ಮಗನೊಂದಿಗೆ ಭಾರತದಿಂದ ಪಲಾಯನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯನ್ನು ಪತ್ತೆಹಚ್ಚಲು ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ದೆಹಲಿ ಪೊಲೀಸರು ಜಾಗರೂಕರಾಗಿ ಇರುವಂತೆ ಸ್ಪಷ್ಟ ಸೂಚನೆಗಳನ್ನು ನೀಡಿದ್ದರೂ, ಪೊಲೀಸರ ನಿರ್ಲಕ್ಷ್ಯದಿಂದಾಗಿ ಮಗುವಿನೊಂದಿಗೆ ಆಕೆ ಪರಾರಿಯಾಗಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠ ಹೇಳಿದೆ.
ಆಕೆ ಮಗುವಿನೊಂದಿಗೆ ಪಲಾಯನ ಮಾಡಲು ಪೊಲೀಸರು ಅವಕಾಶ ಮಾಡಿಕೊಟ್ಟಿದ್ದು ತಂದೆ ದೂರು ನೀಡಿದ್ದರೂ ಆಕೆಯನ್ನು ತಡೆಯಲು ಮುಂದಾಗಲಿಲ್ಲ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.
"ರಷ್ಯಾದ ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ತಕ್ಷಣವೇ ಮಾಹಿತಿ ನೀಡುವಂತೆ ನಾವು ಗೃಹ ವ್ಯವಹಾರ ಮತ್ತು ವಿದೇಶಾಂಗ ಸಚಿವಾಲಯಕ್ಕೆ ನಿರ್ದೇಶಿಸುತ್ತಿದ್ದೇವೆ ನಂತರ ಅರ್ಜಿದಾರರು ಮತ್ತು ಅಪ್ರಾಪ್ತ ಮಗುವಿನೊಂದಿಗೆ ಸಂಪರ್ಕ ಸಾಧಿಸುವ ಮಾರ್ಗಗಳು ಮತ್ತು ವಿಧಾನಗಳನ್ನು ಅವು ಕಂಡುಕೊಳ್ಳಬೇಕು... ನಾವು ಯಾವುದೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಮೊದಲು, ಅಧಿಕಾರಿಗಳು ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕ ಸಾಧಿಸಲು, ಇಂಟರ್ಪೋಲ್ ಸೇವೆ ಪಡೆಯಲು ಮತ್ತು ದ್ವಿಪಕ್ಷೀಯ ಒಪ್ಪಂದಗಳ ಪ್ರಕಾರ ಮುಂದಿನ ಕ್ರಮ ತೆಗೆದುಕೊಳ್ಳಲು ಮತ್ತು ಅರ್ಜಿದಾರರು ಮತ್ತು ಮಗುವನ್ನು ಈ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಂಪೂರ್ಣ ಪ್ರಕ್ರಿಯೆಯನ್ನು ಈ ನ್ಯಾಯಾಲಯಕ್ಕೆ ತಿಳಿಸಲು ನಿರ್ದೇಶಿಸಲಾಗಿದೆ" ಎಂದು ಅದು ಹೇಳಿದೆ.
ಪ್ರತ್ಯೇಕವಾಗಿ ವಾಸವಿದ್ದ ದಂಪತಿ ನ್ಯಾಯಾಲಯ ನೀಡಿದ್ದ ಮಧ್ಯಂತರ ಸೂಚನೆ ಪ್ರಕಾರ ತಮ್ಮ ಐದು ವರ್ಷದ ಮಗುವನ್ನು ಜಂಟಿಯಾಗಿ ಸುಪರ್ದಿಗೆ ಪಡೆದಿದ್ದರು. ವಾರದ್ಲಿ ಮೂರು ದಿನ ತಾಯಿಯೊಂದಿಗೆ ಉಳಿದ ದಿನ ತಂದೆಯೊಂದಿಗೆ ಮಗು ಇರಬೇಕು ಎಂದು ನ್ಯಾಯಾಲಯ ನಿರ್ದೇಶಿಸಿತ್ತು.
ಜುಲೈ 7 ರಂದು, ಶಾಲೆಯ ಅವಧಿ ಪೂರ್ಣಗೊಂಡ ನಂತರ ತಾಯಿ, ಮಗು ಇಬ್ಬರೂ ಇಬ್ಬರೂ ಕಾಣೆಯಾಗಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಇದು ಮಗುವಿನ ಯೋಗಕ್ಞೇಮದ ಬಗ್ಗೆ ಗಂಭೀರ ಕಳವಳ ಉಂಟುಮಾಡಿತ್ತು. ಮಗುವಿನ ವೈದ್ಯಕೀಯ ತಪಾಸಣೆ ಮತ್ತು ಶಾಲಾ ಹಾಜರಾತಿ ತಪ್ಪಿಹೋಗಿತ್ತು ಎಂದು ಆಕ್ಷೇಪಿಸಲಾಗಿತ್ತು.
ಆರೋಪಗಳ ಹಿನ್ನೆಲೆಯಲ್ಲಿ ತಾಯಿ ಮತ್ತು ಮಗುವನ್ನು ಪತ್ತೆಹಚ್ಚಬೇಕು. ಅವರು ದೇಶ ತೊರೆಯದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿತ್ತು. ಆದರೂ ಮಗು ಪತ್ತೆಯಾಗದ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಲಾಗಿತ್ತು.
ಇಂದಿನ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರಯ ಭಾಟಿ ವಾದ ಮಂಡಿಸಿದರು. 10 ದಿನಗಳ ಬಳಿಕ ಪ್ರಕರಣವನ್ನು ನ್ಯಾಯಾಲಯ ಮತ್ತೆ ಆಲಿಸಲಿದೆ.