ʼಒಬ್ಬ ವ್ಯಕ್ತಿಗೆ ಒಂದೇ ಕಾರುʼ ನೀತಿ ಜಾರಿಗೆ ತರುವುದೂ ಸೇರಿದಂತೆ ವಾಹನ ಸಂಖ್ಯೆ ನಿಯಂತ್ರಿಸಲು ಮಾರ್ಗಸೂಚಿ ರೂಪಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಪರಿಗಣಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ [ಸುನಾಮಿ ಆನ್ ರೋಡ್ಸ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಅರ್ಜಿಯಲ್ಲಿ ಮಾಡಿರುವ ಮನವಿ ಸರ್ಕಾರದ ವ್ಯಾಪ್ತಿಗೆ ಬರುತ್ತದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾ. ಪಿ ಎಸ್ ನರಸಿಂಹ ಅವರಿದ್ದ ಪೀಠ ಹೇಳಿತು.
ದೇಶದಲ್ಲಿ ಸುಮಾರು 1.5 ಕೋಟಿ ಕಾರುಗಳನ್ನು ಮಾರಾಟ ಮಾಡಲಾಗಿದೆ ಎಂದು ಸರ್ಕಾರೇತರ ಸಂಸ್ಥೆ ಸುನಾಮಿ ಆನ್ರೋಡ್ಸ್ ಆತಂಕ ವ್ಯಕ್ತಪಡಿಸಿತ್ತು.
ಅರ್ಜಿದಾರರು ತಿಳಿಸಿರುವ ವಾಸ್ತವಾಂಶಗಳ ಬಗ್ಗೆ ಅನುಮಾನ ವ್ಯಕ್ತಪಡಿಸವುದಿಲ್ಲ ಎಂದ ಪೀಠ ಆದರೆ ಇದು ನೀತಿ ನಿರೂಪಣೆಗೆ ಸಂಬಂಧಿಸಿದ ವಿಚಾರವಾಗಿದ್ದು ಆಡಳಿತ, ನೀತಿ ವಿಚಾರಗಳಲ್ಲಿ ತಾನು ಮಧ್ಯ ಪ್ರವೇಶಿಸುವುದಿಲ್ಲ. ಕಾನೂನಿನ ಅನ್ವಯ ಅರ್ಜಿದಾರರು ತಮ್ಮ ಸಮಸ್ಯೆಯನ್ನು ಸೂಕ್ತ ಪ್ರಾಧಿಕಾರದ ಮುಂದೆ ಒಯ್ಯಲು ಸ್ವತಂತ್ರರು ಎಂದು ಆದೇಶಿಸಿತು.