
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಾಣಿಜ್ಯ ವಿಭಾಗವಾದ ಅಂತರಿಕ್ಷ್ ಕಾರ್ಪೊರೇಷನ್ ಲಿಮಿಟೆಡ್ ₹317.5 ಕೋಟಿ ಮೌಲ್ಯವರ್ಧಿತ ತೆರಿಗೆ ನೀಡಬೇಕೆಂದು ಕೋರಿ ಕರ್ನಾಟಕದ ವಾಣಿಜ್ಯ ತೆರಿಗೆ ಇಲಾಖೆ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಈಚೆಗೆ ತಡೆ ನೀಡಿದೆ [ಅಂತರಿಕ್ಷ್ ಕಾರ್ಪೊರೇಷನ್ ಮತ್ತು ತೆರಿಗೆ ಸಹಾಯಕ ಆಯುಕ್ತರು (ಜಾರಿ ವಿಭಾಗ) ನಡುವಣ ಪ್ರಕರಣ]
ಆಗಸ್ಟ್ 2008 ರಿಂದ ಮಾರ್ಚ್ 2014 ರ ಅವಧಿಗೆ ಉಪಗ್ರಹ ಟ್ರಾನ್ಸ್ಪಾಂಡರ್ ಗುತ್ತಿಗೆಗಾಗಿ ಅಂತರಿಕ್ಷ್ ಸಂಗ್ರಹಿಸಿದ್ದ ಶುಲ್ಕಕ್ಕೆ ಸಂಬಂಧಿಸಿದಂತೆ ಅದು ₹634.89 ಕೋಟಿ ಮೌಲ್ಯವರ್ಧಿತ ತೆರಿಗೆಯ (ವ್ಯಾಟ್) ಶೇ 50ರಷ್ಟು ಭಾಗವನ್ನು ನೀಡಬೇಕಿತ್ತು.
ಏಳು ದಿನಗಳಲ್ಲಿ ಶೇಕಡಾ 50ರಷ್ಟು ಎಂದರೆ ₹ 317 ಕೋಟಿ ರೂಪಾಯಿಯನ್ನು ಅಂತರಿಕ್ಷ್ ಪಾವತಿಸಬೇಕು ಎಂದು ಸೂಚಿಸಿ ಜೂನ್ 9ರಂದು ಕರ್ನಾಟಕ ಸರ್ಕಾರ ಸೂಚಿಸಿತ್ತು.
ಗಮನಾರ್ಹ ಅಂಶವೆಂದರೆ, ಸುಪ್ರೀಂ ಕೋರ್ಟ್ ಏಪ್ರಿಲ್ 2005 ಮತ್ತು ಜುಲೈ 2008ರ ಅವಧಿಗೆ ಕೋರಲಾಗಿದ್ದ ಇದೇ ರೀತಿಯ ತೆರಿಗೆ ಬೇಡಿಕೆಯನ್ನು 2010 ರಲ್ಲಿ ಸುಪ್ರೀಂ ಕೋರ್ಟ್ ತಡೆಹಿಡಿದಿತ್ತು.
ತೆರಿಗೆ ಸಂಗ್ರಹಿಸಬೇಕು ಎಂಬ ಆದೇಶಕ್ಕೆ ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ತಡೆಯಾಜ್ಞೆ ಆಗಸ್ಟ್ 2008 ರಿಂದ ಮಾರ್ಚ್ 2014 ರವರೆಗಿನ ಅವಧಿಗೂ ಅನ್ವಯವಾಗುತ್ತದೆಯೇ ಎಂಬುದರ ಕುರಿತು ಸ್ಪಷ್ಟೀಕರಣ ಕೋರಿ ಅಂತರಿಕ್ಷ್ ಸಲ್ಲಿಸಿದ್ದ ವಾದಕಾಲೀನ ಅರ್ಜಿ ಸಲ್ಲಿಸಿತ್ತು.
ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಮನಮೋಹನ್ ಅವರಿದ್ದ ಪೀಠ ಜೂನ್ 12 ರಂದು ಅಂತರಿಕ್ಷ್ಗೆ ಮಧ್ಯಂತರ ಪರಿಹಾರ ನೀಡಿದೆ.
ಮುಂದಿನ ವಿಚಾರಣೆಯವರೆಗೆ ಕರ್ನಾಟಕ ಸರ್ಕಾರ ತನ್ನ ಆದೇಶ ಜಾರಿಗೆ ತರುವಂತಿಲ್ಲ ಎಂದು ತಡೆ ನೀಡಿರುವ ನ್ಯಾಯಾಲಯ ಆಗಸ್ಟ್ ಎರಡನೇ ಪ್ರಕರಣ ಆಲಿಸುವುದಾಗಿ ತಿಳಿಸಿದೆ.
ಅಂತರಿಕ್ಷ್ನ ಉಪಗ್ರಹ ಟ್ರಾನ್ಸ್ಪಾಂಡರ್ ಗುತ್ತಿಗೆಯು ವ್ಯಾಟ್ಗೆ ಒಳಪಡುವ "ಸರಕುಗಳನ್ನು ಬಳಸುವ ಹಕ್ಕಿನ ವರ್ಗಾವಣೆ" ಅಥವಾ ಸೇವಾ ತೆರಿಗೆ ಪದ್ಧತಿಯಡಿಯಲ್ಲಿ ಈಗಾಗಲೇ ತೆರಿಗೆ ವಿಧಿಸಲಾದ ಶುದ್ಧ ಸೇವೆಯಾಗಿದೆಯೇ ಎಂಬುದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಅಂತರಿಕ್ಷ್ ತನ್ನ ವಾದದಲ್ಲಿ, ತಾನು ಖಾಸಗಿ ಗ್ರಾಹಕರಿಗೆ ಸಿಗ್ನಲ್ ಪ್ರಸರಣವನ್ನು ಸುಗಮಗೊಳಿಸುವ ಕೆಲಸವನ್ನು ಮಾತ್ರವೇ ಮಾಡುತ್ತೇನೆ, ಉಪಗ್ರಹವು ಸರ್ಕಾರದ ಸಂಪೂರ್ಣ ನಿಯಂತ್ರಣದಲ್ಲಿಯೇ ಉಳಿದಿರುತ್ತದೆ ಎಂದು ಹೇಳಿದೆ. ಇಸ್ರೋ ಮತ್ತು ಬಾಹ್ಯಾಕಾಶ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತ ಸರ್ಕಾರದ ಸಂಪೂರ್ಣ ಸ್ವಾಮ್ಯದ ಉದ್ಯಮ ತಾನು ಎಂದು ಅದು ಹೇಳಿದೆ.
[ತೀರ್ಪಿನ ಪ್ರತಿ]