ಸಿಯಾಚಿನ್‌ನಲ್ಲಿ 36 ವರ್ಷಗಳ ಹಿಂದೆ ಸೇವೆ ಸಲ್ಲಿಸಿದ್ದ ಯೋಧನಿಗೆ ಅಂಗವೈಕಲ್ಯ ಪಿಂಚಣಿ ನೀಡಲು ಸುಪ್ರೀಂ ಕೋರ್ಟ್ ಆದೇಶ

ಸಿಯಾಚಿನ್ ಹಿಮನದಿ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಿದ್ದರಿಂದ ತನಗೆ ಮೂರ್ಛೆ ರೋಗ ಆರಂಭವಾಯಿತು ಎಂದು ಬಿಜೇಂದರ್ ಸಿಂಗ್ ಹೇಳಿದ್ದರು. ಆದರೆ ಹೇಳಿಕೆಯನ್ನು ಸೇನೆ ತಿರಸ್ಕರಿಸಿತ್ತು.
soldier, Supreme Court
soldier, Supreme Court
Published on

ಮೂವತ್ತಾರು ವರ್ಷಗಳ ಹಿಂದೆ ಮೂರ್ಛೆ ರೋಗಕ್ಕೆ ತುತ್ತಾಗಿ ಸೇವೆಯಿಂದ ಬಿಡುಗಡೆಯಾಗಿದ್ದ ಯೋದನಿಗೆ ಅಂಗವೈಕಲ್ಯ ಪಿಂಚಣಿ ಮತ್ತು ಬಾಕಿ ಹಣವನ್ನು ಪಾವತಿಸಲು ಸುಪ್ರೀಂ ಕೋರ್ಟ್ ಇತ್ತೀಚೆಗೆ ಭಾರತೀಯ ಸೇನೆಗೆ ಆದೇಶಿಸಿದೆ [ಬಿಜೇಂದರ್ ಸಿಂಗ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಿನ ಪ್ರಕರಣ].

ಜನವರಿ 1996 ರಿಂದ ಜೀವನಪರ್ಯಂತ ಜಾರಿಗೆ ಬರುವಂತೆ ಬಿಜೇಂದರ್ ಸಿಂಗ್ ಅವರಿಗೆ ಅಂಗವೈಕಲ್ಯ ಅಂಶದ ಆಧಾರದಲ್ಲಿ 50% ಅಂಗವೈಕಲ್ಯ ಪಿಂಚಣಿಯ ನೀಡುವಂತೆ ಸೇನೆಗೆ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಆದೇಶಿಸಿತು.

"ಬಾಕಿ ಪಾವತಿ ಮಾಡುವವರೆಗೆ ವಾರ್ಷಿಕ 6% ದರದಲ್ಲಿ ಬಡ್ಡಿ ಇರುತ್ತದೆ. ಮೇಲಿನ ನಿರ್ದೇಶನಗಳನ್ನು ಇಂದಿನಿಂದ ಮೂರು ತಿಂಗಳೊಳಗೆ ಪ್ರತಿವಾದಿಗಳು ಪಾಲಿಸಬೇಕು" ಎಂದು ನ್ಯಾಯಾಲಯ ಆದೇಶಿಸಿದೆ.

ಸಿಯಾಚಿನ್ ಹಿಮನದಿ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಿದ್ದರಿಂದ ತನಗೆ ಮೂರ್ಛೆ ರೋಗ ಆರಂಭವಾಯಿತು ಎಂದು ಸಿಂಗ್ ಹೇಳಿದ್ದರು; ಆದರೆ ಹೇಳಿಕೆಯನ್ನು ಸೇನೆ ತಿರಸ್ಕರಿಸಿತ್ತು.

Also Read
ಉತ್ತರಪ್ರದೇಶ ಪೊಲೀಸರ ಕ್ರೂರ ಹಿಂಸೆ ಪ್ರಶ್ನಿಸಿ ಅಲಾಹಾಬಾದ್ ಹೈಕೋರ್ಟ್ ಮೊರೆ ಹೋದ ಮಾಜಿ ಯೋಧ

ಸಶಸ್ತ್ರ ಪಡೆಗಳ ನೈತಿಕ ಸ್ಥೈರ್ಯಕ್ಕೆ ಸಂಪೂರ್ಣ ಮತ್ತು ಎದೆಗುಂದಿಸದಂತಹ ರಕ್ಷಣೆ ಅಗತ್ಯ. ಯಾವುದೇ ನ್ಯೂನತೆಗೆ ಪರಿಹಾರ ದೊರೆಯದೆ ಸೇವಾವಧಿ ಕಳೆದುಕೊಂಡರೆ ಆಗ ಈ ನೈತಿಕ ಸ್ಥೈರ್ಯ ತೀವ್ರವಾಗಿ ಕುಸಿಯುತ್ತದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿತು.

ಸೇವೆಗೆ ಸೇರುವ ಸಮಯದಲ್ಲಿ ಸದಸ್ಯರು ಯಾವುದೇ ನಿರ್ದಿಷ್ಟ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ವೈದ್ಯಕೀಯ ಮಂಡಳಿಯ ವರದಿ ಇಲ್ಲದಿದ್ದರೆ, ಸೇನೆಗೆ ಸಲ್ಲಿಸಿದ ಸೇವೆಯ ಕಾರಣದಿಂದಾಗಿ ಸದಸ್ಯರು ಆ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಊಹಿಸಬೇಕು ಎಂದು ಕಾನೂನು ಸ್ಪಷ್ಟವಾಗಿ ಹೇಳುತ್ತದೆ ಎಂದು ನ್ಯಾಯಾಲಯ ವಿವರಿಸಿದೆ.

"ಆದ್ದರಿಂದ, ಈ ರೋಗ ಸೇನಾ ಸೇವೆಯಿಂದ ಉಂಟಾಗುವುದಿಲ್ಲ ಅಥವಾ ಉಲ್ಬಣಗೊಂಡಿಲ್ಲ ಎಂದು ಸಾಬೀತುಪಡಿಸುವ ಹೊರೆ ಸಂಪೂರ್ಣವಾಗಿ ಉದ್ಯೋಗದಾತರ ಮೇಲೆ ಇರುತ್ತದೆ. ಇದಲ್ಲದೆ, ಸಶಸ್ತ್ರ ಪಡೆಗಳ ಸದಸ್ಯರನ್ನು ಸೇವೆಯಿಂದ ಅಮಾನ್ಯಗೊಳಿಸಲಾದ ಯಾವುದೇ ಕಾಯಿಲೆ ಅಥವಾ ಅಂಗವೈಕಲ್ಯವು 20% ಕ್ಕಿಂತ ಹೆಚ್ಚಿದೆ ಎಂದು ಭಾವಿಸಿ 50% ಅಂಗವೈಕಲ್ಯ ಪಿಂಚಣಿ ಒದಗಿಸಬೇಕಾಗುತ್ತದೆ" ಎಂದು ನ್ಯಾಯಾಲಯ ಹೇಳಿದೆ.

Kannada Bar & Bench
kannada.barandbench.com