ಪಶ್ಚಿಮ ಬಂಗಾಳ ಪೊಲೀಸರು ಒಪ್ಇಂಡಿಯಾ ಸಂಪಾದಕ ನೂಪುರ್ ಶರ್ಮಾ ವಿರುದ್ಧ ದಾಖಲಾಗಿರುವ ಪ್ರಥಮ ಮಾಹಿತಿ ವರದಿಗೆ (ಎಫ್ಐಆರ್) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ.
ಪ. ಬಂಗಾಳದಲ್ಲಿ 2020ರಲ್ಲಿ ನಡೆದ ತೆಲಿನೀಪರಾ ಗಲಭೆ ಕುರಿತು ಒಪಿಂಡಿಯಾ ಮಾಡಿದ ವರದಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಇದನ್ನು ಪ್ರಶ್ನಿಸಿ ಶರ್ಮಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸಂಜಯ್ ಕಿಶನ್ ಕೌಲ್ ಮತ್ತು ಎಂ ಎಂ ಸುಂದರೇಶ್ ಅವರಿದ್ದ ಪೀಠ ಈ ಆದೇಶ ನೀಡಿದೆ. ಭದ್ರೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ಸಂಖ್ಯೆ 140/2020ರ ವಿಚಾರಣೆಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಳ್ಳಬಾರದು ಅದು ಸೂಚಿಸಿದೆ.
ಒಪ್ಇಂಡಿಯಾ ವಿರುದ್ಧ ದುರುದ್ದೇಶಪೂರ್ವಕವಾಗಿ ದಾಖಲಾದ ನಾಲ್ಕನೇ ಎಫ್ಐಆರ್ ಇದು ಎಂದು ಅರ್ಜಿದಾರರು ಹೇಳಿದ್ದಾರೆ. ಜೂನ್ 2020 ರಲ್ಲಿ, ಪಶ್ಚಿಮ ಬಂಗಾಳ ಸರ್ಕಾರವು ನಾಲ್ಕು ವ್ಯಕ್ತಿಗಳ ವಿರುದ್ಧ ಸಲ್ಲಿಸಿದ ಮೂರು ಎಫ್ಐಆರ್ಗಳಿಗೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು, ಅವರಲ್ಲಿ ಮೂವರು ಒಪ್ಇಂಡಿಯಾದಲ್ಲಿ ಪ್ರಕಟಿಸಿದ ಲೇಖನಗಳೊಂದಿಗೆ ನಂಟು ಹೊಂದಿದ್ದರು.
ಮುಖ್ಯ ರಿಟ್ ಅರ್ಜಿಯಲ್ಲಿ ನೀಡಲಾದ ಮಧ್ಯಂತರ ಆದೇಶಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಶುಕ್ರವಾರ ನೀಡಿದ ಆದೇಶದಲ್ಲಿ ನ್ಯಾಯಾಲಯ ಹೇಳಿದೆ. ಪ್ರಕರಣವನ್ನು ಬರುವ ನವೆಂಬರ್ ತಿಂಗಳ ಬೇರೆ ಬೇರೆ ದಿನದಲ್ಲಿ ವಿಚಾರಣೆಗೆ ಪಟ್ಟಿ ಮಾಡಲಾಗುತ್ತದೆ. ಶರ್ಮಾ ಪರವಾಗಿ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ಮತ್ತು ವಕೀಲ ರವಿ ಶರ್ಮಾ ಹಾಜರಾದರು.