ಅದ್ವೈತ ತತ್ವವನ್ನು ಪಾಲಿಸುವ ಸ್ಮಾರ್ತ ಬ್ರಾಹ್ಮಣರನ್ನು ಪ್ರತ್ಯೇಕ ಧಾರ್ಮಿಕ ಪಂಗಡವಾಗಿ ಘೋಷಿಸಿ ಅವರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕೆಂಬ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ತಮ್ಮ ಮನವಿ ತಿರಸ್ಕರಿಸಿದ ಮದ್ರಾಸ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ತಮಿಳುನಾಡಿನಲ್ಲಿ ನೆಲೆಸಿರುವ ಸ್ಮಾರ್ತ ಬ್ರಾಹ್ಮಣರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಎಸ್ ರವೀಂದ್ರ ಭಟ್ ಅವರಿದ್ದ ಪೀಠ ತಿರಸ್ಕರಿಸಿತು.
ಮನವಿಯನ್ನು ಪುರಸ್ಕರಿಸಿದರೆ, "ನಾವು ಅಲ್ಪಸಂಖ್ಯಾತರ ದೇಶವಾಗಲಿದ್ದೇವೆ," ಏಕೆಂದರೆ ಅದ್ವೈತ ತತ್ವದ ಅನುಯಾಯಿಗಳು ಅನೇಕರಿದ್ದಾರೆ ಎಂದು ಇದೇ ವೇಳೆ ಪೀಠ ಹೇಳಿತು.
ಸ್ಮಾರ್ತ ಬ್ರಾಹ್ಮಣರು ಅಥವಾ ಇನ್ನಾವುದೇ ಹೆಸರಿನ ಸಮಾನ ಸಂಘಟನೆ ಇಲ್ಲ ಎಂದು ಹೇಳಿ ತನ್ನ ಮುಂದೆ ಸಲ್ಲಿಸಿದ್ದ ಮನವಿಯನ್ನು ಈ ವರ್ಷದ ಜೂನ್ನಲ್ಲಿ ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿತ್ತು. ಸ್ಮಾರ್ತ ಬ್ರಾಹ್ಮಣರು ಒಂದು ಜಾತಿ/ ಸಮುದಾಯವಾಗಿದ್ದು ಇತರ ಬ್ರಾಹ್ಮಣರಿಂದ ತಮ್ಮನ್ನು ಪ್ರತ್ಯೇಕಿಸುವಂತಹ ಪ್ರತ್ಯೇಕತೆ ಈ ಸಮುದಾಯಕ್ಕಿಲ್ಲ ಎಂದು ಅದು ಹೇಳಿತ್ತು.