ಕಮಲನಾಥ್‌ ತಾರಾ ಪ್ರಚಾರಕ ಪಟ್ಟಕ್ಕೆ ಕೊಕ್: ಇಸಿಐಗೆ ಪಕ್ಷದ ನಾಯಕನ ನಿರ್ಧರಿಸುವ ಅಧಿಕಾರ ಕೊಟ್ಟವರಾರು? ಸುಪ್ರೀಂ ಕಿಡಿ

ಪ್ರತಿಕ್ರಿಯೆ ದಾಖಲಿಸಲು ಚುನಾವಣಾ ಆಯೋಗಕ್ಕೆ ಕಾಲಾವಕಾಶ ನೀಡಿರುವ ನ್ಯಾಯಾಲಯವು ಮುಂದಿನ ಆದೇಶದವರೆಗೆ ಆಯೋಗದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.
ಕಮಲನಾಥ್‌ ತಾರಾ ಪ್ರಚಾರಕ ಪಟ್ಟಕ್ಕೆ ಕೊಕ್: ಇಸಿಐಗೆ ಪಕ್ಷದ ನಾಯಕನ ನಿರ್ಧರಿಸುವ ಅಧಿಕಾರ ಕೊಟ್ಟವರಾರು? ಸುಪ್ರೀಂ ಕಿಡಿ

ಮಧ್ಯಪ್ರದೇಶ ವಿಧಾನಸಭೆಗೆ ಮಂಗಳವಾರ ನಡೆಯಲಿರುವ ಉಪಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಕಮಲನಾಥ್‌ ಅವರ ಹೆಸರನ್ನು ತಾರಾ ಪ್ರಚಾರಕರ ಪಟ್ಟಿಯಿಂದ ಕೈಬಿಟ್ಟು ಅಕ್ಟೋಬರ್‌ 30ರಂದು ಆದೇಶಿಸಿದ್ದ ಭಾರತೀಯ ಚುನಾವಣಾ ಆಯೋಗದ (ಇಸಿಐ) ನಿರ್ಧಾರಕ್ಕೆ ಸುಪ್ರೀಂ ಕೋರ್ಟ್‌ಸೋಮವಾರ ತಡೆಯಾಜ್ಞೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್‌ ಅವರನ್ನೊಳಗೊಂಡ ಪೀಠವು ಅಧಿಕಾರ ವ್ಯಾಪ್ತಿ ಮೀರಿ ವರ್ತಿಸಿದ ಇಸಿಐಗೆ ಲಗಾಮು ಹಾಕಿದೆ.

ಉಪಚುನಾವಣೆಯು ಮಂಗಳವಾರಕ್ಕೆ ನಿಗದಿಯಾಗಿದ್ದು, ಪ್ರಚಾರ ಮುಗಿದಿರುವುದರಿಂದ ವಿಷಯ ಪರಿಣಾಮಕಾರಿಯಲ್ಲ ಎಂದು ಚುನಾವಣಾ ಆಯೋಗದ ಪರ ಹಿರಿಯ ವಕೀಲ ರಾಕೇಶ್‌ ದ್ವಿವೇದಿ ಹೇಳಿದರು.

ಅದಾಗ್ಯೂ ಮುಖ್ಯ ನ್ಯಾಯಮೂರ್ತಿ ಹೀಗೆ ಹೇಳಿದರು:

“ನಿಮ್ಮ ಆದೇಶವನ್ನು ನಾವು ತಡೆಹಿಡಿಯುತ್ತಿದ್ದೇವೆ. ಕಾಯಿದೆಯ ಸೆಕ್ಷನ್‌ 77ರ ಅನ್ವಯ ತಾರಾ ಪ್ರಚಾರಕ ಸ್ಥಾನದಿಂದ ಅಭ್ಯರ್ಥಿಯನ್ನು ಅಥವಾ ಪಕ್ಷದ ನಾಯಕರೊಬ್ಬರನ್ನು ಕೈಬಿಡುವ ಅಧಿಕಾರವನ್ನು ನಿಮಗೆ (ಇಸಿಐ) ನೀಡಿದರವರು ಯಾರು? ನಾವು ಅದನ್ನು ಓದಿದ್ದೇವೆ.”
ಸಿಜೆಐ ಎಸ್‌ ಎ ಬೊಬ್ಡೆ

ಇಸಿಐ ಆದೇಶಕ್ಕೆ ತಡೆಯಾಜ್ಞೆ ನೀಡದೇ ಪ್ರತಿಕ್ರಿಯೆ ದಾಖಲಿಸಲು ಸೂಚಿಸುವಂತೆ ನ್ಯಾಯಪೀಠಕ್ಕೆ ಇಸಿಐ ಪರ ವಕೀಲ ದ್ವಿವೇದಿ ಮನವಿ ಮಾಡಿದರು. ಇದಕ್ಕೆ ನ್ಯಾಯಾಲಯವು ಇಸಿಐ ಪ್ರತಿಕ್ರಿಯೆ ದಾಖಲಿಸಲೇಬೇಕು ಮತ್ತು ನಾವು ಅದರ ನಿರ್ಧಾರವನ್ನು ಮುಂದಿನ ಆದೇಶದವರೆಗೆ ತಡೆಹಿಡಿಯುತ್ತೇವೆ ಎಂದಿತು.

“ಈ ವಿಚಾರಕ್ಕೆ ಸಂಬಂಧಿಸಿದಂತೆ ಕಮಲನಾಥ್‌ ಅವರಿಗೆ ಯಾವುದೇ ನೋಟಿಸ್‌ ನೀಡಲಾಗಿಲ್ಲ. ಏಕಮುಖವಾಗಿ ಇಸಿಐ ಆದೇಶ ಹೊರಡಿಸಿದೆ” ಎಂದು ಕಮಲನಾಥ್‌ ಅವರನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಕಪಿಲ್‌ ಸಿಬಲ್‌ ವಾದಿಸಿದರು.

Also Read
ಕೋವಿಡ್ ಶಿಷ್ಟಾಚಾರ ಉಲ್ಲಂಘಿಸಿದ ಆರೋಪ-ಕಮಲನಾಥ್, ನರೇಂದ್ರ ತೋಮರ್ ವಿರುದ್ಧ ಎಫ್ಐಆರ್‌ಗೆ ಮಧ್ಯಪ್ರದೇಶ ಹೈಕೋರ್ಟ್ ಸೂಚನೆ

ನಿರಂತರವಾಗಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ತಮಗೆ ನೀಡಿದ ಎಚ್ಚರಿಕೆಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕಮಲನಾಥ್‌ ಅವರಿಗಿದ್ದ ತಾರಾ ಪ್ರಚಾರಕ ಸ್ಥಾನವನ್ನು ಹಿಂಪಡೆಯಲಾಗಿದೆ ಎಂದು ಇಸಿಐ ತನ್ನ ಆದೇಶದಲ್ಲಿ ಹೇಳಿತ್ತು.

“ಸಹಜ ನ್ಯಾಯಕ್ಕೆ ವಿರುದ್ಧವಾಗಿ ಆದೇಶ ಹೊರಡಿಸಲಾಗಿದ್ದು, ಇದು ನ್ಯಾಯದ ನಿರಾಕರಣೆಯಾಗಿರುವುದರಿಂದ ರದ್ದತಿಗೆ ಅರ್ಹವಾಗಿದೆ. ಆಕ್ಷೇಪಿತ ಆದೇಶ ಹೊರಡಿಸುವುದಕ್ಕೂ ಮುನ್ನ ಅರ್ಜಿದಾರರಿಗೆ ನೋಟಿಸ್‌ ನೀಡದಿರುವುದು ಸಾಮಾನ್ಯ ನ್ಯಾಯದಾನದ ತತ್ವಕ್ಕೆ ವಿರುದ್ಧವಾಗಿದೆ.”
ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿರುವ ಅರ್ಜಿ

ಕಮಲ್‌ನಾಥ್‌ ತಮ್ಮ ಅರ್ಜಿಯಲ್ಲಿ “ಬಿಜೆಪಿ ನಾಯಕರು ಮಾದರಿ ನೀತಿ ಸಂಹಿತೆ ಉಲ್ಲಂಘಿಸುವ ಹೇಳಿಕೆಗಳನ್ನು ನಿರಂತರವಾಗಿ ನೀಡಿದರೂ ಕ್ರಮಕೈಗೊಳ್ಳಲಾಗಿಲ್ಲ,” ಎಂದಿದ್ದಾರೆ. ಅಲ್ಲದೆ,‌ “ತಾರಾ ಪ್ರಚಾರಕ ಪಟ್ಟಿಯಿಂದ ಅರ್ಜಿದಾರರನ್ನು (ಕಮಲ್‌ನಾಥ್) ಏಕಾಏಕಿ ತೆಗೆಯಲಾಗದು. ಪ್ರಜಾಪ್ರತಿನಿಧಿ ಕಾಯಿದೆ 1951ರ ಸೆಕ್ಷನ್‌ 77(1)ರ ಶಾಸನಬದ್ಧ ಚೌಕಟ್ಟು ಅಂಥ ಅಧಿಕಾರವನ್ನು ಇಸಿಐಗೆ ನೀಡಿಲ್ಲ” ಎಂದೂ ಅರ್ಜಿಯಲ್ಲಿ ತಿಳಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com