

ಅರಾವಳಿ ಗಿರಿಸಾಲುಗಳ ವ್ಯಾಖ್ಯಾನಕ್ಕೆ ಸಂಬಂಧಿಸಿದ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡು ನಾಳೆ (ಸೋಮವಾರ) ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.
ಅರಾವಳಿ ಬೆಟ್ಟ ಶ್ರೇಣಿಗಳ ವ್ಯಾಖ್ಯಾನ ಮತ್ತು ಪೂರಕ ಸಮಸ್ಯೆಗಳು ಹೆಸರಿನ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಹಾಗೂ ಆಗಸ್ಟಿನ್ ಜಾರ್ಜ್ ಮಸೀಹ್ ಅವರನ್ನೊಳಗೊಂಡ ರಜಾಕಾಲೀನ ಪೀಠ ವಿಚಾರಣೆ ನಡೆಸಲಿದೆ.
ದೆಹಲಿ, ಹರಿಯಾಣ, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ಅರಾವಳಿ ಪರ್ವತಶ್ರೇಣಿ ಹಬ್ಬಿಕೊಂಡಿದೆ. ಗಣಿಗಾರಿಕೆ ನಿಯಂತ್ರಣದ ಉದ್ದೇಶಕ್ಕಾಗಿ ಅರಾವಳಿ ಬೆಟ್ಟಗಳ ಭಾಗವಾಗಿ ಭೂರೂಪಗಳನ್ನು ವರ್ಗೀಕರಿಸಲು ಎತ್ತರ-ಸಂಬಂಧಿತ ವ್ಯಾಖ್ಯಾನವನ್ನು ಸುಪ್ರೀಂ ಕೋರ್ಟ್ ಈ ಹಿಂದೆ ಅನುಮೋದಿಸಿತ್ತು.
ಮೇ 2024ರಲ್ಲಿ ಅರಾವಳ್ಳಿಯಲ್ಲಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ, “ಅರಾವಳ್ಳಿ ಬೆಟ್ಟಗಳು/ಪರ್ವತಶ್ರೇಣಿಗಳು” ಎಂಬುದಕ್ಕೆ ವಿವಿಧ ರಾಜ್ಯಗಳು ವಿಭಿನ್ನ ವ್ಯಾಖ್ಯಾನಗಳನ್ನು ಅಳವಡಿಸಿಕೊಂಡಿರುವುದನ್ನು ಗಮನಿಸಿದ್ದ ನ್ಯಾಯಾಲಯ ಪ್ರಕರಣ ಪರಿಗಣಿಸಲು ಸಮಿತಿಯೊಂದನ್ನು ರಚಿಸಿತ್ತು.
ಆ ಸಮಿತಿ ಕಳೆದ ಅಕ್ಟೋಬರ್ನಲ್ಲಿ ವರದಿ ಸಲ್ಲಿಸಿತು. ಅರಾವಳಿ ಬೆಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದ ಹಲವು ಕ್ರಮಗಳನ್ನು ಶಿಫಾರಸು ಮಾಡಿತ್ತು. ಅರಾವಳಿ ಪರ್ವತ ಶ್ರೇಣಿ ಹರಡಿಕೊಂಡಿರುವ ಜಿಲ್ಲೆಗಳಲ್ಲಿರುವ ಯಾವುದೇ ಭೂಆಕಾರ ಸ್ಥಳೀಯ ಮಟ್ಟದಿಂದ 100 ಮೀಟರ್ ಅಥವಾ ಅದಕ್ಕಿಂತ ಹೆಚ್ಚು ಎತ್ತರದಿಂದ ಕೂಡಿದ್ದರೆ, ಅದನ್ನು ಅರಾವಳಿ ಬೆಟ್ಟವೆಂದು ಪರಿಗಣಿಸಬೇಕು ಎಂದು ಸಮಿತಿ ತಿಳಿಸಿತ್ತು. ಅರಾವಳ್ಳಿ ಪರ್ವತಶ್ರೇಣಿಯನ್ನು ಪರಸ್ಪರ 500 ಮೀಟರ್ ವ್ಯಾಪ್ತಿಯೊಳಗೆ ಇರುವ ಎರಡು ಅಥವಾ ಹೆಚ್ಚು ಅರಾವಳ್ಳಿ ಬೆಟ್ಟಗಳ ಗುಂಪು ಎಂದು ಕೂಡ ಅದು ವ್ಯಾಖ್ಯಾನಿಸಿತ್ತು.
ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸಿದ್ದ ಅಂದಿನ ಸಿಜೆಐ ಬಿ ಆರ್ ಗವಾಯಿ ನೇತೃತ್ವದ ಪೀಠ. ಅರಾವಳಿ ಗಿರಿಸಾಲಿನಲ್ಲಿ ಗಣಿಗಾರಿಕೆಗೆ ಸಂಪೂರ್ಣ ನಿಷೇಧ ಹೇರದಂತೆ ತೀರ್ಪು ನೀಡಿತ್ತು. ಹಾಗೆ ಸಂಪೂರ್ಣ ನಿಷೇಧ ವಿಧಿಸುವುದು ಅಕ್ರಮ ಗಣಿಗಾರಿಕೆಗೆ ಕಾರಣವಾಗುತ್ತದೆ ಎಂದಿತ್ತು.