ಜಮ್ಮು ಮತ್ತು ಕಾಶ್ಮೀರದ 5 ಶಾಸಕರನ್ನು (ಎಂಎಲ್ಎ) ವಿಧಾನಸಭೆಗೆ ನಾಮನಿರ್ದೇಶನ ಮಾಡುವ ಲೆಫ್ಟಿನೆಂಟ್ ಗವರ್ನರ್ ಅಧಿಕಾರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಮೊದಲು ಜಮ್ಮು, ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಪಿ ವಿ ಸಂಜಯ್ ಕುಮಾರ್ ಅವರಿದ್ದ ಪೀಠ ಅರ್ಜಿದಾರರಿಗೆ ತಿಳಿಸಿದೆ.
ಹೈಕೋರ್ಟ್ಗೆ ಅರ್ಜಿ ಸಲ್ಲಿಸದೆ ನೇರವಾಗಿ ಸುಪ್ರೀಂ ಕೋರ್ಟ್ಗೆ ಬರುವ ಅನೇಕ ಪ್ರಕರಣಗಳಲ್ಲಿ ನಾವು ಅನೇಕ ಸಂಗತಿಗಳು ಹಾಗೇ ಉಳಿದುಬಿಡುವುದನ್ನು ಕಂಡಿದ್ದೇವೆ ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರಾದ ರವೀಂದರ್ ಕುಮಾರ್ ಶರ್ಮಾ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ಚುನಾಯಿತರಾಗದ ಲೆ. ಗವರ್ನರ್ ಅವರು ಮಾಡಿದ ನಾಮನಿರ್ದೇಶನ ಚುನಾವಣಾ ಫಲಿತಾಂಶಕ್ಕೆ ಅಡ್ಡಿಯಾಗಬಲ್ಲದು ಎಂದು ಹೇಳಿದರು.
ಜಮ್ಮು ಕಾಶ್ಮೀರ ವಿಧಾನಸಭೆ 90 ಚುನಾಯಿತ ಸದಸ್ಯರನ್ನು ಹೊಂದಿದೆ. ಸ್ಥಳಾಂತರಗೊಂಡ ಕಾಶ್ಮೀರಿ ಜನತೆ- ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಜನರನ್ನು ಪ್ರತಿನಿಧಿಸಲೆಂದು ಲೆ. ಗವರ್ನರ್ ಅವರು 5 ಶಾಸಕರನ್ನು ನಾಮನಿರ್ದೇಶನ ಮಾಡಲು 2019ರ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆ ಅನುವು ಮಾಡಿಕೊಡುತ್ತದೆ. ಇದರಿಂದ ವಿಧಾನಸಭೆಯಲ್ಲಿ ಬಹುಮತ 45ರಿಂದ 48ಕ್ಕೆ ಏರುತ್ತದೆ.
ಈಚೆಗೆ ಬಂದ ಚುನಾವಣಾ ಫಲಿತಾಂಶದ ಪ್ರಕಾರ ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್ ಹಾಗೂ ಸಿಪಿಎಂ ಒಳಗೊಂಡ ಇಂಡಿಯಾ ಒಕ್ಕೂಟ ವಿಧಾನಸಭೆಯಲ್ಲಿ 49 ಸ್ಥಾನ ಪಡೆದುಕೊಂಡಿತ್ತು. 5 ಸದಸ್ಯರನ್ನು ನಾಮನಿರ್ದೇಶನ ಮಾಡಿ ಗಳಿಸುವ 48 ಸ್ಥಾನಗಳಿಗಿಂತಲೂ ಇಂಡಿಯಾ ಒಕ್ಕೂಟದ ಬಹುಮತ ಹೆಚ್ಚಿದೆ.